ಉಂಟು ಹೊಲ್ಲೆಹವಲ್ಲ ರಣದೊಳ
ಗೆಂಟುಮಡಿ ಬಳಲಿದವು ತೇಜಿಗ
ಳೀಂಟುವರೆ ನೀರಿಲ್ಲ ಮುರಿದರೆ ಬೆನ್ನ ಬಿಡರಿವರು
ಗೆಂಟರಲಿ ನಮ್ಮೊಡ್ಡ ಸುತ್ತಲು
ವೆಂಟಣಿಸಿ ರಿಪುಸೇನೆಯಿದೆ ಏ
ನುಂಟು ಮಾಡುವುಪಾಯವೆಂದನು ನಗುತ ಮುರವೈರಿ (ದ್ರೋಣ ಪರ್ವ, ೧೦ ಸಂಧಿ, ೨೬ ಪದ್ಯ)
ತಾತ್ಪರ್ಯ:
ಶ್ರೀಕೃಷ್ಣನು ಅರ್ಜುನನ ಮಾತನ್ನು ಕೇಳಿ ನಗುತ್ತಾ, ಅರ್ಜುನ, ನಿನ್ನ ಮಾತು ನಿಜ, ಕುದುರೆಗಳು ಯುದ್ಧದಲ್ಲಿ ಎಂಟು ಮಡಿ ಬಳಲಿವೆ. ಕುಡಿಯಲು ನೀರಿಲ್ಲ, ಹಿಂದಿರುಗೋಣವೆಂದರೆ ಶತ್ರುಗಳು ನಮ್ಮ ಬೆನ್ನು ಹತ್ತುತ್ತಾರೆ. ನಮ್ಮ ಬಲವನು ಮುತ್ತಲು ಹತ್ತಿರದಲ್ಲೇ ಶತ್ರು ಸೈನ್ಯ ನಿಂತಿದೆ, ನಾವು ಮಾಡುವ ಉಪಾಯವಾದರೂ ಏನು, ಎಂದು ಕೃಷ್ಣನು ಕೇಳಿದನು.
ಅರ್ಥ:
ಉಂಟು: ಹೌದು; ಹೊಲ್ಲೆಹ: ದೋಷ; ರಣ: ಯುದ್ಧ; ಬಳಲು: ಆಯಾಸ; ತೇಜಿ: ಕುದುರೆ; ನೀರು: ಜಲ; ಮುರಿ: ಸೀಳು; ಬೆನ್ನ: ಹಿಂಭಾಗ; ಬಿಡು: ತ್ಯಜಿಸು; ಗೆಂಟು: ದೂರ; ವೆಂಟಣಿಸು: ಮುತ್ತು; ರಿಪು: ವೈರಿ; ಉಪಾಯ: ಯುಕ್ತಿ; ನಗು: ಹರ್ಷ; ಮುರವೈರಿ: ಕೃಷ್ಣ; ಒಡ್ಡು: ಸೈನ್ಯ, ಪಡೆ;
ಪದವಿಂಗಡಣೆ:
ಉಂಟು +ಹೊಲ್ಲೆಹವಲ್ಲ +ರಣದೊಳಗ್
ಎಂಟುಮಡಿ +ಬಳಲಿದವು +ತೇಜಿಗಳ್
ಈಂಟುವರೆ +ನೀರಿಲ್ಲ +ಮುರಿದರೆ +ಬೆನ್ನ +ಬಿಡರಿವರು
ಗೆಂಟರಲಿ +ನಮ್ಮೊಡ್ಡ +ಸುತ್ತಲು
ವೆಂಟಣಿಸಿ +ರಿಪು+ಸೇನೆಯಿದೆ +ಏ
ನುಂಟು +ಮಾಡುವುಪಾಯವೆಂದನು +ನಗುತ +ಮುರವೈರಿ
ಅಚ್ಚರಿ:
(೧) ಉಂಟು, ಎಂಟು, ಈಂಟು – ಪ್ರಾಸ ಪದಗಳು