ಪದ್ಯ ೨೫: ಭೀಮನು ತನ್ನ ಪರಿಚಯವನ್ನು ಹೇಗೆ ಮಾಡಿಕೊಂಡನು?

ಮನುಜರಾವ್ ಸೋಮಾಭಿಕುಲದಲಿ
ಜನಿಸಿದನು ವರ ಪಾಂಡುವಾತನ
ತನುಜರಾವು ಯುಧಿಷ್ಠಿರಾರ್ಜುನ ಭೀಮಯಮಳರಲೆ
ಬನಕೆ ಬಂದೆವು ನಮ್ಮ ದಾಯಾ
ದ್ಯನ ವಿಕಾರದ್ಯೂತಕೇಳೀ
ಜನಿತ ಕಿಲ್ಭಿಷದಿಂದ ರಾಜ್ಯಭ್ರಂಶವಾಯ್ತೆಂದ (ಅರಣ್ಯ ಪರ್ವ, ೧೧ ಸಂಧಿ, ೨೫ ಪದ್ಯ)

ತಾತ್ಪರ್ಯ:
ನಾವು ಮನುಷ್ಯರು, ಚಂದ್ರವಂಶದಲ್ಲಿ ಶ್ರೇಷ್ಠನಾದ ಪಾಂಡು ಮಹಾರಾಜನಿಗೆ ನಾವು ಜನಿಸಿದೆವು. ನಾವು ಐವರು ಅವನ ಮಕ್ಕಳು, ಯುಧಿಷ್ಠಿರ, ಅರ್ಜುನ, ಭೀಮ ಮತ್ತು ನಕುಲ ಸಹದೇವರು. ನಮ್ಮ ದಾಯಾದನ ಕಪಟ ದ್ಯೂತಕ್ಕೆ ಬಲಿಯಾಗಿ ಆ ಕೇಡಿನಿಂದ ನಾವು ರಾಜ್ಯವನ್ನು ಕಳೆದುಕೊಂಡು ಕಾಡಿಗೆ ಬಂದೆವು ಎಂದು ಭೀಮನು ಹೇಳಿದನು.

ಅರ್ಥ:
ಮನುಜ: ನರ; ಸೋಮ: ಚಂದ್ರ; ಕುಲ: ವಂಶ; ಜನಿಸು: ಹುಟ್ಟು; ವರ: ಶ್ರೇಷ್ಠ; ತನುಜ: ಮಕ್ಕಳು; ಯಮಳ: ಅಶ್ವಿನಿ ದೇವತೆಗಳು; ಬನ: ಕಾಡು; ಬಂದೆವು: ಆಗಮಿಸು; ದಾಯಾದಿ: ಚಿಕ್ಕಪ್ಪ ದೊಡ್ಡಪ್ಪನ ಮಕ್ಕಳು; ವಿಕಾರ: ಮನಸ್ಸಿನ ವಿಕೃತಿ; ದ್ಯೂತ: ಪಗಡೆ; ಕೇಳಿ: ಕ್ರೀಡೆ, ವಿನೋದ; ಜನಿತ: ಹುಟ್ಟಿದ; ಕಿಲ್ಬಿಷ: ಪಾಪ;ರಾಜ್ಯಭ್ರಂಶ: ರಾಜ್ಯವನ್ನು ಕಳೆದುಕೊಂಡು;

ಪದವಿಂಗಡಣೆ:
ಮನುಜರಾವ್ +ಸೋಮಾಭಿ+ಕುಲದಲಿ
ಜನಿಸಿದನು +ವರ +ಪಾಂಡುವ್+ಆತನ
ತನುಜರಾವು+ ಯುಧಿಷ್ಠಿರ+ಅರ್ಜುನ +ಭೀಮ+ಯಮಳರಲೆ
ಬನಕೆ+ ಬಂದೆವು +ನಮ್ಮ +ದಾಯಾ
ದ್ಯನ +ವಿಕಾರ+ದ್ಯೂತ+ಕೇಳೀ
ಜನಿತ+ ಕಿಲ್ಭಿಷದಿಂದ +ರಾಜ್ಯಭ್ರಂಶವಾಯ್ತೆಂದ

ಅಚ್ಚರಿ:
(೧) ಭೀಮನು ತನ್ನ ಪರಿಚಯವನ್ನು ಮಾಡಿದ ಪರಿ – ಮನುಜರಾವ್ ಸೋಮಾಭಿಕುಲದಲಿ
ಜನಿಸಿದನು ವರ ಪಾಂಡುವಾತನ ತನುಜರಾವು