ಪದ್ಯ ೧೦: ಧರ್ಮಜನು ಕೃಷ್ಣನನ್ನು ಹೇಗೆ ಹೊಗಳಿದನು?

ಆಗಲೀ ವೈಷ್ಣವಕೆ ನಮ್ಮಯ
ತಾಗು ಥಟ್ಟಿನ ರಕ್ಷೆ ತೊಡಚಿದು
ದಾಗಲಿರ್ದುದು ಪಾಶುಪತಶರವದರ ಬಳಿವಿಡಿದು
ಈಗಲೊಸಗೆಯೆ ತಮ್ಮ ಪಂಚಕ
ದಾಗು ಹೋಗನು ಹೊತ್ತು ನಡಸಿದೊ
ಡಾಗ ನಮಗಾಯ್ತೊಸಗೆಯೆಂದನು ನೃಪತಿ ವಿನಯದಲಿ (ಅರಣ್ಯ ಪರ್ವ, ೧೫ ಸಂಧಿ, ೧೦ ಪದ್ಯ)

ತಾತ್ಪರ್ಯ:
ಧರ್ಮಜನು ಸರ್ವವ್ಯಾಪಿಯಾದ ನಿನ್ನ ರಕ್ಷಣೆ ನಮಗೆ ದೊರೆತುದರಿಂದ ಪಾಶುಪತಾಸ್ತ್ರವು ಅದರೊಡನೆಯೇ ನಮಗೆ ಸಿಕ್ಕಿತು. ನಮ್ಮ ಆಗುಹೋಗುಗಳನ್ನು ನೀನು ವಹಿಸಿಕೊಂಡಾಗಲೇ ನಮಗೆ ಶುಭವುಂಟಾದವು. ನಿನಗೆ ಈಗ ಶುಭವಾಗಿದಿಯೇ ಎಂದು ಧರ್ಮಜನು ಕೇಳಿದನು.

ಅರ್ಥ:
ತಾಗು: ಸಹವಾಸ, ಮುಟ್ತು; ಥಟ್ಟು: ಪಕ್ಕ, ಗುಂಪು; ರಕ್ಷೆ: ಕಾಪು, ರಕ್ಷಣೆ; ತೊಡಚು: ಕಟ್ಟು, ಬಂಧಿಸು; ಶರ: ಬಾಣ; ಬಳಿ: ಹತ್ತಿರ; ಒಸಗೆ: ಶುಭ, ಮಂಗಳಕಾರ್ಯ; ಪಂಚಕ: ಐದು; ಆಗುಹೋಗು: ವ್ಯವಹಾರ; ಹೊತ್ತು: ಧರಿಸು; ನಡಸು: ಮುನ್ನಡೆಸು, ಚಲಿಸು; ನೃಪತಿ: ರಾಜ; ವಿನಯ: ಒಳ್ಳೆಯತನ, ಸೌಜನ್ಯ;

ಪದವಿಂಗಡಣೆ:
ಆಗಲೀ +ವೈಷ್ಣವಕೆ +ನಮ್ಮಯ
ತಾಗು +ಥಟ್ಟಿನ +ರಕ್ಷೆ +ತೊಡಚಿದುದ್
ಆಗಲಿರ್ದುದು +ಪಾಶುಪತ+ಶರವ್+ಅದರ +ಬಳಿವಿಡಿದು
ಈಗಲ್+ಒಸಗೆಯೆ +ತಮ್ಮ +ಪಂಚಕದ್
ಆಗು ಹೋಗನು +ಹೊತ್ತು +ನಡಸಿದೊಡ್
ಆಗ +ನಮಗಾಯ್ತ್+ಒಸಗೆ+ಎಂದನು +ನೃಪತಿ +ವಿನಯದಲಿ

ಅಚ್ಚರಿ:
(೧) ಕೃಷ್ಣನ ಹಿರಿಮೆಯನ್ನು ವಿವರಿಸಿದ ಪರಿ – ಆಗಲೀ ವೈಷ್ಣವಕೆ ನಮ್ಮಯ
ತಾಗು ಥಟ್ಟಿನ ರಕ್ಷೆ ತೊಡಚಿದುದಾಗಲಿರ್ದುದು ಪಾಶುಪತಶರವದರ ಬಳಿವಿಡಿದು