ಪದ್ಯ ೬೦: ಅಶ್ವತ್ಥಾಮ ಏನು ಯೋಚಿಸಿ ಹಿಂದಿರುಗಿದನು?

ಇವರು ತಿರುಗಿದರಿನ್ನು ದೈವ
ವ್ಯವಸಿತವೆ ಫಲಿಸುವುದಲಾ ಕೌ
ರವನ ಸಿರಿ ಪಣ್ಯಾಂಗನಾವಿಭ್ರಮವ ವರಿಸಿತಲಾ
ಅವರಿಗಿದನಾರರುಹಿದರೊ ಪಾಂ
ಡವರಿಗಾವುದು ಕೊರತೆ ಪುಣ್ಯ
ಪ್ರವರ ಗದುಗಿನ ವೀರನಾರಾಯಣನ ಕರುಣದಲಿ (ಗದಾ ಪರ್ವ, ೪ ಸಂಧಿ, ೬೦ ಪದ್ಯ)

ತಾತ್ಪರ್ಯ:
ಕೃಪ, ಅಶ್ವತ್ಥಾಮ, ಕೃತವರ್ಮರು, ದೈವ ಸಂಕಲ್ಪದಂತೆಯೇ ನಡೆದೀತು. ಅನ್ಯಥಾ ನಡೆಯಲಾರದು. ಕೌರವನ ಜಯಲಕ್ಷ್ಮಿಯ ವಿಲಾಸವು ವೇಶ್ಯೆಯ ವಿಭ್ರಮವನ್ನು ಸ್ವೀಕರಿಸಿತು. ಪುಞ ಪ್ರವರನಾದ ಗದುಗಿನ ವೀರನಾರಾಯಣನ ಕರುಣೆಯಿರುವುದರಿಂದ ಪಾಂಡವರಿಗೆ ಯಾವ ಕೊರತೆಯುಂಟಾದೀತು? ಎಂದುಕೊಂಡು ದೂರಕ್ಕೆ ಹೋದರು.

ಅರ್ಥ:
ತಿರುಗು: ಮರಳು; ಹಿಂದಿರುಗು; ದೈವ: ಭಗವಂತ; ವ್ಯವಸಿತ: ಸಂಕಲ್ಪ; ಫಲಿಸು: ಹೊರಹೊಮ್ಮು; ಸಿರಿ: ಐಶ್ವರ್ಯ; ಪಣ್ಯ: ಮಾರಾಟ, ವ್ಯಾಪಾರ; ವಿಭ್ರಮ: ಅಲೆದಾಟ, ಸುತ್ತಾಟ; ವರಿಸು: ಕೈಹಿಡಿ; ಅರುಹು: ಹೇಳು; ಕೊರತೆ: ನ್ಯೂನ್ಯತೆ; ಪುಣ್ಯ: ಸದಾಚಾರ; ಪ್ರವರ: ಶ್ರೇಷ್ಠ, ಮೊದಲಿಗ; ಕರುಣ: ದಯೆ;

ಪದವಿಂಗಡಣೆ:
ಇವರು +ತಿರುಗಿದರ್+ಇನ್ನು +ದೈವ
ವ್ಯವಸಿತವೆ +ಫಲಿಸುವುದಲಾ+ ಕೌ
ರವನ+ ಸಿರಿ+ ಪಣ್ಯಾಂಗನಾ+ವಿಭ್ರಮವ +ವರಿಸಿತಲಾ
ಅವರಿಗ್+ಇದನ್+ಆರ್+ಅರುಹಿದರೊ +ಪಾಂ
ಡವರಿಗ್+ಆವುದು +ಕೊರತೆ +ಪುಣ್ಯ
ಪ್ರವರ +ಗದುಗಿನ +ವೀರನಾರಾಯಣನ+ ಕರುಣದಲಿ

ಅಚ್ಚರಿ:
(೧) ರೂಪಕದ ಪ್ರಯೋಗ – ಕೌರವನ ಸಿರಿ ಪಣ್ಯಾಂಗನಾವಿಭ್ರಮವ ವರಿಸಿತಲಾ
(೨) ಪಾಂಡವರ ಶ್ರೇಷ್ಠತೆ – ಪಾಂಡವರಿಗಾವುದು ಕೊರತೆ ಪುಣ್ಯ ಪ್ರವರ ಗದುಗಿನ ವೀರನಾರಾಯಣನ ಕರುಣದಲಿ