ಮಾಡು ವಿಶ್ವೇದೇವರಿಬ್ಬರ
ರೂಢರೀ ದೂರ್ವಾಸಧೌಮ್ಯರ
ನೋಡಿ ಮಾಡೈ ಮುಖ್ಯಕ್ಷಣದಲಿ ವ್ಯಾಸಕೌಶಿಕರ
ಮಾಡು ಪ್ರಪಿತಾಮಹರ ಠಾವಿಗೆ
ಬೇಡಿಕೊಳ್ ಜೈಮಿನಿಯನತಿಥಿಗೆ
ಮಾಡು ನಮ್ಮನು ಶ್ರಾದ್ಧರಕ್ಷೆಗೆ ಭೂಪ ಕೇಳೆಂದ (ಅರಣ್ಯ ಪರ್ವ, ೩ ಸಂಧಿ, ೨ ಪದ್ಯ)
ತಾತ್ಪರ್ಯ:
ಶ್ರೀಕೃಷ್ಣನು ಯುಧಿಷ್ಠಿರನಿಗೆ ಶ್ರಾದ್ಧದ ಕಾರ್ಯಕ್ಕೆ ಯಾರನ್ನು ಆಹ್ವಾನಿಸಲು ತಿಳಿಸಿದನು. ದೂರ್ವಾಸರು ಮತ್ತು ಧೌಮ್ಯರನ್ನು ವಿಶ್ವೇದೇವ ಸ್ಥಾನಕ್ಕೆ ಬೇಡಿಕೊಳ್ಳಲು, ವ್ಯಾಸ ಮತ್ತು ಕೌಶಿಕರನ್ನು ಪಿತೃ, ಪಿತಾಮಹ ಸ್ಥಾನಕ್ಕೆ, ಪ್ರಪಿತಾಮಹಸ್ಥಾನಕ್ಕೆ ಜೈಮಿನಿ ಮುನಿಗಳನ್ನು ಬೇಡಿಕೋ, ಹಾಗು ನನ್ನನ್ನು ವಿಷ್ಣು ಸ್ಥಾನಕ್ಕೆ ಕರೆ ಎಂದು ಕೃಷ್ಣನು ತಿಳಿಸಿದನು.
ಅರ್ಥ:
ಮಾಡು: ನೆರವೇರಿಸು; ರೂಢ: ಬಳಕೆಯಲ್ಲಿರುವ; ನೋಡು: ವೀಕ್ಷಿಸು; ಮುಖ್ಯ: ಪ್ರಮುಖ; ಪ್ರಪಿತಾಮಹ: ಅಜ್ಜನ ತಂದೆ, ಮುತ್ತಾತ; ಠಾವು: ಸ್ಥಳ; ಬೇಡು: ಕೇಳು; ಅತಿಥಿ: ಆಮಂತ್ರಣವನ್ನು ವಿಲ್ಲದ ಬರುವ ವ್ಯಕ್ತಿ; ರಕ್ಷೆ: ಕಾಪು, ಕಾಯುವಿಕೆ; ಭೂಪ: ರಾಜ;
ಪದವಿಂಗಡಣೆ:
ಮಾಡು +ವಿಶ್ವೇದೇವರ್+ಇಬ್ಬರ
ರೂಢರ್+ಈ+ ದೂರ್ವಾಸ+ಧೌಮ್ಯರ
ನೋಡಿ ಮಾಡೈ ಮುಖ್ಯ+ಕ್ಷಣದಲಿ+ ವ್ಯಾಸ+ಕೌಶಿಕರ
ಮಾಡು +ಪ್ರಪಿತಾಮಹರ+ ಠಾವಿಗೆ
ಬೇಡಿಕೊಳ್+ ಜೈಮಿನಿಯನ್+ಅತಿಥಿಗೆ
ಮಾಡು +ನಮ್ಮನು +ಶ್ರಾದ್ಧರಕ್ಷೆಗೆ+ ಭೂಪ +ಕೇಳೆಂದ
ಅಚ್ಚರಿ:
(೧) ಮುನಿಗಳ ಹೆಸರನ್ನು ಹೇಳಿರುವ ಪರಿ – ದೂರ್ವಾಸ, ಧೌಮ್ಯ, ವ್ಯಾಸ, ಕೌಶಿಕ, ಜೈಮಿನಿ