ಆಗಲೀ ವೈಷ್ಣವಕೆ ನಮ್ಮಯ
ತಾಗು ಥಟ್ಟಿನ ರಕ್ಷೆ ತೊಡಚಿದು
ದಾಗಲಿರ್ದುದು ಪಾಶುಪತಶರವದರ ಬಳಿವಿಡಿದು
ಈಗಲೊಸಗೆಯೆ ತಮ್ಮ ಪಂಚಕ
ದಾಗು ಹೋಗನು ಹೊತ್ತು ನಡಸಿದೊ
ಡಾಗ ನಮಗಾಯ್ತೊಸಗೆಯೆಂದನು ನೃಪತಿ ವಿನಯದಲಿ (ಅರಣ್ಯ ಪರ್ವ, ೧೫ ಸಂಧಿ, ೧೦ ಪದ್ಯ)
ತಾತ್ಪರ್ಯ:
ಧರ್ಮಜನು ಸರ್ವವ್ಯಾಪಿಯಾದ ನಿನ್ನ ರಕ್ಷಣೆ ನಮಗೆ ದೊರೆತುದರಿಂದ ಪಾಶುಪತಾಸ್ತ್ರವು ಅದರೊಡನೆಯೇ ನಮಗೆ ಸಿಕ್ಕಿತು. ನಮ್ಮ ಆಗುಹೋಗುಗಳನ್ನು ನೀನು ವಹಿಸಿಕೊಂಡಾಗಲೇ ನಮಗೆ ಶುಭವುಂಟಾದವು. ನಿನಗೆ ಈಗ ಶುಭವಾಗಿದಿಯೇ ಎಂದು ಧರ್ಮಜನು ಕೇಳಿದನು.
ಅರ್ಥ:
ತಾಗು: ಸಹವಾಸ, ಮುಟ್ತು; ಥಟ್ಟು: ಪಕ್ಕ, ಗುಂಪು; ರಕ್ಷೆ: ಕಾಪು, ರಕ್ಷಣೆ; ತೊಡಚು: ಕಟ್ಟು, ಬಂಧಿಸು; ಶರ: ಬಾಣ; ಬಳಿ: ಹತ್ತಿರ; ಒಸಗೆ: ಶುಭ, ಮಂಗಳಕಾರ್ಯ; ಪಂಚಕ: ಐದು; ಆಗುಹೋಗು: ವ್ಯವಹಾರ; ಹೊತ್ತು: ಧರಿಸು; ನಡಸು: ಮುನ್ನಡೆಸು, ಚಲಿಸು; ನೃಪತಿ: ರಾಜ; ವಿನಯ: ಒಳ್ಳೆಯತನ, ಸೌಜನ್ಯ;
ಪದವಿಂಗಡಣೆ:
ಆಗಲೀ +ವೈಷ್ಣವಕೆ +ನಮ್ಮಯ
ತಾಗು +ಥಟ್ಟಿನ +ರಕ್ಷೆ +ತೊಡಚಿದುದ್
ಆಗಲಿರ್ದುದು +ಪಾಶುಪತ+ಶರವ್+ಅದರ +ಬಳಿವಿಡಿದು
ಈಗಲ್+ಒಸಗೆಯೆ +ತಮ್ಮ +ಪಂಚಕದ್
ಆಗು ಹೋಗನು +ಹೊತ್ತು +ನಡಸಿದೊಡ್
ಆಗ +ನಮಗಾಯ್ತ್+ಒಸಗೆ+ಎಂದನು +ನೃಪತಿ +ವಿನಯದಲಿ
ಅಚ್ಚರಿ:
(೧) ಕೃಷ್ಣನ ಹಿರಿಮೆಯನ್ನು ವಿವರಿಸಿದ ಪರಿ – ಆಗಲೀ ವೈಷ್ಣವಕೆ ನಮ್ಮಯ
ತಾಗು ಥಟ್ಟಿನ ರಕ್ಷೆ ತೊಡಚಿದುದಾಗಲಿರ್ದುದು ಪಾಶುಪತಶರವದರ ಬಳಿವಿಡಿದು