ಪದ್ಯ ೭೯: ವಿದುರನು ಧೃತರಾಷ್ಟ್ರನ ಮಾತನ್ನು ಏಕೆ ಒಪ್ಪಿದನು?

ಮೊದಲಲಿದು ಸದ್ಯೂತವವಸಾ
ನದಲಿ ವಿಷಮ ದ್ಯೂತದಲಿ ನಿಲು
ವುದು ನಿವಾರಣವುಂಟೆ ಮರ್ಮವನಿರಿದ ಸಬಳದಲಿ
ತುದಿಗೆ ತಾನಿದಪಥ್ಯ ಕುರುವ
ರ್ಗದಿ ವಿನಾಶಕ ಬೀಜವದು ನಿಮ
ಗಿದರೊಳಗೆ ಸೊಗಸಾದುದೇ ಕೈಕೊಂಡೆ ನಾನೆಂದ (ಸಭಾ ಪರ್ವ, ೧೩ ಸಂಧಿ, ೭೯ ಪದ್ಯ)

ತಾತ್ಪರ್ಯ:
ಮೊದಲನೆಯದಾಗಿ ಇದು ಒಳ್ಳೆಯ ದ್ಯೂತ ಪಂದ್ಯವಾಗಿ ಆರಂಭವಾದರೂ ಕೊನೆಗೆ ಕಷ್ಟಕರವಾದ ದ್ಯೂತವಾಗಿಬಿಡುತ್ತದೆ. ಮರ್ಮವನ್ನು ಚುಚ್ಚುವ ಕತ್ತಿಯನ್ನು ತಪ್ಪಿಸಲಾಗುತ್ತದೆಯೇ? ಈ ದ್ಯೂತವು ಕೊನೆಗೆ ಕೌರವರ ವಿನಾಶದ ಬೀಜವಾಗುತ್ತದೆ. ನಿಮಗೆ ಇದು ಸರಿಯೆಂದು ಕಾಣಿಸಿತೇ? ಆಗಲಿ ನಾನು ಒಪ್ಪಿಕೊಂಡೆ ಎಂದು ವಿದುರನು ಧೃತರಾಷ್ಟ್ರನಿಗೆ ತಿಳಿಸಿದನು.

ಅರ್ಥ:
ಮೊದಲು: ಮುನ್ನ; ಸುದ್ಯೂತ: ಒಳ್ಳೆಯ ಪಗಡೆಯಾಟ; ವಿಷಮ: ಕೆಟ್ಟ, ದುಷ್ಟ; ಅವಸಾನ:ಅಂತ್ಯ, ಮುಕ್ತಾಯ; ದ್ಯೂತ: ಪಗಡೆ, ಜೂಜು; ನಿಲುವುದು: ನಿಂತುಕೊಳ್ಳು, ಸ್ಥಾನ; ನಿವಾರಣೆ: ಕಳೆಯುವಿಕೆ; ಮರ್ಮ: ಒಳ ಅರ್ಥ, ಗುಟ್ಟು; ಸಬಳ: ಈಟಿ, ಭರ್ಜಿ; ಇರಿ: ಚುಚ್ಚು; ತುದಿ: ಕೊನೆ; ಪಥ್ಯ: ಯೋಗ್ಯವಾದುದು; ವರ್ಗ: ಗುಂಫು; ವಿನಾಶ: ಹಾಳು, ಅಂತ್ಯ; ಬೀಜ: ಮೂಲ, ಕಾರಣ; ಸೊಗಸು: ಚೆಲುವು; ಕೈಕೊಂಡು: ಒಪ್ಪು;

ಪದವಿಂಗಡಣೆ:
ಮೊದಲಲ್+ಇದು +ಸದ್ಯೂತವ್+ಅವಸಾ
ನದಲಿ +ವಿಷಮ +ದ್ಯೂತದಲಿ +ನಿಲು
ವುದು +ನಿವಾರಣವುಂಟೆ +ಮರ್ಮವನ್+ಇರಿದ +ಸಬಳದಲಿ
ತುದಿಗೆ+ ತಾನಿದ+ಪಥ್ಯ +ಕುರು+ವ
ರ್ಗದಿ +ವಿನಾಶಕ +ಬೀಜವದು+ ನಿಮಗ್
ಇದರೊಳಗೆ+ ಸೊಗಸಾದುದೇ +ಕೈಕೊಂಡೆ +ನಾನೆಂದ

ಅಚ್ಚರಿ:
(೧) ಸದ್ಯೂತ, ವಿಷಮದ್ಯೂತ – ಪದಗಳ ಬಳಕೆ
(೨) ಉಪಮಾನದ ಪ್ರಯೋಗ – ನಿವಾರಣವುಂಟೆ ಮರ್ಮವನಿರಿದ ಸಬಳದಲಿ