ಪದ್ಯ ೨೬: ಕೃಷ್ಣನ ಹಿರಿಮೆ ಎಂತಹುದು?

ದೇವರಂಗೋಪಾಂಗದಲಿ ವೇ
ದಾವಳಿಗಳುಚ್ಛ್ವಾಸದಲಿ ತೀ
ರ್ಥಾವಳಿಗಳಂಘ್ರಿದ್ವಯಾಂಬುಜ ಮಾಕರಂದದಲಿ
ಪಾವನಕೆ ಪಾವನನು ಜೀವರ
ಜೀವನನು ಮೃತ್ಯುವಿಗೆ ಮೃತ್ಯುವಿ
ದಾವಲೆಕ್ಕದೊಳೀತನಹನೆಂದರಿವರಾರೆಂದ (ಸಭಾ ಪರ್ವ, ೧೦ ಸಂಧಿ, ೨೬ ಪದ್ಯ)

ತಾತ್ಪರ್ಯ:
ಇವನ ಅಂಗೋಪಾಂಗಗಳಲ್ಲಿ ದೇವರುಗಳು, ಇವನ ಉಸಿರಾಟದಲ್ಲಿ ವೇದಗಳು, ಪಾದಕಮಲಗಳ ಮಕರಂದದಲ್ಲಿ ತೀರ್ಥಗಳು, ಇವೆ. ಪವಿತ್ರವಾದುದಕ್ಕೆ ಪಾವಿತ್ರ್ಯವನ್ನು ಕೊಡುವವನು ಇವನು. ಜೀವರ ಜೀವನವು ಇವನೇ, ಮೃತ್ಯುವಿಗಿವನು ಮೃತ್ಯು ಇವನು ಯಾವಲೆಕ್ಕಕ್ಕನುಗುಣವಾಗಿ ಆದನೋ ಇರುವನೋ ತಿಳಿದವರು ಯಾರು ಎಂದು ಭೀಷ್ಮರು ಕೃಷ್ಣನ ಗುಣಗಾನವನ್ನು ಹೇಳಿದರು.

ಅರ್ಥ:
ದೇವ: ಭಗವಂತ, ಸುರ; ಅಂಗೋಪಾಂಗ: ಅಂಗಾಗಳು; ವೇದ: ಜ್ಞಾನ; ಉಚ್ಛ್ವಾಸ: ಉಸಿರಾಟ; ತೀರ್ಥ: ಪವಿತ್ರವಾದ ಜಲ; ಆವಳಿ: ಗುಂಪು; ಅಂಘ್ರಿ: ಪಾದ; ಅಂಬುಜ: ಕಮಲ; ಮಕರಂದ: ಹೂವಿನ ರಸ; ಪಾವನ:ಶುದ್ಧ; ಜೀವ: ಉಸಿರು; ಮೃತ್ಯು: ಸಾವು; ಲೆಕ್ಕ: ಗಣನೆ; ಅರಿ: ತಿಳಿ;

ಪದವಿಂಗಡಣೆ:
ದೇವರ್+ಅಂಗೋಪಾಂಗದಲಿ+ ವೇ
ದಾವಳಿಗಳ್+ಉಚ್ಛ್ವಾಸದಲಿ +ತೀ
ರ್ಥಾವಳಿಗಳ್+ಅಂಘ್ರಿದ್ವಯ+ಅಂಬುಜ +ಮಾಕರಂದದಲಿ
ಪಾವನಕೆ+ ಪಾವನನು+ ಜೀವರ
ಜೀವನನು +ಮೃತ್ಯುವಿಗೆ ಮೃತ್ಯುವಿದ್
ಆವಲೆಕ್ಕದೊಳ್+ಈತನಹನೆಂದ್+ಅರಿವರಾರೆಂದ

ಅಚ್ಚರಿ:
(೧) ಕೃಷ್ಣನ ಹಿರಿಮೆ – ಪಾವನಕೆ ಪಾವನನು ಜೀವರ ಜೀವನನು ಮೃತ್ಯುವಿಗೆ ಮೃತ್ಯು