ಎತ್ತಲೊಲೆವುದು ಧರ್ಮಬಲ ತಾ
ನತ್ತ ಲೊಲೆವುದು ದೈವ ದೈವವ
ದೆತ್ತ ಲೊಲೆದಿಹುದತ್ತ ವಿಜಯಶ್ರೀಯ ಕುಡಿನೋಟ
ಹೆತ್ತ ನಿನ್ನೊಡಲಿಂಗೆ ತಂಪಿನ
ತೆತ್ತಿಗನೊ ಮೇಣ್ ಬಹಳ ತಾಪದ
ಮುತ್ತಯನೊ ಕುರುರಾಯನೆಲೆ ಧೃತರಾಷ್ಟ್ರ ಕೇಳೆಂದ (ದ್ರೋಣ ಪರ್ವ, ೪ ಸಂಧಿ, ೨ ಪದ್ಯ)
ತಾತ್ಪರ್ಯ:
ಧೃತರಾಷ್ಟ್ರ ಕೇಳು, ಧರ್ಮದ ಬಲ ಯಾವ ಕಡೆಗಿದೆಯೋ, ದೈವಬಲವು ಅತ್ತಕಡೆಗಿರುತ್ತದೆ. ದೈವದ ಒಲುಮೆ ಎಲ್ಲಿರುವುದೋ, ಅತ್ತಕಡೆಗೆ ವಿಜಯಲಕ್ಷ್ಮಿಯು ಒಲವಿನ ಕುಡಿನೋಟವನ್ನು ಬೀರುತ್ತಾಳೆ. ಕೌರವನು ನಿನ್ನ ಒಡಲಿಗೆ ತಂಪನ್ನು ತರುವವನೋ, ತಾಪವನ್ನುಂಟು ಮಾದುವವನೋ ಹೇಳು ಎಂದು ಸಂಜಯನು ಕೇಳಿದನು.
ಅರ್ಥ:
ಒಲವು: ಪ್ರೀತಿ; ಧರ್ಮ: ಧಾರಣೆ ಮಾಡಿದುದು; ಬಲ: ಶಕ್ತಿ; ದೈವ: ಭಗವಂತ; ವಿಜಯ: ಗೆಲುವು; ಕುಡಿನೋಟ: ಓರೆಕಣ್ಣಿನ ದೃಷ್ಟಿ; ಹೆತ್ತು: ಹುಟ್ಟಿಸು; ಒಡಲು: ದೇಹ; ತಂಪು: ತಣಿವು; ತೆತ್ತಿಗ: ಬಂಧು, ನಂಟ; ಮೇಣ್: ಇನ್ನು, ಮತ್ತು; ಬಹಳ: ತುಂಬ; ತಾಪ: ಬಿಸಿ, ಸೆಕೆ; ಮುತ್ತು: ಕವಿ, ಆವರಿಸು; ರಾಯ: ರಾಜ; ಕೇಳು: ಆಲಿಸು;
ಪದವಿಂಗಡಣೆ:
ಎತ್ತಲ್+ಒಲೆವುದು +ಧರ್ಮಬಲ +ತಾ
ನತ್ತಲ್+ ಒಲೆವುದು +ದೈವ +ದೈವವದ್
ಎತ್ತಲ್ +ಒಲೆದಿಹುದ್+ಅತ್ತ +ವಿಜಯಶ್ರೀಯ +ಕುಡಿನೋಟ
ಹೆತ್ತ +ನಿನ್ನೊಡಲಿಂಗೆ +ತಂಪಿನ
ತೆತ್ತಿಗನೊ +ಮೇಣ್ +ಬಹಳ +ತಾಪದ
ಮುತ್ತಯನೊ +ಕುರುರಾಯನ್+ಎಲೆ +ಧೃತರಾಷ್ಟ್ರ +ಕೇಳೆಂದ
ಅಚ್ಚರಿ:
(೧) ವಿಜಯ ಒಲೆಯುವ ಪರಿ – ಎತ್ತಲೊಲೆವುದು ಧರ್ಮಬಲ ತಾನತ್ತ ಲೊಲೆವುದು ದೈವ ದೈವವ
ದೆತ್ತ ಲೊಲೆದಿಹುದತ್ತ ವಿಜಯಶ್ರೀಯ ಕುಡಿನೋಟ