ಅದರಲ್ಲಿ ಶುಭಾಶುಭದ ಫಲ
ಬೀದಿವರಿಸುವುದೈಸಲೇ ನಿಮ
ಗೀ ದುರಾಗ್ರಹವೇಕೆ ಕಾಂಬಿರಿ ಫಲವನಗ್ರದಲಿ
ಆದುದಾಗಲಿ ಹೋಗಿಯೆನೆ ದು
ರ್ಭೇದ ಗರ್ವ ಗ್ರಂಥಿಕಲುಷ ವಿ
ನೋದಶೀಲರು ಭುಜವ ಹೊಯ್ದರು ನೋಡಬಹುದೆನುತೆ (ಅರಣ್ಯ ಪರ್ವ, ೧೮ ಸಂಧಿ, ೨೭ ಪದ್ಯ)
ತಾತ್ಪರ್ಯ:
ದುರ್ಯೋಧನನ ಮೊಂಡತನದ ಉತ್ತರಕ್ಕೆ ಭೀಷ್ಮರು, ನೀವು ಮಾಡಿದ ಶುಭ ಮತ್ತು ಅಶುಭ ಕರ್ಮಗಳ ಫಲವು ನಿಮ್ಮನ್ನು ಅಕಾರ್ಯಕ್ಕೆ ಎಳೆದೊಯ್ಯುತ್ತದೆ, ಬೇಡವೆಂದರೂ ಹೋಗಿಯೇ ತೀರ್ವೆವೆಂಬ ಈ ದುರಾಗ್ರಹ ನಿಮಗೇಕೆ? ನಮಗೆ ತಿಳಿಯದು, ಆದದ್ದಾಗಲಿ ನೀವು ಹೋಗಿರಿ ಎಂದು ಹೇಳಲು, ದುರ್ಯೋಧನನು, ಪರಿಹರಿಸಲಾರದ ಗರ್ವದ ಗಂಟಿನ ಕೊಳೆಯಲ್ಲಿ ವಿನೋದವನ್ನು ಕಾಣುವ ಕೌರವನೂ ಪರಿವರದವರೂ ತೋಳುಕಟ್ಟಿ ನೋಡಬಹುದು ಎಂದು ಸಂತಸಪಟ್ಟರು.
ಅರ್ಥ:
ಶುಭ: ಮಂಗಳ; ಅಶುಭ: ಮಂಗಳಕರವಲ್ಲದ; ಫಲ: ಫಲಿತಾಂಶ; ಬೀದಿ: ಮಾರ್ಗ, ಹರಹು; ಐಸಲೇ: ಅಲ್ಲವೇ; ದುರಾಗ್ರಹ: ಹಟಮಾರಿತನ, ಮೊಂಡ; ಕಾಂಬು: ನೋಡು; ಅಗ್ರ: ಮುಂದೆ; ಹೋಗು: ತೆರಳು; ಭೇದ: ಬಿರುಕು, ಛಿದ್ರ; ಗರ್ವ: ಅಹಂಕಾರ; ಗ್ರಂಥಿ: ಕಟ್ಟು, ಬಂಧ; ಕಲುಷ: ಕಳಂಕ, ಸಿಟ್ಟಿಗೆದ್ದ; ವಿನೋದ: ಸಂತಸ; ಶೀಲ: ಗುಣ; ಭುಜ: ಬಾಹು; ಹೊಯ್ದು: ಹೊಡೆದು; ನೋಡು: ವೀಕ್ಷಿಸು;
ಪದವಿಂಗಡಣೆ:
ಅದರಲ್ಲಿ +ಶುಭ+ಅಶುಭದ +ಫಲ
ಬೀದಿವರಿಸುವುದ್+ಐಸಲೇ +ನಿಮಗ್
ಈ+ ದುರಾಗ್ರಹವೇಕೆ+ ಕಾಂಬಿರಿ+ ಫಲವನ್+ಅಗ್ರದಲಿ
ಆದುದಾಗಲಿ +ಹೋಗಿಯೆನೆ +ದು
ರ್ಭೇದ +ಗರ್ವ +ಗ್ರಂಥಿ+ಕಲುಷ+ ವಿ
ನೋದ+ಶೀಲರು +ಭುಜವ +ಹೊಯ್ದರು +ನೋಡಬಹುದೆನುತೆ
ಅಚ್ಚರಿ:
(೧) ಆಡುವ ಪದದ ಬಳಕೆ – ಆದುದಾಗಲಿ
(೨) ಕೌರವರನ್ನು ಬಣ್ಣಿಸುವ ಪರಿ – ದುರ್ಭೇದ ಗರ್ವ ಗ್ರಂಥಿಕಲುಷ ವಿನೋದಶೀಲರು ಭುಜವ ಹೊಯ್ದರು