ಮಾನನಿಧಿ ಕೇಳ್ ಕೌರವಂಗಾ
ಧೀನವೆನ್ನಯ ತನು ವಿಧಾತ್ರಾ
ಧೀನವೆನ್ನಯ ಜೀವವದು ಕಾರಣದಿನಾಹವಕೆ
ನೀನು ಚಂತಿಸಬೇಡ ನನ್ನವ
ಸಾನಕಾಲಕೆ ಮತ್ತೆ ಬರಲು ನಿ
ದಾನವನು ನೆರೆ ಬುದ್ಧಿಗಲಿಸುವೆನೀಗ ಮರಳೆಂದ (ಭೀಷ್ಮ ಪರ್ವ, ೨ ಸಂಧಿ, ೨೯ ಪದ್ಯ)
ತಾತ್ಪರ್ಯ:
ಭೀಷ್ಮನು ಎಲೈ ಮಾನನಿಧಿಯಾದ ಧರ್ಮಜನೇ, ಅನ್ನದ ಹಂಗಿನಿಂದ ಈ ದೇಹವು ದುರ್ಯೋಧನನಿಗೆ ಅಧೀನ. ಆದರೆ ನನ್ನ ಜೀವನವು ಬ್ರಹ್ಮನ ಬರಹಕ್ಕಧೀನ. ಆದುದರಿಂದ ನೀನು ಚಿಮ್ತಿಸಬೇಡ, ನನ್ನ ಮರಣಕಾಲಕ್ಕೆ ನನ್ನ ಬಳಿ ಬಂದೆ, ನಾನು ನಿನಗೆ ಬುದ್ಧಿ ಕಲಿಸುತ್ತೇನೆ ಎಂದು ಧರ್ಮಜನಿಗೆ ಹೇಳಿದನು.
ಅರ್ಥ:
ಮಾನನಿಧಿ: ಮಾನವನ್ನೇ ಐಶ್ವರ್ಯವಾಗಿಕೊಂಡಿರುವವ; ಮಾನ: ಮರ್ಯಾದೆ, ಗೌರವ; ನಿಧಿ: ಐಶ್ವರ್ಯ; ಕೇಳು: ಆಲಿಸು; ಅಧೀನ: ಕೈಕೆಳಗಿರುವ; ತನು: ದೇಹ; ವಿಧಾತ್ರ: ಬ್ರಹ್ಮ; ಅಧೀನ: ವಶ; ಜೀವ: ಪ್ರಾಣ; ಕಾರಣ: ನಿಮಿತ್ತ, ಹೇತು; ಆಹವ: ಯುದ್ಧ; ಚಿಂತಿಸು: ಯೋಚನೆ; ಅವಸಾನ: ಅಂತ್ಯ; ಬರಲು: ಆಗಮಿಸು; ನಿದಾನ: ಸಾವಕಾಶ; ನೆರೆ: ಸಮೀಪ, ಹತ್ತಿರ; ಬುದ್ಧಿ: ತಿಳಿವು, ಅರಿವು; ಕಲಿಸು: ಹೇಳು; ಮರಳು: ತೆರಳು, ಹಿಂದಿರುಗು;
ಪದವಿಂಗಡಣೆ:
ಮಾನನಿಧಿ+ ಕೇಳ್ +ಕೌರವಂಗ್
ಅಧೀನವ್+ಎನ್ನಯ +ತನು +ವಿಧಾತ್ರ
ಅಧೀನವ್+ಎನ್ನಯ +ಜೀವವ್+ಅದು+ ಕಾರಣದಿನ್+ಆಹವಕೆ
ನೀನು +ಚಂತಿಸಬೇಡ +ನನ್
ಅವಸಾನಕಾಲಕೆ+ ಮತ್ತೆ+ ಬರಲು+ ನಿ
ದಾನವನು +ನೆರೆ +ಬುದ್ಧಿ+ಕಲಿಸುವೆನ್+ಈಗ+ ಮರಳೆಂದ
ಅಚ್ಚರಿ:
(೧)ಆಧೀನ ಪದದ ಬಳಕೆ – ೨,೩ ಸಾಲಿನ ಮೊದಲ ಪದ