ಕನಕಗಿರಿಯಲಿ ವಿಂಧ್ಯಗಿರಿಯಂ
ಜನಗಿರಿಯ ಮಲಯಾದ್ರಿಯಲಿ ಸಂ
ಜನಿಸಿದಾನೆಯ ಸೇನೆಯಲಿ ಬೀಸಿದರು ಚೌರಿಗಳ
ಕನಕಘಂಟೆಗಳುಲಿಯೆ ಹೊರಜೆಯ
ತನತನಗೆ ಹಿಡಿದಡರಿ ಪೂರ್ವಾ
ಸನವ ವೆಂಠಣಿಸಿದರು ರಾಜಾರೋಹಕವ್ರಾತ (ಭೀಷ್ಮ ಪರ್ವ, ೪ ಸಂಧಿ, ೭೩ ಪದ್ಯ)
ತಾತ್ಪರ್ಯ:
ಮೇರು, ವಿಂಧ್ಯ, ಅಂಜನ, ಮಲಯ ಪರ್ವತಗಳಲ್ಲಿ ಹುಟ್ಟಿದ್ ಆನೆಗಳಿಗೆ ಚೌರಿಯನ್ನು ಬೀಸಿ, ಕಾಳಗಕ್ಕೆ ಅಪ್ಪಣೆ ಕೊಟ್ಟರು. ಬಂಗಾರದ ಗಂಟೆಗಳು ಸದ್ದು ಮಾಡುತ್ತಿರಲು ಹಗ್ಗಗಳನ್ನು ಹಿಡಿದು ಮೇಲೆ ಹತ್ತಿ ಮೊದಲೇ ತಮಗಾಗಿ ಸಿದ್ಧಪಡಿಸಿದ ಆಸನಗಳಲ್ಲಿ ಮಾವುತರು ಕುಳಿತರು.
ಅರ್ಥ:
ಕನಕ: ಚಿನ್ನ; ಗಿರಿ: ಬೆಟ್ಟ; ಕನಕಗಿರಿ: ಮೇರು ಪರ್ವತ; ಅದ್ರಿ: ಬೆಟ್ಟ; ಸಂಜನಿಸು: ಹುಟ್ಟು; ಆನೆ: ಕರಿ; ಸೇನೆ: ಸೈನ್ಯ; ಬೀಸು: ತೂಗುವಿಕೆ, ಸಂಚಾರ; ಚೌರಿ: ಚಾಮರ; ಘಂಟೆ: ಘಣಘಣ ಎಂದು ಶಬ್ದ ಮಾಡುವ ಸಾಧನ; ಉಲಿ: ಶಬ್ದ; ಹೊರಜೆ: ದಪ್ಪವಾದ ಹಗ್ಗ; ಹಿಡಿ: ಬಂಧಿಸು; ಅಡರು: ಮೇಲಕ್ಕೆ ಹತ್ತು; ಪೂರ್ವಾಸನ: ಮೊದಲೇ ವೆಂಠಣಿಸು: ಮುತ್ತಿಗೆ ಹಾಕು, ಬಳಸು; ರಾಜರೋಹಕ: ವಾಹವನ್ನೇರಿದ ರಾಜ; ವ್ರಾತ: ಗುಂಪು;
ಪದವಿಂಗಡಣೆ:
ಕನಕಗಿರಿಯಲಿ +ವಿಂಧ್ಯಗಿರಿ
ಅಂಜನಗಿರಿಯ +ಮಲಯ+ಅದ್ರಿಯಲಿ +ಸಂ
ಜನಿಸಿದ್+ಆನೆಯ +ಸೇನೆಯಲಿ +ಬೀಸಿದರು +ಚೌರಿಗಳ
ಕನಕ+ಘಂಟೆಗಳ್+ಉಲಿಯೆ +ಹೊರಜೆಯ
ತನತನಗೆ+ ಹಿಡಿದ್+ಅಡರಿ+ ಪೂರ್ವಾ
ಸನವ +ವೆಂಠಣಿಸಿದರು+ ರಾಜಾರೋಹಕವ್ರಾತ
ಅಚ್ಚರಿ:
(೧) ಬೆಟ್ಟಗಳ ಹೆಸರುಗಳಿಂದ ಹೋಲಿಸುವ ಪರಿ – ಕನಕಗಿರಿ, ವಿಂಧ್ಯಗಿರಿ, ಅಂಜನಗಿರಿ, ಮಲಯಾದ್ರಿ