ಹಿಮದ ಹೊಯ್ಲಲಿ ಸೀದು ಸಿಕ್ಕಿದ
ಕಮಲವನದಂದದಲಿ ಹತವಿ
ಕ್ರಮದ ಕೀರ್ತಿಯ ಬಹಳಭಾರಕೆ ಬಳುಕಿದಾನನದ
ಸುಮುಖತಾ ವಿಚ್ಛೇದ ಕಲುಷ
ಸ್ತಿಮಿತರಿರವನು ಕಂಡು ನಾಳಿನ
ಸಮರಕೇನುದ್ಯೋಗವೆಂದನು ಕೃಪನ ಗುರುಸುತನ (ಶಲ್ಯ ಪರ್ವ, ೧ ಸಂಧಿ, ೧೫ ಪದ್ಯ)
ತಾತ್ಪರ್ಯ:
ಮಂಜಿನ ಹೊಡೆತಕ್ಕೆ ಸಿಕ್ಕು ಸೀದ ಕಮಲವನದಮ್ತೆ ತಮ್ಮ ಮಹಾಪರಾಕ್ರಮದ ಕಿರ್ತಿಯು ಭಂಗೊಂದಲಾಗಿ ಆ ನೋವಿನಿಂದ ಕುಸಿದು ವಿವರ್ಣವಾದ ಮುಖಗಳನ್ನು ಹೊತ್ತು ಸಂತೋಷವನ್ನು ತೊರೆದು ಶೋಕದಿಂದ ತಪ್ತರಾದ ತನ್ನ ವೀರರನ್ನು ಕಂಡು ದುರ್ಯೋಧನನು ಕೃಪಾಚಾರ್ಯ, ಅಶ್ವತ್ಥಾಮ, ನಾಳಿನ ಯುದ್ಧದ ಬಗೆಯೇನು ಎಂದು ಕೇಳಿದನು.
ಅರ್ಥ:
ಹಿಮ: ಮಂಜಿನಗಡ್ಡೆ; ಹೊಯ್ಲು: ಏಟು, ಹೊಡೆತ; ಸೀದು: ಕರಕಲಾಗು; ಕಮಲ: ತಾವರೆ; ವನ: ಕಾಡು; ಹತ: ಸಾವು; ವಿಕ್ರಮ: ಪರಾಕ್ರಮ; ಕೀರ್ತಿ: ಯಶಸ್ಸು; ಬಹಳ: ತುಂಬ; ಭಾರ: ಹೊರೆ, ತೂಕ; ಬಳುಕು: ನಡುಕ, ಕಂಪನ; ಆನನ: ಮುಖ; ಸುಮುಖ: ಸುಂದರವಾದ ಮುಖ; ವಿಚ್ಛೇದ: ತುಂಡು ಮಾಡುವಿಕೆ; ಕಲುಷ: ಕಳಂಕ; ಸ್ತಿಮಿತ: ಭದ್ರವಾದ ನೆಲೆ, ಸ್ಥಿರತೆ; ಕಂಡು: ನೋಡು; ಸಮರ: ಯುದ್ಧ; ಉದ್ಯೋಗ: ಕೆಲಸ; ಸುತ: ಪುತ್ರ;
ಪದವಿಂಗಡಣೆ:
ಹಿಮದ+ ಹೊಯ್ಲಲಿ +ಸೀದು +ಸಿಕ್ಕಿದ
ಕಮಲವನದಂದದಲಿ+ ಹತ+ವಿ
ಕ್ರಮದ +ಕೀರ್ತಿಯ +ಬಹಳ+ಭಾರಕೆ+ ಬಳುಕಿದ್+ಆನನದ
ಸುಮುಖತಾ +ವಿಚ್ಛೇದ +ಕಲುಷ
ಸ್ತಿಮಿತರಿರವನು +ಕಂಡು +ನಾಳಿನ
ಸಮರಕೇನ್+ಉದ್ಯೋಗವೆಂದನು +ಕೃಪನ +ಗುರುಸುತನ
ಅಚ್ಚರಿ:
(೧) ಉಪಮಾನದ ಪ್ರಯೋಗ: ಹಿಮದ ಹೊಯ್ಲಲಿ ಸೀದು ಸಿಕ್ಕಿದ ಕಮಲವನದಂದದಲಿ
(೨) ಕೌರವನ ಸ್ಥಿತಿ – ಹತವಿಕ್ರಮದ ಕೀರ್ತಿಯ ಬಹಳಭಾರಕೆ ಬಳುಕಿದಾನನದ