ಪದ್ಯ ೩: ಬಲರಾಮನೇಕೆ ಕರಗಿದನು?

ಗುರುವೊ ಗಂಗಾಸುತನೊ ಮಾದ್ರೇ
ಶ್ವರನೊ ಕರ್ಣನೊ ಸೈಂಧವನೊ ಸೋ
ದರರ ಶತಕವೊ ಪುತ್ರ ಮಿತ್ರ ಜ್ಞಾತಿ ಬಾಂಧವರೊ
ಹರಸಿ ಕುರಿಗಳನಿಕ್ಕಿದಡೆ ಗೋ
ಚರಿಸದೇ ರಣವಿಜಯನಿಧಿ ಹರ
ಹರ ಎನುತ ಕರಗಿದನು ಕಡು ಕರುಣದಲಿ ಬಲರಾಮ (ಗದಾ ಪರ್ವ, ೬ ಸಂಧಿ, ೩ ಪದ್ಯ)

ತಾತ್ಪರ್ಯ:
ದ್ರೋಣ, ಭೀಷ್ಮ, ಶಲ್ಯ, ಕರ್ಣ, ಸೈಂಧವ, ನೂರು ಮಂದಿ ತಮ್ಮಂದಿರು ಮಕ್ಕಳು ಗೆಳೆಯರು, ಜ್ಞಾತಿಗಳು, ಬಾಂಧವರು ಎಲ್ಲರನ್ನೂ ಹರಕೆಯ ಕುರಿಗಳಂತೆ ಬಲಿಕೊಟ್ಟೆ. ಜಯದ ನಿಧಿ ಕಾಣಲಿಲ್ಲವೇ? ಶಿವ ಶಿವಾ ಎಂದು ಬಲರಾಮ ಕರುಣೆಯಿಂದ ಕರಗಿ ಹೋದನು.

ಅರ್ಥ:
ಗುರು: ಆಚಾರ್ಯ; ಸುತ: ಮಗ; ಸೋದರ: ತಮ್ಮ; ಶತ: ನೂರು; ಪುತ್ರ: ಸುತ; ಮಿತ್ರ: ಸ್ನೇಹಿತ; ಜ್ಞಾತಿ: ದಾಯಾದಿ; ಬಾಂಧವ: ಬಂಧುಜನ; ಹರಸುಕುರಿ: ಹರಕೆಯ ಕುರಿ; ಗೋಚರಿಸು: ಗೊತ್ತುಪಡಿಸು; ರಣ: ಯುದ್ಧ; ವಿಜಯ: ಗೆಲುವು; ನಿಧಿ: ಸಿರಿ; ಹರ: ಶಿವ; ಕರಗು: ಕನಿಕರ ಪಡು; ಕರುಣ: ದಯೆ;

ಪದವಿಂಗಡಣೆ:
ಗುರುವೊ +ಗಂಗಾಸುತನೊ +ಮಾದ್ರೇ
ಶ್ವರನೊ +ಕರ್ಣನೊ +ಸೈಂಧವನೊ +ಸೋ
ದರರ +ಶತಕವೊ +ಪುತ್ರ+ ಮಿತ್ರ+ ಜ್ಞಾತಿ +ಬಾಂಧವರೊ
ಹರಸಿ +ಕುರಿಗಳನ್+ಇಕ್ಕಿದಡೆ+ ಗೋ
ಚರಿಸದೇ +ರಣ+ವಿಜಯನಿಧಿ +ಹರ
ಹರ +ಎನುತ +ಕರಗಿದನು +ಕಡು +ಕರುಣದಲಿ +ಬಲರಾಮ

ಅಚ್ಚರಿ:
(೧) ರೂಪಕದ ಪ್ರಯೋಗ – ಹರಸಿ ಕುರಿಗಳನಿಕ್ಕಿದಡೆ ಗೋಚರಿಸದೇ ರಣವಿಜಯನಿಧಿ