ದೇವ ಭಕ್ತಜನಾರ್ತಿಪಾಲಕ
ದೇವ ಬಹಳಕೃಪಾಮಹಾರ್ಣವ
ದೇವ ಸರ್ವೇಶ್ವರ ಸದಾತ್ಮಕ ಸಕಲ ನಿಷ್ಕಳನೆ
ಸೇವಕರಲಾರೈವರೇ ಸುಗು
ಣಾವಗುಣವನು ನಿಮ್ಮ ಭೃತ್ಯನ
ಭಾವ ಬೆಚ್ಚಿತು ವಿಶ್ವರೂಪವ ಬೀಳುಕೊಡಿಯೆಂದ (ಭೀಷ್ಮ ಪರ್ವ, ೩ ಸಂಧಿ, ೭೬ ಪದ್ಯ)
ತಾತ್ಪರ್ಯ:
ದೇವ ನೀನು ಭಕ್ತಜನರ ಕಷ್ಟಗಳನ್ನು ಪರಿಹರಿಸಿ ಕಾಪಾಡುವವನು, ದೇವ ನೀನು ಕೃಪಾಸಾಗರ, ಸರ್ವೇಶ್ವರ, ಸದಾತ್ಮಕ, ಸಕಲ ನಿಷ್ಕಳನಾದ ದೇವನೇ ಸೇವಕರಲ್ಲಿ ಗುಣ ಅವಗುಣಗಳನ್ನು ನೋಡಬಹುದೇ! ನಿನ್ನ ಸೇವಕನಾದ ನನ್ನ ಭಾವ ಬೆಚ್ಚಿದೆ ನಿನ್ನ ವಿಶ್ವರೂಪವನ್ನು ಬಿಟ್ಟು ಮೊದಲಿನಂತಾಗು.
ಅರ್ಥ:
ದೇವ: ಭಗವಂತ; ಭಕ್ತ: ಆರಾಧಕ; ಆರ್ತಿ:ವ್ಯಥೆ, ಚಿಂತೆ; ಪಾಲಕ: ಕಾಪಾಡುವ; ಬಹಳ: ತುಂಬ; ಕೃಪೆ: ದಯೆ; ಮಹಾರ್ಣವ: ಮಹಾಸಾಗರ; ಸರ್ವೇಶ್ವರ: ಒಡೆಯ, ಪ್ರಭು; ಆತ್ಮ: ಜೀವ; ನಿಷ್ಕಳ: ಪರಿಶುದ್ಧ; ಸೇವಕ: ದಾಸ; ಸುಗುಣ: ಒಳ್ಳೆಯ ನಡತೆ; ಅವಗುಣ: ದುರ್ಗುಣ; ಭೃತ್ಯ: ಆಳು, ಸೇವಕ; ಭಾವ: ಅಂತರ್ಗತ ಅರ್ಥ; ಬೆಚ್ಚು: ಭಯ, ಹೆದರಿಕೆ; ವಿಶ್ವರೂಪ: ಎಲ್ಲ ಕಡೆಗೂ ವ್ಯಾಪಿಸಿದ (ಕೃಷ್ಣನ) ರೂಪ; ಬೀಳುಕೊಡು: ತೆರಳು;
ಪದವಿಂಗಡಣೆ:
ದೇವ +ಭಕ್ತ+ಜನ+ಆರ್ತಿ+ಪಾಲಕ
ದೇವ +ಬಹಳ+ಕೃಪ+ಮಹಾರ್ಣವ
ದೇವ +ಸರ್ವೇಶ್ವರ +ಸದಾತ್ಮಕ +ಸಕಲ+ ನಿಷ್ಕಳನೆ
ಸೇವಕರಲ್+ಆರೈವರೇ +ಸುಗು
ಣ+ಅವಗುಣವನು +ನಿಮ್ಮ +ಭೃತ್ಯನ
ಭಾವ +ಬೆಚ್ಚಿತು+ ವಿಶ್ವರೂಪವ +ಬೀಳುಕೊಡಿಯೆಂದ
ಅಚ್ಚರಿ:
(೧) ಸ ಕಾರದ ತ್ರಿವಳಿ ಪದ – ಸರ್ವೇಶ್ವರ ಸದಾತ್ಮಕ ಸಕಲ
(೨) ಮೊದಲಿನಂತಾಗು ಎಂದು ಹೇಳುವ ಪರಿ – ವಿಶ್ವರೂಪವ ಬೀಳುಕೊಡಿಯೆಂದ