ಪದ್ಯ ೬೯: ಪಾಂಡುವು ತನ್ನ ಮಕ್ಕಳಿಗೆ ಯಾವ ಸಂಸ್ಕಾರಗಳನ್ನು ಮಾಡಿಸಿದನು?

ಯಾದವರ ಸುಕ್ಷೇಮ ಕುಶಲವ
ನಾದರಿಸಿ ಬಳಿಕಾದ ಪರಮಾ
ಹ್ಲಾದದಲಿ ಕಶ್ಯಪನೊಳಾಲೋಚಿಸಿ ಮಹೀಪಾಲ
ವೈದಿಕೋಕ್ತಿಯ ಚೌಲವುಪನಯ
ನಾದಿ ಸಕಲಕ್ರಿಯೆಗಳನು ಗಾ
ರ್ಗ್ಯಾದಿ ಋಷಿಗಳನುಜ್ಞೆಯಲಿ ಮಾಡಿಸಿದನನಿಬರಿಗೆ (ಆದಿ ಪರ್ವ, ೪ ಸಂಧಿ, ೬೯ ಪದ್ಯ)

ತಾತ್ಪರ್ಯ:
ಯಾದವರು ಕ್ಷೇಮದಿದಂದಾರೆ, ಕುಶಲರಾಗಿದ್ದಾರೆ ಎಂದು ಕೇಳಿ ಪಾಂಡುವಿಗೆ ಮಹದಾನಂದವಾಯಿತು. ಬಳಿಕ ಕಶ್ಯಪ ಮುನಿಗಳೊಂದಿಗೆ ಆಲೋಚಿಸಿ, ಗಾರ್ಗ್ಯ ಮತ್ತು ಇತರರ ಮುನಿಗಳ ಅಪ್ಪಣೆಯಂತೆ ವೈದಿಕ ಸಂಸ್ಕಾರಗಳನ್ನು ತನ್ನ ಮಕ್ಕಳಿಗೆ ಮಾಡಿಸಿದನು.

ಅರ್ಥ:
ಕ್ಷೇಮ: ನೆಮ್ಮದಿ; ಕುಶಲ: ಸೌಖ್ಯ; ಆದರ: ಗೌರವ; ಬಳಿಕ: ನಂತರ; ಆಹ್ಲಾದ: ಸಂತೋಷ, ಆನಂದ; ಆಲೋಚನೆ: ವಿಚಾರ ವಿನಿಮಯ; ಮಹೀಪಾಲ: ರಾಜ; ವೈದಿಕ: ವೇದಕ್ಕೆ ಅನುಗುಣವಾಗಿ; ಉಕ್ತಿ: ಮಾತು, ನುಡಿ; ಚೌಲ: ಹುಟ್ಟು ಕೂದಲನ್ನು ತೆಗೆಸುವುದು; ಉಪನಯನ: ಮುಂಜಿ, ಬ್ರಹ್ಮೋಪದೇಶ; ಸಕಲ: ಎಲ್ಲಾ; ಕ್ರಿಯೆ: ಕಾರ್ಯ; ಋಷಿ: ಮುನಿ; ಅನುಜ್ಞೆ: ಒಪ್ಪಿಗೆ, ಅಪ್ಪಣೆ; ಅನಿಬರು: ಅಷ್ಟುಜನ;

ಪದವಿಂಗಡಣೆ:
ಯಾದವರ +ಸುಕ್ಷೇಮ +ಕುಶಲವನ್
ಆದರಿಸಿ +ಬಳಿಕಾದ +ಪರಮಾ
ಹ್ಲಾದದಲಿ +ಕಶ್ಯಪನೊಳ್+ಆಲೋಚಿಸಿ +ಮಹೀಪಾಲ
ವೈದಿಕೋಕ್ತಿಯ+ ಚೌಲ+ಉಪನಯ
ನಾದಿ +ಸಕಲ+ಕ್ರಿಯೆಗಳನು +ಗಾ
ರ್ಗ್ಯಾದಿ +ಋಷಿಗಳ್+ಅನುಜ್ಞೆಯಲಿ +ಮಾಡಿಸಿದನ್+ಅನಿಬರಿಗೆ

ಅಚ್ಚರಿ:
(೧) ಕ್ಷೇಮ, ಕುಶಲ – ಸಾಮ್ಯಾರ್ಥ ಪದ
(೨) ಸಂಸ್ಕಾರಗಳು – ಚೌಲ, ಉಪನಯನ