ಕಾಲ ಕೈಗೂಡುವೊಡೆ ಲೇಸಿನ
ಮೇಲೆ ಲೇಸುಗಳೊದಗುವವು ಭೂ
ಪಾಲ ಕುಂತಿಯ ಸುತರ ಬೆಳವಿಗೆ ಮೊದಲ ಮಂಗಳವು
ಮೇಲೆ ತಂಗಿಯ ಮಗನ ಮದುವೆ ವಿ
ಶಾಲ ಸುಖವದು ನಿಖಿಳಯಾದವ
ಜಾಲ ಪಯಣವ ಮಾಡಲೆಂದಸುರಾರಿ ನೇಮಿಸಿದ (ವಿರಾಟ ಪರ್ವ, ೧೧ ಸಂಧಿ, ೪೨ ಪದ್ಯ)
ತಾತ್ಪರ್ಯ:
ಒಳ್ಳೆಯ ಕಾಲ ಬಂದಾಗ ಶುಭದ ಮೇಲೆ ಶುಭವು ಉಂಟಾಗುತ್ತದೆ. ಪಾಂಡವರ ಏಳಿಗೆಯು ಮೊದಲ ಶುಭಕಾರ್ಯ. ಅದರ ಮೇಲೆ ತಂಗಿ ಸುಭದ್ರೆಯ ಮಗ ಅಭಿಮನ್ಯುವಿನ ಮದುವೆ, ಸುಖದ ಕಾಲ ಬಂದಿದೆ, ಸಮಸ್ತ ಯಾದವರೂ ಹೊರಡಲಿ ಎಂದು ಶ್ರೀಕೃಷ್ಣನು ಅಪ್ಪಣೆಯನ್ನು ನೀಡಿದನು.
ಅರ್ಥ:
ಕಾಲ: ಸಮಯ; ಕೈಗೂಡು: ನೆರವೇರು; ಲೇಸು: ಒಳಿತು; ಒದಗು: ಲಭ್ಯ, ದೊರೆತುದು; ಭೂಪಾಲ: ರಾಜ; ಸುತ: ಮಕ್ಕಳು; ಬೆಳವಿಗೆ: ಏಳಿಗೆ; ಮಂಗಳ: ಶುಭ; ತಂಗಿ: ಸಹೋದರಿ; ಮಗ: ಸುತ; ಮದುವೆ: ವಿವಾಹ; ವಿಶಾಲ: ದೊಡ್ಡ; ಸುಖ: ಸಂತ್ಸ; ನಿಖಿಳ: ಎಲ್ಲಾ; ಜಾಲ: ಗುಂಪು; ಪಯಣ: ಪ್ರಯಾಣ, ಸಂಚಾರ; ಅಸುರಾರಿ: ರಾಕ್ಷಸರ ವೈರಿ; ನೇಮಿಸು: ಹೇಳು, ಅಪ್ಪಣೆ ಮಾಡು;
ಪದವಿಂಗಡಣೆ:
ಕಾಲ+ ಕೈಗೂಡುವೊಡೆ +ಲೇಸಿನ
ಮೇಲೆ +ಲೇಸುಗಳ್+ಒದಗುವವು +ಭೂ
ಪಾಲ +ಕುಂತಿಯ +ಸುತರ+ ಬೆಳವಿಗೆ+ ಮೊದಲ+ ಮಂಗಳವು
ಮೇಲೆ +ತಂಗಿಯ +ಮಗನ +ಮದುವೆ +ವಿ
ಶಾಲ +ಸುಖವದು +ನಿಖಿಳ+ಯಾದವ
ಜಾಲ +ಪಯಣವ +ಮಾಡಲೆಂದ್+ಅಸುರಾರಿ +ನೇಮಿಸಿದ
ಅಚ್ಚರಿ:
(೧) ಭೂಪಾಲ, ವಿಶಾಲ, ಜಾಲ – ಪ್ರಾಸ ಪದಗಳು