ಪದ್ಯ ೪: ಐದು ಮತ್ತು ಆರನೆಯ ದಿನದ ಯುದ್ಧವು ಹೇಗೆ ನಡೆಯಿತು?

ಬಿದ್ದುದಗಣಿತ ಸೇನೆ ಪಡುವಲು
ಹೊದ್ದಿದನು ರವಿ ಮತ್ತೆ ಮೂಡಣ
ಗದ್ದುಗೆಯ ವೆಂಠಣಿಸಿದನು ಕುಮುದಾಳಿ ಕಂಠಣಿಸೆ
ಬಿದ್ದುದದ್ಭುತರಣ ಕೃತಾಂತಗೆ
ಬಿದ್ದನಿಕ್ಕಿದನದಟನಬುಧಿಯೊ
ಳದ್ದ ಸೂರ್ಯನ ಬಿಂಬವೆದ್ದುದು ಮೂಡಣದ್ರಿಯಲಿ (ಭೀಷ್ಮ ಪರ್ವ, ೭ ಸಂಧಿ, ೪ ಪದ್ಯ)

ತಾತ್ಪರ್ಯ:
ಐದನೆಯ ದಿನವೂ ಲೆಕ್ಕವಿಲ್ಲದಷ್ಟು ಸೈನ್ಯ ನಿರ್ನಾಮವಾಯಿತು. ಸೂರ್ಯನು ಮುಳುಗಲು ಕುಮುದಗಲರಳಿದವು. ಮತ್ತೆ ಸೂರ್ಯನು ಹುಟ್ಟಿದನು. ಕುಮುದಗಳು ಮುಚ್ಚಿದವು, ಆರನೆಯ ದಿನ ಭೀಷ್ಮನು ಶತ್ರು ಸೈನ್ಯವನ್ನು ಕಡಿದು ಯಮನಿಗೆ ಔತಣವನ್ನು ನೀಡಿದನು. ಮುಳುಗಿದ ಸೂರ್ಯಬಿಂಬವು ಪೂರ್ವದಲ್ಲಿ ಮೂಡಿತು.

ಅರ್ಥ:
ಬಿದ್ದು: ಬೀಳು; ಅಗಣಿತ: ಅಸಂಖ್ಯಾತ; ಸೇನೆ: ಸೈನ್ಯ; ಪಡುವಣ: ಪಶ್ಚಿಮದಿಕ್ಕು; ಹೊದ್ದು: ಹೊಂದು, ಸೇರು; ಮೂಡಣ: ಪೂರ್ವ; ಗದ್ದುಗೆ: ಪೀಠ; ವೆಂಠಣಿಸು: ಮುತ್ತಿಗೆ ಹಾಕು; ಕುಮುದಾಳಿ: ಬಿಳಿಯ ನೈದಿಲೆಗಳ ಗುಂಪು; ಕಂಠಣಿಸು: ಗೋಳಾಡು, ದುಃಖಿಸು; ಬಿದ್ದು: ಬೀಳು; ಅದ್ಭುತ: ಅತ್ಯಾಶ್ಚರ್ಯಕರವಾದ ವಸ್ತು; ಕೃತಾಂತ: ಯಮ; ಇಕ್ಕು: ಇರಿಸು, ಇಡು; ಅದಟ: ಶೂರ, ಪರಾಕ್ರಮಿ; ಅಬುಧಿ: ಸಾಗರ; ಸೂರ್ಯ: ರವಿ; ಬಿಂಬ: ಕಿರಣ; ಮೂಡಣ: ಪೂರ್ವ; ಅದ್ರಿ: ಬೆಟ್ಟ;

ಪದವಿಂಗಡಣೆ:
ಬಿದ್ದುದ್+ಅಗಣಿತ +ಸೇನೆ +ಪಡುವಲು
ಹೊದ್ದಿದನು +ರವಿ +ಮತ್ತೆ +ಮೂಡಣ
ಗದ್ದುಗೆಯ +ವೆಂಠಣಿಸಿದನು +ಕುಮುದಾಳಿ +ಕಂಠಣಿಸೆ
ಬಿದ್ದುದ್+ಅದ್ಭುತ+ರಣ +ಕೃತಾಂತಗೆ
ಬಿದ್ದನ್+ಇಕ್ಕಿದನ್+ಅದಟನ್+ಅಬುಧಿಯೊಳ್
ಅದ್ದ +ಸೂರ್ಯನ +ಬಿಂಬವ್+ಎದ್ದುದು +ಮೂಡಣ್+ಅದ್ರಿಯಲಿ

ಅಚ್ಚರಿ:
(೧) ಸೂರ್ಯೋದಯ ಎಂದು ಹೇಳುವ ಪರಿ – ರವಿ ಮತ್ತೆ ಮೂಡಣ ಗದ್ದುಗೆಯ ವೆಂಠಣಿಸಿದನು ಕುಮುದಾಳಿ ಕಂಠಣಿಸೆ, ಅಬುಧಿಯೊಳದ್ದ ಸೂರ್ಯನ ಬಿಂಬವೆದ್ದುದು ಮೂಡಣದ್ರಿಯಲಿ
(೨) ಸೂರ್ಯಾಸ್ತವನ್ನು ಹೇಳುವ ಪರಿ – ಪಡುವಲು ಹೊದ್ದಿದನು ರವಿ
(೩) ವೆಂಠಣಿ, ಕಂಠಣಿ – ಪ್ರಾಸ ಪದಗಳು

ಪದ್ಯ ೧೮: ಸರ್ಪಾಸ್ತ್ರವು ಹೇಗೆ ಮುನ್ನುಗ್ಗಿತು?

