ಮೀಟೆನಿಪ ಗಂಧರ್ವರೊಂದೇ
ಕೋಟಿ ಕವಿದುದು ಕುರುಬಲಕೆ ಪಡಿ
ಕೋಟೆಯಾದುದು ನೃಪತಿ ಸಿಲುಕಿದನವರ ವೇಡೆಯಲಿ
ದಾಟಿತರಸನ ಧೈರ್ಯ ಕೈದುಗ
ಳಾಟ ನಿಂದುದು ಕರದ ಹೊಯ್ಲಲಿ
ನೋಟಕರು ಘೋಳೆಂದರಿತ್ತಲು ಪಾಂಡವರ ವನದ (ಅರಣ್ಯ ಪರ್ವ, ೨೦ ಸಂಧಿ, ೫೧ ಪದ್ಯ)
ತಾತ್ಪರ್ಯ:
ಶ್ರೇಷ್ಠರಾದ ಒಂದು ಕೋಟಿ ಗಂಧರ್ವರು ಕೌರವ ಬಲಕ್ಕೆ ಇದಿರಾಗಿ ಕೋಟೆಯಂತೆ ನಿಂತರು. ಕೌರವನು ಅವರ ಮುತ್ತಿಗೆಗೆ ಸಿಕ್ಕಿಹಾಕಿ ಕೊಂಡನು. ದುರ್ಯೋಧನನ ಧೈರ್ಯ ಕುಂದಿತು. ಶಸ್ತ್ರಾಸ್ತ್ರ ಪ್ರಯೋಗ ಸ್ತಬ್ಧವಾಯಿತು. ಪಾಂಡವರ ವನದ ಬಳಿ ನಿಂತು ನೋಡುವವರೆಲ್ಲರೂ ನಕ್ಕು ಬಿಟ್ಟರು.
ಅರ್ಥ:
ಮೀಟು: ಶ್ರೇಷ್ಠ; ಕೋಟಿ: ಅಸಂಖ್ಯಾತ; ಕವಿ: ಆವರಿಸು; ಬಲ: ಸೈನ್ಯ; ಪಡಿ: ಎದುರು; ಕೋಟೆ: ದುರ್ಗ; ನೃಪತಿ: ರಾಜ; ಸಿಲುಕು:ಸೆರೆಯಾದ ವಸ್ತು; ವೇಡೆ: ಆಕ್ರ ಮಣ; ದಾಟು: ಹಾಯುವಿಕೆ; ಅರಸ: ರಾಜ; ಧೈರ್ಯ: ಪರಾಕ್ರಮ; ಕೈದು:ಆಯುಧ, ಶಸ್ತ್ರ; ನಿಂದು: ನಿಲ್ಲು; ಕರ: ಹಸ್ತ; ಹೊಯ್ಲು: ಏಟು, ಹೊಡೆತ; ನೋಟಕ: ನೋಡುವವನು, ಪ್ರೇಕ್ಷಕ; ಘೋಳ್: ನಗುವ ಶಬ್ದ; ವನ: ಕಾಡು;
ಪದವಿಂಗಡಣೆ:
ಮೀಟೆನಿಪ +ಗಂಧರ್ವರ್+ಒಂದೇ
ಕೋಟಿ+ ಕವಿದುದು +ಕುರುಬಲಕೆ +ಪಡಿ
ಕೋಟೆಯಾದುದು +ನೃಪತಿ +ಸಿಲುಕಿದನ್+ಅವರ +ವೇಡೆಯಲಿ
ದಾಟಿತ್+ಅರಸನ +ಧೈರ್ಯ +ಕೈದುಗ
ಳಾಟ +ನಿಂದುದು +ಕರದ+ ಹೊಯ್ಲಲಿ
ನೋಟಕರು +ಘೋಳೆಂದರ್+ಇತ್ತಲು +ಪಾಂಡವರ +ವನದ
ಅಚ್ಚರಿ:
(೧) ಧೈರ್ಯ ಕುಂದಿತು ಎಂದು ಹೇಳಲು – ದಾಟಿತರಸನ ಧೈರ್ಯ ಕೈದುಗಳಾಟ ನಿಂದುದು ಕರದ ಹೊಯ್ಲಲಿ