ಪದ್ಯ ೨೪: ಶ್ರೀಕೃಷ್ಣನ ಸುತ್ತಲೂ ಯಾರಿದ್ದರು?

ಕಲಿವಿಡೂರಥ ಸಾಂಬ ಸಾತ್ಯಕಿ
ದಳಪತಿ ಪ್ರದ್ಯುಮ್ನ ಯಾದವ
ಕುಲಸಚಿವನಕ್ರೂರನುದ್ಧವ ಚಾರು ಕೃತವರ್ಮ
ಬಲು ಪದಾತಿಯ ರಥ ನಿಕರದ
ಗ್ಗಳೆಯ ಗಜ ವಾಜಿಗಳ ಸಂದಣಿ
ಯೊಳಗೆ ನಿಂದರು ಕೃಷ್ಣರಾಯನ ರಥದ ಬಳಸಿನಲಿ (ಸಭಾ ಪರ್ವ, ೧೨ ಸಂಧಿ, ಪದ್ಯ)

ತಾತ್ಪರ್ಯ:
ಶೂರನಾದ ವಿಡೂರಥ, ಸಾಂಬ, ಸಾತ್ಯಕಿ, ಪ್ರದ್ಯುಮ್ನ, ಯಾದವಕುಲಕ್ಕೆ ಸಚಿವನಾದ ಅಕ್ರೂರ, ಉದ್ಧವ, ಕೃತವರ್ಮ ಇವರೆಲ್ಲರೂ ಅಪಾರವಾಗಿದ್ದ ಚತುರಂಗ ಸೈನ್ಯದೊಡನೆ ಶ್ರೀಕೃಷ್ಣನ ಸುತ್ತಲೂ ನಿಂತಿದ್ದರು.

ಅರ್ಥ:
ಕಲಿ: ಶೂರ; ದಳಪತಿ: ಸೇನಾಧಿಪತಿ; ಕುಲ: ವಂಶ; ಸಚಿವ: ಮಂತ್ರಿ; ಚಾರು: ಸುಂದರ; ಬಲು: ಬಹಳ; ಪದಾತಿ: ಸೈನ್ಯ; ರಥ: ಬಂಡಿ; ನಿಕರ: ಗುಂಪು, ಸಮೂಹ; ಅಗ್ಗಳೆ: ಶ್ರೇಷ್ಠ; ಗಜ: ಆನೆ; ವಾಜಿ: ಕುದುರೆ; ಸಂದಣಿ: ಗುಂಪು; ನಿಂದರು: ನಿಲ್ಲು; ಬಳಸು:ಸುತ್ತುವರಿ, ಸುತ್ತುಗಟ್ಟು;

ಪದವಿಂಗಡಣೆ:
ಕಲಿ+ವಿಡೂರಥ +ಸಾಂಬ +ಸಾತ್ಯಕಿ
ದಳಪತಿ +ಪ್ರದ್ಯುಮ್ನ +ಯಾದವ
ಕುಲ+ಸಚಿವನ್+ಅಕ್ರೂರನ್+ಉದ್ಧವ +ಚಾರು +ಕೃತವರ್ಮ
ಬಲು +ಪದಾತಿಯ +ರಥ +ನಿಕರದ್
ಅಗ್ಗಳೆಯ +ಗಜ+ ವಾಜಿಗಳ +ಸಂದಣಿ
ಯೊಳಗೆ +ನಿಂದರು +ಕೃಷ್ಣರಾಯನ +ರಥದ +ಬಳಸಿನಲಿ

ಅಚ್ಚರಿ:
(೧) ಕೃಷ್ಣನ ಸುತ್ತವಿದ್ದ ಪರಾಕ್ರಮಿಗಳು – ವಿಡೂರಥ, ಸಾಂಬ, ಸಾತ್ಯಕಿ, ಪ್ರದ್ಯುಮ್ನ, ಅಕ್ರೂರ, ಉದ್ಧವ, ಕೃತವರ್ಮ