ಏನಹೇಳುವೆ ಬಳಿಕ ಭುವನ
ಗ್ಲಾನಿಯನು ತೆಗೆದೊಡಿದರು ವೈ
ಮಾನಿಕರು ವೆಂಠಣಿಸಿತುರಿಯಪ್ಪಳಿಸಿತಂಬರವ
ಕಾನಿಡುವ ಕಬ್ಬೊಗೆಯ ಚೂರಿಸು
ವಾನನದ ಕಟವಾಯ ಲೋಳೆಯ
ಜೇನಹುಟ್ಟಿಯ ಬಸಿವ ವಿಷದಲಿ ಬಂದುದುರಗಾಸ್ತ್ರ (ಕರ್ಣ ಪರ್ವ, ೨೫ ಸಂಧಿ, ೧೮ ಪದ್ಯ)

ತಾತ್ಪರ್ಯ:
ಕರ್ಣನು ಸರ್ಪಾಸ್ತ್ರವನ್ನು ಬಿಟ್ಟ ನಂತರ ಲೋಕದ ಕ್ಷೋಭೆಯನ್ನು ಏನೆಂದು ಹೇಳಲಿ? ದೇವತೆಗಳು ಆಕಾಶದಲ್ಲಿ ದೂರಕ್ಕೋಡಿದರು, ಅಸ್ತ್ರಾ ಉರಿಯು ಎಲ್ಲಾ ದಿಕ್ಕುಗಳನ್ನ್ನು ಆವರಿಸಿತು, ಹೇಡೆಯನ್ನು ಚಾಚಿ ಜೇನಿನ ಗೂಡಿನಿಂದ ಜಿನುಗುವ ಜೇನುತುಪ್ಪದಂತೆ ಸರ್ಪಾಸ್ತ್ರವು ವಿಷವನ್ನು ಸುರಿಸುತ್ತಾ ಮುನ್ನುಗ್ಗಿತು.

ಅರ್ಥ:
ಬಳಿಕ: ನಂತರ; ಭುವನ: ಜಗತ್ತು; ಗ್ಲಾನಿ: ಅವನತಿ, ನಾಶ; ಓಡು: ಪಲಾಯನ; ವೈಮಾನಿಕ: ದೇವತೆ; ವಂಠಣ: ಮುತ್ತಿಗೆಹಾಕು, ಸುತ್ತುವರಿ; ಉರಿ: ಬೆಂಕಿಯ ಕಿಡಿ; ಅಪ್ಪಳಿಸು: ತಟ್ಟು, ತಾಗು; ಅಂಬರ: ಆಗಸ; ಕಾನಿಡು: ದಟ್ಟವಾಗು, ಸಾಂದ್ರವಾಗು; ಕಬ್ಬೊಗೆ: ಕರಿಯಾದ ಹೊಗೆ; ಚೂರಿಸು: ಕತ್ತರಿಸು; ಆನನ: ಮುಖ; ಕಟವಾಯಿ: ಬಾಯಿ ಕೊನೆ; ಲೋಳೆ: ಅ೦ಟುಅ೦ಟಾಗಿರುವ ದ್ರವ್ಯ; ಜೇನು: ದುಂಬಿ; ಹುಟ್ಟಿ: ಜೇನಿನ ಗೂಡು; ಬಸಿ:ಜಿನುಗು ; ವಿಷ: ನಂಜು; ಉರಗಾಸ್ತ್ರ: ಸರ್ಪಾಸ್ತ್ರ;

ಪದವಿಂಗಡಣೆ:
ಏನಹೇಳುವೆ+ ಬಳಿಕ+ ಭುವನ
ಗ್ಲಾನಿಯನು +ತೆಗೆದ್+ಓಡಿದರು +ವೈ
ಮಾನಿಕರು+ ವೆಂಠಣಿಸಿತ್+ಉರಿ +ಅಪ್ಪಳಿಸಿತ್+ಅಂಬರವ
ಕಾನಿಡುವ +ಕಬ್ಬೊಗೆಯ +ಚೂರಿಸುವ್
ಆನನದ +ಕಟವಾಯ +ಲೋಳೆಯ
ಜೇನಹುಟ್ಟಿಯ +ಬಸಿವ+ ವಿಷದಲಿ+ ಬಂದುದ್+ಉರಗಾಸ್ತ್ರ

ಅಚ್ಚರಿ:
(೧) ವಿಷವು ಹೊರಹೊಮ್ಮುತ್ತಿತ್ತು ಎಂದು ಹೇಳಲು ಜೇನಿನ ಉಪಮಾನವನ್ನು ಬಳಸಿದ ಪರಿ
(೨) ಉಪಮಾನದ ಪ್ರಯೋಗ – ಕಾನಿಡುವ ಕಬ್ಬೊಗೆಯ ಚೂರಿಸುವಾನನದ ಕಟವಾಯ ಲೋಳೆಯ ಜೇನಹುಟ್ಟಿಯ ಬಸಿವ ವಿಷದಲಿ ಬಂದುದುರಗಾಸ್ತ್ರ
(೩) ದೇವತೆಗಳನ್ನು ವೈಮಾನಿಕರು ಎಂದು ಕರೆದಿರುವುದು