ಪದ್ಯ ೨೬: ಯಾರಿಗೆ ಪರಲೋಕವು ಲಭಿಸುವುದಿಲ್ಲ -೩?

ಸ್ವಾಮಿಕಾರ್ಯ ವಿಘಾತಕಂಗತಿ
ಕಾಮುಕಗೆ ಮಿಥ್ಯಾಪವಾದಿಗೆ
ಭೂಮಿದೇವ ದ್ವೇಷಿಗತ್ಯಾಶಿಗೆ ಬಕವ್ರತಿಗೆ
ಗ್ರಾಮಣಿಗೆ ಪಾಷಂಡಗಾತ್ಮವಿ
ರಾಮಕಾರಿಗೆ ಕೂಟ ಸಾಕ್ಷಿಗೆ
ನಾಮಧಾರಿಗೆ ಪಾರ್ಥ ಕೇಳ್ ಪರಲೋಕವಿಲ್ಲೆಂದ (ಅರಣ್ಯ ಪರ್ವ, ೫ ಸಂಧಿ, ೨೬ ಪದ್ಯ)

ತಾತ್ಪರ್ಯ:
ಅರ್ಜುನ ಕೇಳು, ಸ್ವಾಮಿಕಾರ್ಯವನ್ನು ಕೆಡಿಸುವವನಿಗೆ, ಅತಿ ಕಾಮುಕನಿಗೆ, ಸುಳ್ಳು ಅಪವಾದವನ್ನು ಹೊರಿಸುವವನಿಗೆ, ಬ್ರಾಹ್ಮಣ ದ್ವೇಷಿಗೆ, ಅತಿ ಆಶೆಯನ್ನಿಟ್ಟು ಕೊಂಡವನಿಗೆ, ಅತಿ ಆಸೆಯನ್ನಿಟ್ಟುಕೊಂಡವನಿಗೆ, ಅನುಪಕಾರಿಗೆ, ಮೋಸಮಾಡುವವನಿಗೆ, ಡಂಭಾಚಾರಿಯಾದವನಿಗೆ, ಸುಳ್ಳು ಲೆಕ್ಕಗಳನ್ನು ಹೇಳುವ ಗ್ರಾಮದ ಒಡೆಯನಿಗೆ, ಪಾಷಂಡಿಗೆ, ಆತ್ಮವನ್ನು ಮರೆತವನಿಗೆ, ಸುಳ್ಳು ಸಾಕ್ಷಿಹೇಳುವವನಿಗೆ, ನಾಮಧಾರಿಗೆ ಸೋಗು ಹಾಕುವವನಿಗೆ ಪರಲೋಕವಿಲ್ಲೆಂದು ಧರ್ಮಜನು ಹೇಳಿದನು.

ಅರ್ಥ:
ಸ್ವಾಮಿ: ಒಡೆಯ; ಕಾರ್ಯ: ಕೆಲಸ; ವಿಘಾತ: ನಾಶ; ಅತಿ: ಬಹಳ; ಕಾಮುಕ: ಕಾಮಾಸಕ್ತನಾದವನು, ಲಂಪಟ; ಮಿಥ್ಯ: ಸುಳ್ಳು; ಅಪವಾದ: ನಿಂದೆ, ಆರೋಪ; ಭೂಮಿ: ಪೃಥ್ವಿ; ದೇವ: ಒಡೆಯ;ದ್ವೇಷಿ: ಶತ್ರು; ಅತ್ಯಾಶಿ: ಅತಿ ಆಸೆ ಪಡುವ; ಬಕ: ಕಪಟಿ, ವಂಚಕ; ಗ್ರಾಮ: ಹಳ್ಳಿ; ಪಾಷಂಡ: ಪಾಖಂಡ, ವೈದಿಕ ಸಂಪ್ರ ದಾಯಕ್ಕೆ ವಿರುದ್ಧವಾದ ಮತ; ಆತ್ಮ: ಜೀವ; ವಿರಾಮ: ಬಿಡುವು, ವಿಶ್ರಾಂತಿ; ಕೂಟ: ಒಡನಾಟ; ಸಾಕ್ಷಿ: ಪುರಾವೆ, ರುಜುವಾತು; ನಾಮಧಾರಿ: ಹರಿದಾಸ ದೀಕ್ಷೆ ಹೊಂದಿದವ, ವೈಷ್ಣವ; ಪರಲೋಕ: ಬೇರೆ ಲೋಕ;

ಪದವಿಂಗಡಣೆ:
ಸ್ವಾಮಿಕಾರ್ಯ+ ವಿಘಾತಕಂಗ್+ಅತಿ
ಕಾಮುಕಗೆ +ಮಿಥ್ಯ+ಅಪವಾದಿಗೆ
ಭೂಮಿದೇವ +ದ್ವೇಷಿಗ್+ಅತಿ+ಆಶಿಗೆ+ ಬಕವ್ರತಿಗೆ
ಗ್ರಾಮಣಿಗೆ +ಪಾಷಂಡಗ್+ಆತ್ಮ+ವಿ
ರಾಮಕಾರಿಗೆ +ಕೂಟ +ಸಾಕ್ಷಿಗೆ
ನಾಮಧಾರಿಗೆ +ಪಾರ್ಥ +ಕೇಳ್ +ಪರಲೋಕವಿಲ್ಲೆಂದ

ಅಚ್ಚರಿ:
(೧) ವಿಘಾತ, ಕಾಮುಕ, ಅಪವಾದಿ, ದ್ವೇಷಿ, ಬಕವ್ರತಿ, ಪಾಷಂಡ,ವಿರಾಮಕಾರಿ, ನಾಮಧಾರಿ – ಮನುಷ್ಯರ ಸ್ವಭಾವಗಳನ್ನು ಹೇಳುವ ಪದ್ಯ