ಪದ್ಯ ೪: ಕೃಷ್ಣನ ಯೋಚನೆಗೆ ಕಾರಣವೇನು?

ಹಿರಿದು ಹರಿ ಚಿಂತಿಸಿದನೀ ವ್ಯತಿ
ಕರವನರಿಯದ ಮುಗುದರಿದನಾ
ರರಿವರೈ ವಿಶ್ವಂಭರಾ ಭಾರಾಪರೋದನಕೆ
ಧರಣಿಯಲಿ ಮೈಗೊಂಡು ದೈತ್ಯರ
ನೊರಸಿದನು ಬಳಿಕುಳಿದ ಪಾಂಡವ
ಕುರುನೃಪರ ಕದಡಿಸಿದನೆಲೆ ಭೂಪಾಲ ಕೇಳೆಂದ (ಅರಣ್ಯ ಪರ್ವ, ೨ ಸಂಧಿ, ೪ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಶ್ರೀ ಕೃಷ್ಣನು ಬಹುವಾಗಿ ಚಿಂತೆಯಲ್ಲಿ ಮುಳುಗಿ ಹೋದನು. ಈ ಚಿಂತೆಯು ಏಕಮುಖದಲ್ಲಿ ಪಾಂಡವರ ಸಂಕಟಕ್ಕೆ ಮರುಗುವುದು ಒಂದು ಕಾರಣವಾದರೆ, ಭೂಭಾರವನ್ನು ತಗ್ಗಿಸಲು ಅವತರಿಸಿ ರಾಕ್ಷಸರನ್ನು ಕೊಂದು, ಈಗ್ ಪಾಂಡವ ಕೌರವರ ನಡುವೆ ದ್ವೇಷವನ್ನುಂಟುಮಾಡಿ ದುಷ್ಟಕ್ಷತ್ರಿಯರ ಸಂಹಾರ ಮಾಡಿಸುವುದು ಇನ್ನೊಂದು ಕಾರಣ ಎಂದು ವೈಶಂಪಾಯನರು ತಿಳಿಸಿದರು.

ಅರ್ಥ:
ಹಿರಿದು: ದೊಡ್ಡ; ಹರಿ: ಕೃಷ್ಣ; ಚಿಂತಿಸು: ಯೋಚಿಸು; ವ್ಯತಿಕರ: ಆಪತ್ತು, ಕೇಡು, ಸಂದರ್ಭ; ಅರಿ: ತಿಳಿ; ಮುಗುದೆ: ಮುಗ್ದೆ; ವಿಶ್ವಂಭರ: ಜಗತ್ತನ್ನು ಕಾಪಾಡುವವನು; ಭಾರ: ಹೊರೆ; ರೋದನ: ಅಳಲು; ಧರಣಿ: ಭೂಮಿ; ಮೈಗೊಂಡು: ಶರೀರವನ್ನು ಪಡೆದು; ದೈತ್ಯ: ರಾಕ್ಷಸ; ಒರಸು: ನಾಶಮಾಡು; ಬಳಿಕ: ನಂತರ; ಉಳಿದ: ಮಿಕ್ಕ; ನೃಪ: ರಾಜ; ಕದಡು: ಕಲುಕು; ಭೂಪಾಲ: ರಾಜ;

ಪದವಿಂಗಡಣೆ:
ಹಿರಿದು +ಹರಿ +ಚಿಂತಿಸಿದನ್+ಈ+ ವ್ಯತಿ
ಕರವನ್+ಅರಿಯದ +ಮುಗುದರ್+ಇದನ್
ಆರ್+ಅರಿವರೈ +ವಿಶ್ವಂಭರಾ +ಭಾರಾಪ+ರೋದನಕೆ
ಧರಣಿಯಲಿ +ಮೈಗೊಂಡು +ದೈತ್ಯರನ್
ಒರಸಿದನು +ಬಳಿಕುಳಿದ +ಪಾಂಡವ
ಕುರುನೃಪರ+ ಕದಡಿಸಿದನ್+ಎಲೆ +ಭೂಪಾಲ +ಕೇಳೆಂದ

ಅಚ್ಚರಿ:
(೧) ಪಾಂಡವರ ಗುಣವನ್ನು ವರ್ಣಿಸುವ ಪರಿ – ವ್ಯತಿಕರವನರಿಯದ ಮುಗುದರಿದನಾ
ರರಿವರೈ ವಿಶ್ವಂಭರಾ