ರಾಮ ಕಳುಹಿಸಿಕೊಂಡು ವಿಪ್ರ
ಸ್ತೋಮಸಹಿತ ಸಮಸ್ತ ಋಷಿಗಳು
ರಾಮಣಿಯದವಸ್ತು ದಾನವ್ಯಯದ ವೈಭವಕೆ
ಸೌಮನಸ್ಯನು ರಾಗಹರದ ಮ
ಹಾಮಹಿಮ ತೀರ್ಥಾಭಿರತಿಯಲಿ
ಗೋ ಮಹಿಷ ಧನ ವಸ್ತ್ರದಿಂ ದ್ವಿಜವರರನರ್ಚಿಸಿದ (ಗದಾ ಪರ್ವ, ೬ ಸಂಧಿ, ೧೦ ಪದ್ಯ)
ತಾತ್ಪರ್ಯ:
ರಾಮನು ಶ್ರೀಕೃಷ್ಣನಿಂದ ಬೀಳ್ಕೊಂಡು ಬ್ರಾಹ್ಮಣರು, ಋಷಿಗಳೊಡನೆ ಮನಸ್ಸಿನ ಇಂದ್ರಿಯಾಸಕ್ತಿಗಳನ್ನು ನಾಶಮಾಡುವ ಮಹಾತೀರ್ಥಕ್ಷೇತ್ರಗಳಲ್ಲಿ ಬ್ರಾಹ್ಮಣರನ್ನರ್ಚಿಸಿ ಗೋವುಗಳು, ಎಮ್ಮೆಗಳು, ಧನ, ವಸ್ತ್ರಗಲನ್ನು ದಾನಮಾಡಿದನು.
ಅರ್ಥ:
ಕಳುಹಿಸು: ಹೊರಡು, ಬೀಳ್ಕೊಡು; ವಿಪ್ರಸ್ತೋಮ: ಬ್ರಾಹ್ಮಣ; ಸ್ತೋಮ: ಗುಂಪು; ಸಹಿತ: ಜೊತೆ; ಸಮಸ್ತ: ಎಲ್ಲಾ; ಋಷಿ: ಮುನಿ; ರಾಮಣೀಯಕ: ಸುಂದರ; ದಾನ: ಚತುರೋಪಾಯಗಳಲ್ಲಿ ಒಂದು; ವ್ಯಯ: ನಷ್ಟ, ನಾಶ; ವೈಭವ: ಶಕ್ತಿ, ಸಾಮರ್ಥ್ಯ; ಮನ: ಮನಸ್ಸು; ಸೌಮನ: ಒಳ್ಳೆಯ ಮನಸ್ಸು; ರಾಗ: ಒಲಮೆ, ಪ್ರೀತಿ; ಮಹಾಮಹಿಮ: ಶ್ರೇಷ್ಠ; ತೀರ್ಥ: ಪವಿತ್ರಕ್ಷೇತ್ರ; ಗೋ: ಹಸು; ಮಹಿಷ: ಎಮ್ಮೆ; ಧನ: ಸಿರಿ, ಸಂಪತ್ತು; ವಸ್ತ್ರ: ಬಟ್ಟೆ; ದ್ವಿಜ: ಬ್ರಾಹ್ಮಣ; ಅರ್ಚಿಸು: ಪೂಜಿಸು; ವರ: ಶ್ರೇಷ್ಠ;
ಪದವಿಂಗಡಣೆ:
ರಾಮ +ಕಳುಹಿಸಿಕೊಂಡು +ವಿಪ್ರ
ಸ್ತೋಮ+ಸಹಿತ +ಸಮಸ್ತ+ ಋಷಿಗಳು
ರಾಮಣಿಯದ+ವಸ್ತು+ ದಾನವ್ಯಯದ +ವೈಭವಕೆ
ಸೌಮನಸ್ಯನು+ ರಾಗಹರದ +ಮ
ಹಾಮಹಿಮ +ತೀರ್ಥಾಭಿರತಿಯಲಿ
ಗೋ +ಮಹಿಷ +ಧನ +ವಸ್ತ್ರದಿಂ+ ದ್ವಿಜವರರನ್+ಅರ್ಚಿಸಿದ
ಅಚ್ಚರಿ:
(೧) ಸ ಕಾರದ ತ್ರಿವಳಿ ಪದ – ಸ್ತೋಮ ಸಹಿತ ಸಮಸ್ತ
(೨) ವಿಪ್ರ, ದ್ವಿಜ – ಸಮಾನಾರ್ಥಕ ಪದ