ಶೋಕವಡಗಿದುದವರಿಗಂತ
ರ್ವ್ಯಾಕುಳತೆ ಬೀಳ್ಕೊಂಡುದಹುದಿ
ನ್ನೇಕೆ ಸಂವೇಶಾನುಭೂತಾನುಭವ ದುರ್ವ್ಯಸನ
ಸಾಕದಂತಿರಲಿನ್ನು ಬಿಡು ನೀ
ಸಾಕಿತಕೆ ಫಲವೆನಿಸಿ ರಜನಿಯೊ
ಳಾ ಕುಠಾರರ ತಲೆಗಲನು ತಹೆನೆಂದನಾ ದ್ರೌಣಿ (ಗದಾ ಪರ್ವ, ೮ ಸಂಧಿ, ೫೯ ಪದ್ಯ)
ತಾತ್ಪರ್ಯ:
ಅಶ್ವತ್ಥಾಮಾದಿಗಳ ದುಃಖವು ಅಡಗಿತು. ಮನಸ್ಸಿನ ವ್ಯಾಕುಲತೆಯು ಇಲ್ಲವಾಯಿತು. ಇನ್ನೇಕೆ ಆಗಿ ಹೋದುದನ್ನು ನೆನೆಸಿ ದುಃಖಿಸಬೇಕು? ಅದು ಹಾಗಿರಲಿ, ನೀನು ನಮ್ಮನ್ನು ಸಾಕಿದುದು ಸಾರ್ಥಕವೆನ್ನಿಸಲು, ಈ ರಾತ್ರಿ ಆ ಕುಠಾರರ ತಲೆಗಳನ್ನು ಕಡಿದು ತರುತ್ತೇನೆ ಎಂದು ಅಶ್ವತ್ಥಾಮನು ಹೇಳಿದನು.
ಅರ್ಥ:
ಶೋಕ: ದುಃಖ; ಅಡಗು: ಮುಚ್ಚು; ವ್ಯಾಕುಲ: ದುಃಖ, ವ್ಯಥೆ; ಬೀಳ್ಕೊಡು: ತೆರಳು; ಸಂವೇಶ: ಒಳಹೊಕ್ಕು; ಅನುಭೂತ: ಕಂಡು ಕೇಳಿದ, ಅನುಭವಿಸಿದ; ದುರ್ವ್ಯಸನ: ಕೆಟ್ಟ ಚಟ, ದುರಭ್ಯಾಸ; ಸಾಕು: ಸಲಹು; ಬಿಡು: ತೊರೆ; ಫಲ: ಪ್ರಯೋಜನ; ರಜನಿ: ರಾತ್ರಿ; ಕುಠಾರ: ಕೊಡಲಿ, ಗುದ್ದಲಿ; ತಲೆ: ಶಿರ; ತಹೆ: ತರುವೆ; ದ್ರೌಣಿ: ಅಶ್ವತ್ಥಾಮ;
ಪದವಿಂಗಡಣೆ:
ಶೋಕವ್+ಅಡಗಿದುದ್+ಅವರಿಗ್+ಅಂತ
ರ್ವ್ಯಾಕುಳತೆ +ಬೀಳ್ಕೊಂಡುದ್+ಅಹುದ್
ಇನ್ನೇಕೆ +ಸಂವೇಶ+ಅನುಭೂತ+ಅನುಭವ +ದುರ್ವ್ಯಸನ
ಸಾಕ್+ಅದಂತಿರಲ್+ಇನ್ನು+ ಬಿಡು +ನೀ
ಸಾಕಿತಕೆ+ ಫಲವೆನಿಸಿ +ರಜನಿಯೊಳ್
ಆ+ ಕುಠಾರರ +ತಲೆಗಳನು +ತಹೆನೆಂದನಾ +ದ್ರೌಣಿ
ಅಚ್ಚರಿ:
(೧) ಸಾಕು, ಸಾಕಿತಕೆ – ಪದಗಳ ಪ್ರಯೋಗ
(೨) ಅಶ್ವತ್ಥಾಮನ ಪ್ರಮಾಣ – ನೀ ಸಾಕಿತಕೆ ಫಲವೆನಿಸಿ ರಜನಿಯೊಳಾ ಕುಠಾರರ ತಲೆಗಲನು ತಹೆನೆಂದನಾ ದ್ರೌಣಿ