ಪದ್ಯ ೪೯: ಅಗ್ನಿಯು ಯಾವ ಕಡೆ ಬೀಡು ಬಿಟ್ಟಿತು?

ಸುಳಿಸುಳಿದು ಶಶಿಕಾಂತಮಯದ
ಗ್ಗಳದ ವೇದಿಕೆಗಳಲಿ ನೀಲದ
ನೆಲೆಯ ಚೌಕಿಗೆಗಳಲಿ ಮಂಟಪದಲಿ ಲತಾವಳಿಯ
ಲಲಿತ ಸೌಧದ ಚಾರು ಚಿತ್ರಾ
ವಳಿಯ ಮೇಲ್ಕಟ್ಟುಗಳ ಭವನಂ
ಗಳಲಿ ಬಿಟ್ಟುದು ಕೂಡೆ ಪಾಳೆಯ ವಹ್ನಿಭೂಪತಿಯ (ಆದಿ ಪರ್ವ, ೨೦ ಸಂಧಿ, ೪೯ ಪದ್ಯ)

ತಾತ್ಪರ್ಯ:
ಅಗ್ನಿಯು ಖಾಂಡವವನವನ್ನೆಲ್ಲಾ ಸುಳಿಯಿತು, ಚಂದ್ರಕಾಂತದ ಶಿಲೆಗಳ ಕಟ್ಟೆಗಳು (ಬೆಟ್ಟ ಗುಡ್ಡಗಳ ಮೇಲಿದ್ದ ಮರಗಳನ್ನು ಆವರಿಸಿತು), ನೀಲಮಣಿಯ ಚೌಕಗಳು (ನೀರಿನ ದಡದಲ್ಲಿದ್ದ ಮರಗಳನ್ನು ಆವರಿಸಿತು), ವನದಲ್ಲಿದ್ದ ಮಂಟಪಗಳ (ಮೇಲೆ ಹರಡಿದ್ದ ಬಳ್ಳಿಗಳನ್ನು ಆವರಿಸಿತು), ಸುಂದರ ಬಳ್ಳಿಗಳು ಮರಗಳನ್ನು ನೆರವಾಗಿಸಿ ಕೊಂಡು ಮೇಲೇರಿರುವ ಬಳ್ಳಿಗಳ ಉಪ್ಪರಿಗೆಗಳನ್ನು ಬೆಂಕಿಯು ಆವರಿಸಿತು.

ಅರ್ಥ:
ಸುಳಿ:ಸುತ್ತು; ಶಶಿ: ಚಂದ್ರ; ಕಾಂತ: ಪ್ರಕಾಶ, ಕಾಂತಿ; ಅಗ್ಗಳ: ದೊಡ್ಡ; ವೇದಿಕೆ: ಎತ್ತರವಾದ ಪ್ರದೇಶ; ನೀಲ:ನೀಲಿ ಬಣ್ಣ; ನೆಲೆ: ಸ್ಥಳ; ಚೌಕಿ:ಚಚ್ಚೌಕವಾದ ಮಂಟಪ; ಮಂಟಪ:ಸಮತಲವಾದ ಚಾವಣಿ ಯುಳ್ಳ ಬಾಗಿಲಿಲ್ಲದ ಚಪ್ಪರದಾಕಾರದ ಕಲ್ಲಿನ ಕಟ್ಟಡ; ಲತ: ಬಳ್ಳಿ; ವಳಿ: ಸಾಲು, ಗುಂಪು; ಲಲಿತ: ಚೆಲುವು; ಸೌಧ:ಉಪ್ಪರಿಗೆ ಮನೆ;ಚಾರು: ಸುಂದರ; ಚಿತ್ರಾವಳಿ: ಬರೆದ ಆಕೃತಿಗಳ ಗುಂಪು; ಮೇಲ್ಕಟ್ಟು: ಎತ್ತಿ ಹಿಡಿ; ಭವನ: ಮನೆ; ಪಾಳೆಯ: ಬೀಡು; ಭೂಪತಿ: ರಾಜ

ಪದವಿಂಗಡಣೆ:
ಸುಳಿಸುಳಿದು +ಶಶಿ+ಕಾಂತಮಯದ
ಅಗ್ಗಳದ+ ವೇದಿಕೆಗಳಲಿ+ ನೀಲದ
ನೆಲೆಯ +ಚೌಕಿಗೆಗಳಲಿ +ಮಂಟಪದಲಿ +ಲತಾವಳಿಯ
ಲಲಿತ +ಸೌಧದ +ಚಾರು +ಚಿತ್ರಾ
ವಳಿಯ +ಮೇಲ್ಕಟ್ಟುಗಳ+ ಭವನಂ
ಗಳಲಿ +ಬಿಟ್ಟುದು +ಕೂಡೆ +ಪಾಳೆಯ +ವಹ್ನಿ+ಭೂಪತಿಯ

ಅಚ್ಚರಿ:
(೧) ಕಾಡಿನಲ್ಲಿ ವೇದಿಕೆ, ಚೌಕಿ, ಮಂಟಪ, ಸೌಧ, ಮೇಲ್ಕಟ್ಟು, ಭವನ ಇವಗಳನ್ನು ಚಿತ್ರಿಸಿರುವುದು