ಪದ್ಯ ೧೦: ಧರ್ಮಜನು ಹೇಗೆ ದುಃಖಿಸಿದನು?

ಬಂದು ಫಲುಗುಣನೆನ್ನ ಮೋಹದ
ಕಂದನಾವೆಡೆಯೆಂದಡಾನೇ
ನೆಂದು ಮಾರುತ್ತರವ ಕೊಡುವೆನು ವೈರಿನಾಯಕರು
ಕೊಂದರೆಂಬೆನೊ ಮೇಣು ನಾನೇ
ಕೊಂದೆನೆಂಬೆನೊ ಶಿವ ಮಹಾದೇ
ವೆಂದು ಪುತ್ರಸ್ನೇಹಸೌರಂಭದಲಿ ಹಲುಬಿದನು (ದ್ರೋಣ ಪರ್ವ, ೭ ಸಂಧಿ, ೧೦ ಪದ್ಯ)

ತಾತ್ಪರ್ಯ:
ಧರ್ಮಜನು ಅತಿಶಯ ಪುತ್ರಸ್ನೇಹದಿಂದ ಅರ್ಜುನನು ಬಂದು ನನ್ನ ಪ್ರೀತಿಯ ಪುತ್ರನೆಲ್ಲಿ ಎಂದು ಕೇಳಿದರೆ ನಾನೇನು ಉತ್ತರ ಕೊಡಲಿ, ವೈರಿನಾಯಕರು ಕೊಂದರು ಎನ್ನಲೇ ಅಥವಾ ನಾನೇ ಅವನನ್ನು ಯುದ್ಧಕ್ಕೆ ಕಳಿಸಿ ಕೊಲ್ಲಿಸಿದೆ ಎನ್ನಲೇ ಶಿವ ಶಿವಾ ಎಂದು ಪುತ್ರ ಪ್ರೇಮದಿಂದ ದುಃಖಿಸಿದನು.

ಅರ್ಥ:
ಬಂದು: ಆಗಮಿಸು; ಮೊಹ: ಇಚ್ಛೆ; ಕಂದ: ಮಗ; ಆವೆಡೆ: ಯಾವ ಕಡೆ; ಉತ್ತರ: ಬಿನ್ನಹ; ಕೊಡು: ನೀಡು; ವೈರಿ: ಶತ್ರು; ನಾಯಕ: ಒಡೆಯ; ಕೊಂದು: ಸಾಯಿಸು; ಮೇಣ್: ಅಥವ; ಶಿವ: ಶಂಕರ; ಪುತ್ರ: ಮಗ; ಸ್ನೇಹ: ಮಿತ್ರ; ಸೌರಂಭ: ಸಂಭ್ರಮ; ಹಲುಬು: ದುಃಖಪಡು;

ಪದವಿಂಗಡಣೆ:
ಬಂದು +ಫಲುಗುಣನ್+ಎನ್ನ +ಮೋಹದ
ಕಂದನ್+ಆವೆಡೆ+ಎಂದಡ್+ಆನ್
ಏನೆಂದು +ಮಾರುತ್ತರವ+ ಕೊಡುವೆನು +ವೈರಿನಾಯಕರು
ಕೊಂದರೆಂಬೆನೊ +ಮೇಣು +ನಾನೇ
ಕೊಂದೆನೆಂಬೆನೊ +ಶಿವ +ಮಹಾದೇ
ವೆಂದು +ಪುತ್ರ+ಸ್ನೇಹ+ಸೌರಂಭದಲಿ +ಹಲುಬಿದನು

ಅಚ್ಚರಿ:
(೧) ಧರ್ಮಜನ ದುಃಖದ ಕಾರಣ – ಪುತ್ರಸ್ನೇಹಸೌರಂಭದಲಿ ಹಲುಬಿದನು