ಕರೆಸಿದನು ಹರಿ ಪಾಂಡುಪುತ್ರರ
ನರಸಿ ಸಹಿತೇಕಾಂತಭವನ ದೊ
ಳುರುತರ ಪ್ರೇಮೈಕ ರಸ ಸಂಸಿಕ್ತ ವಚನದಲಿ
ಭರಿತವಾಯಿತೆ ರಾಜಸೂಯಾ
ಧ್ವರ ಸದಾಹುತಿ ತೃಪ್ತ್ಯಮಾಣಾ
ಮರ ಮಹೀಶ್ವರ ವಿಭವ ವಿಳಸಿತ ಪಾಂಡುಪದವೆಂದ (ಸಭಾ ಪರ್ವ, ೧೨ ಸಂಧಿ, ೧೨ ಪದ್ಯ)
ತಾತ್ಪರ್ಯ:
ಎಲ್ಲಾ ರಾಜರು ತೆರಳಿದ ನಂತರ, ಶ್ರೀಕೃಷ್ಣನು ಪಾಂಡವರನ್ನು ಮತ್ತು ದ್ರೌಪದಿಯನ್ನು ಏಕಾಂತಭವನಕ್ಕೆ ಕರೆಸಿದನು. ಅವರು ಬಂದ ಮೇಲೆ ಪ್ರೀತಿಯಿಂದ ಮಾತುಗಳನ್ನಾಡಿ, ಒಳ್ಳೆಯ ಆಹಿತಿಯಿಂದ ದೇವತೆಗಳಿಗೆ ತೃಪ್ತಿಯನ್ನು ನೀಡಿದ ರಾಜಸೂಯ ಯಾಗವು ಸಂಪನ್ನವಾಯಿತೆ ಎಂದು ಕೇಳುತ್ತಾ, ನಿಮ್ಮ ತಂದೆ ಪಾಂಡುರಾಜನು ಈ ಯಾಗದ ಸಮಾಪ್ತಿಯಿಂದ ವೈಭವದಿಂದ ದೇವೇಂದ್ರನ ಆಸ್ಥಾನವನ್ನು ಸೇರಿದನೇ ಎಂದು ಕೇಳಿದನು.
ಅರ್ಥ:
ಕರೆಸು: ಬರೆಮಾಡು; ಹರಿ: ಕೃಷ್ಣ; ಪುತ್ರ: ಮಗ; ಅರಸಿ: ರಾಣಿ; ಸಹಿತ: ಜೊತೆ; ಏಕಾಂತ: ಒಂಟಿಯಾದ; ಭವನ: ಆಲಯ; ಉರುತರ: ಅತಿಶ್ರೇಷ್ಠ; ಪ್ರೇಮ: ಒಲವು; ರಸ: ಸಾರ; ಸಂಸಕ್ತ: ಆಸಕ್ತ; ವಚನ: ನುಡಿ, ಮಾತು; ಭರಿತ: ತುಂಬಿದ; ಅಧ್ವರ: ಯಾಗ; ಆಹುತಿ: ಯಜ್ಞಾಯಾಗಾದಿಗಳಲ್ಲಿ ದೇವತೆಗಳಿಗಾಗಿ ಅಗ್ನಿಯಲ್ಲಿ ಅರ್ಪಿಸುವ ಹವಿಸ್ಸು; ತೃಪ್ತ: ಸಂತುಷ್ಟಿ; ಅಮರ: ದೇವತೆ; ಮಹೀಶ್ವರ: ರಾಜ; ವಿಭವ: ಸಿರಿ, ಸಂಪತ್ತು; ವಿಳಸಿತ: ಮನೋಹರವಾದ; ಪದ: ಸ್ಥಾನ;
ಪದವಿಂಗಡಣೆ:
ಕರೆಸಿದನು+ ಹರಿ+ ಪಾಂಡುಪುತ್ರರನ್
ಅರಸಿ +ಸಹಿತ+ಏಕಾಂತ+ಭವನ+ ದೊಳ್
ಉರುತರ+ ಪ್ರೇಮೈಕ +ರಸ+ ಸಂಸಿಕ್ತ +ವಚನದಲಿ
ಭರಿತವಾಯಿತೆ +ರಾಜಸೂಯ
ಅಧ್ವರ +ಸದ್+ಆಹುತಿ+ ತೃಪ್ತ್ಯಮಾಣ
ಅಮರ +ಮಹೀಶ್ವರ+ ವಿಭವ +ವಿಳಸಿತ+ ಪಾಂಡುಪದವೆಂದ
ಅಚ್ಚರಿ:
(೧) ಪ್ರೀತಿಯ ಭಾವ – ಉರುತರ ಪ್ರೇಮೈಕ ರಸ ಸಂಸಿಕ್ತ ವಚನದಲಿ
(೨) ದ್ರೌಪದಿಯನ್ನು ಅರಸಿ ಎಂದು ಕರೆದಿರುವುದು