ರಣಮುಖದೊಳೀ ಕ್ಷತ್ರಧರ್ಮದ
ಕುಣಿಕೆ ತಪ್ಪದೆ ವೇದಶಾಸ್ತ್ರದ
ಭಣಿತೆ ನೋಯದೆ ವೀರವೃತ್ತಿಯ ಪದದ ಪಾಡರಿದು
ಸೆನಸು ಸೋಂಕಿದ ಛಲದ ವಾಸಿಯೊ
ಳಣುವ ಹಿಂಗದೆ ಜೀವದಾಸೆಗೆ
ಮಣಿಯದಳಿದುದನೆಲ್ಲ ಬಲ್ಲರು ಕೃಷ್ಣ ಕೇಳೆಂದ (ಗದಾ ಪರ್ವ, ೮ ಸಂಧಿ, ೪೧ ಪದ್ಯ)
ತಾತ್ಪರ್ಯ:
ಎಲೈ ಕೃಷ್ಣ ಕೇಳು, ಈ ಯುದ್ಧದಲ್ಲಿ ಕ್ಷತ್ರಿಯ ಧರ್ಮವನ್ನು ಮೀರದೆ, ವೇದಶಾಸ್ತ್ರಗಳ ನಿಯಮಕ್ಕೆ ತಪ್ಪದೆ, ವೀರನ ನಡತೆಯ ರೀತಿಯನ್ನರಿತು ತಪ್ಪದೆ ಕೋಪಯುಕ್ತವಾದ ನನ್ನ ಛಲವನ್ನು ಅಣು ಮಾತ್ರವೂ ಬಿಡದೆ, ಜೀವಕ್ಕೆ ಆಶೆಪಡದೆ ಪರಾಜಿತನಾದುದನ್ನು ಎಲ್ಲರೂ ಬಲ್ಲರು ಎಂದು ದುರ್ಯೋಧನನು ಹೇಳಿದನು.
ಅರ್ಥ:
ರಣ: ಯುದ್ಧ; ಮುಖ: ಆನನ; ಧರ್ಮ: ಧಾರಣೆ ಮಾಡಿದುದು; ಕುಣಿಕೆ: ಸರಗಂಟು, ಕೊನೆ; ವೇದ: ಅರಿವು, ತಿಳಿವಳಿಕೆ; ಶಾಸ್ತ್ರ: ಧಾರ್ಮಿಕ ವಿಷಯ; ಭಣಿತೆ: ಮಾತು, ಹೇಳಿಕೆ; ನೋವು: ಪೆಟ್ಟು; ವೀರ: ಶೂರ, ಪರಾಕ್ರಮ; ವೃತ್ತಿ: ಕಾರ್ಯ; ಪದ: ಚಲನೆ; ಪಾಡು: ರೀತಿ; ಅರಿ: ತಿಳಿ; ಸೆಣಸು: ಹೋರಾಡು; ಸೋಂಕು: ಅಂಟು, ತಾಗು; ಛಲ: ದೃಢ ನಿಶ್ಚಯ; ವಾಸಿ: ವಚನ, ಆಣೆ; ಅಣು: ಸ್ವಲ್ಪ; ಹಿಂಗು: ಹಿಂಜರಿ, ಬತ್ತು; ಜೀವ: ಪ್ರಾಣ; ಆಸೆ: ಇಚ್ಛೆ; ಮಣಿ: ಬಾಗು; ಅಳಿ: ಸಾವು, ನಾಶ; ಬಲ್ಲರು: ತಿಳಿದಿರುವರು; ಕೇಳು: ಆಲಿಸು;
ಪದವಿಂಗಡಣೆ:
ರಣಮುಖದೊಳ್+ಈ+ ಕ್ಷತ್ರಧರ್ಮದ
ಕುಣಿಕೆ +ತಪ್ಪದೆ +ವೇದಶಾಸ್ತ್ರದ
ಭಣಿತೆ +ನೋಯದೆ +ವೀರ+ವೃತ್ತಿಯ +ಪದದ +ಪಾಡರಿದು
ಸೆಣಸು +ಸೋಂಕಿದ +ಛಲದ +ವಾಸಿಯೊಳ್
ಅಣುವ +ಹಿಂಗದೆ +ಜೀವದಾಸೆಗೆ
ಮಣಿಯದ್+ಅಳಿದುದನ್+ಎಲ್ಲ+ ಬಲ್ಲರು +ಕೃಷ್ಣ+ ಕೇಳೆಂದ
ಅಚ್ಚರಿ:
(೧) ತಪ್ಪದೆ, ನೋಯದೆ, ಹಿಂಗದೆ – ಪ್ರಾಸ ಪದಗಳ ಬಳಕೆ