ಪದ್ಯ ೩೨: ಭೀಮನು ಯಾರನ್ನು ಸಂಹರಿಸಿದನು?

ವಿಂದನನುವಿಂದನನು ಚಿತ್ರಕ
ನಂದನನ ಚಿತ್ರಾಂಗದನ ಸಾ
ನಂದ ದುಸ್ಸಹ ಶಂಕುಕರ್ಣ ಸುದೀರ್ಘಬಾಹುಕನ
ನಂದ ಚಿತ್ರಾಂಬಕನ ಕುಂತಿಯ
ನಂದನನು ಬರಿಕೈದು ಭಾಸ್ಕರ
ನಂದನಾಶ್ವತ್ಥಾಮರನು ಮೂದಲಿಸಿ ತಾಗಿದನು (ದ್ರೋಣ ಪರ್ವ, ೧೨ ಸಂಧಿ, ೩೨ ಪದ್ಯ)

ತಾತ್ಪರ್ಯ:
ವಿಂದ, ಅನುವಿಂದ, ಚಿತ್ರಕನ ಮಗನಾದ ಚಿತ್ರಾಂಗದ, ಸಾನಂದ, ದುಸ್ಸಹ, ಶಂಕುಕರ್ಣ, ದೀರ್ಘಬಾಹು, ಚಿತ್ರಾಂಬಕರನ್ನು ಸಂಹರಿಸಿದ ಭೀಮನು ಕರ್ಣ ಅಶ್ವತ್ಥಾಮರನ್ನು ಮೂದಲಿಸಿ ಯುದ್ಧಕ್ಕೆ ನುಗ್ಗಿದನು.

ಅರ್ಥ:
ನಂದನ: ಮಗ; ಕೈದು: ಆಯುಧ, ಶಸ್ತ್ರ; ಭಾಸ್ಕರ: ರವಿ; ಮೂದಲಿಸು: ಹಂಗಿಸು; ಗಾಗು: ಮುಟ್ಟು;

ಪದವಿಂಗಡಣೆ:
ವಿಂದನ್+ಅನುವಿಂದನನು +ಚಿತ್ರಕ
ನಂದನನ +ಚಿತ್ರಾಂಗದನ +ಸಾ
ನಂದ +ದುಸ್ಸಹ +ಶಂಕುಕರ್ಣ +ಸುದೀರ್ಘಬಾಹುಕನ
ನಂದ+ ಚಿತ್ರಾಂಬಕನ+ ಕುಂತಿಯ
ನಂದನನು +ಬರಿಕೈದು+ ಭಾಸ್ಕರ
ನಂದನ+ಅಶ್ವತ್ಥಾಮರನು +ಮೂದಲಿಸಿ +ತಾಗಿದನು

ಅಚ್ಚರಿ:
(೧) ನಂದ ಪದದ ಬಳಕೆ – ೨-೬ ಸಾಲಿನ ಮೊದಲ ಪದ
(೨) ಚಿತ್ರಕನಂದನ, ಕುಂತಿಯ ನಂದನ, ಭಾಸ್ಕರ ನಂದನ – ಪದಗಳ ಬಳಕೆ

ಪದ್ಯ ೨೭: ಬಂದ ಅತಿಥಿಗಳಲ್ಲಿ ಯಾಗಕ್ಕೆ ಯಾರು ಯೋಗ್ಯರೆಂದು ಶಿಶುಪಾಲ ಹಂಗಿಸಿದನು?

ವಿಂದನನುವಿಂದಾ ಮಹೀಶರು
ಬಂದಿರೈ ಕಾಂಭೋಜ ನೃಪನೈ
ತಂದೆಲಾ ಗಾಂಧಾರ ಶಕುನಿ ಬೃಹದ್ರಥಾಗಿಗಳು
ಬಂದರಿಲ್ಲಿಗೆ ಧರ್ಮಸಾಧನ
ವೆಂದು ಬಯಸಿದಿರಿವರ ಯಾಗಕೆ
ನಂದಗೋಪನ ಮಕ್ಕಳಲ್ಲದೆ ಯೋಗ್ಯರಿಲ್ಲೆಂದ (ಸಭಾ ಪರ್ವ, ೯ ಸಂಧಿ, ೨೭ ಪದ್ಯ)

ತಾತ್ಪರ್ಯ:
ಈ ಮಹಾ ರಾಜಸೂಯ ಯಜ್ಞಕ್ಕೆ ವಿಂದ, ಅನುವಿಂದ, ಕಾಂಭೋಜ ಮುಂತಾದ ರಾಜರು ಆಗಮಿಸಿರುವುರು, ಗಾಂಧಾರ, ಶಕುನಿ, ಬೃಹದ್ರಥಾದಿಗಳು ಸಹ ಇಲ್ಲಿಗೆ ಬಂದಿದ್ದಾರೆ. ಇದು ಧರ್ಮಸಾಧನವಾದ ಯಾಗವೆಂದು ತಿಳಿದಿದ್ದಾರೆ, ಅದರೆ ಈ ಯಾಗಕ್ಕೆ ನಂದಗೋಪನ ಮಗನಲ್ಲದೆ ಇನ್ನಾರು ಅರ್ಹರಲ್ಲವೆಂದು ತಿಳಿಯುತ್ತದೆ ಎಂದು ಶಿಶುಪಾಲ ಹಂಗಿಸಿದನು.

ಅರ್ಥ:
ಮಹಿ: ಭೂಮಿ; ಮಹೀಶ್ವರ: ರಾಜ; ಬಂದು: ಆಗಮಿಸು; ನೃಪ: ರಾಜ; ಐತಂದು: ಆಗಮಿಸು;
ಧರ್ಮ: ಧಾರಣ ಮಾಡಿದುದು; ಸಾಧನ: ಗುರಿಮುಟ್ಟುವ ಪ್ರಯತ್ನ; ಬಯಸು: ಇಷ್ಟಪಡು; ಯಾಗ: ಯಜ್ಞ, ಕ್ರತು; ಮಕ್ಕಳು: ತನುಜ; ಯೋಗ್ಯ: ಅರ್ಹತೆ;

ಪದವಿಂಗಡಣೆ:
ವಿಂದನ+ಅನುವಿಂದಾ +ಮಹೀಶರು
ಬಂದಿರೈ +ಕಾಂಭೋಜ +ನೃಪನೈ
ತಂದೆಲಾ +ಗಾಂಧಾರ +ಶಕುನಿ+ ಬೃಹದ್ರಥಾಗಿಗಳು
ಬಂದರಿಲ್ಲಿಗೆ+ ಧರ್ಮಸಾಧನ
ವೆಂದು +ಬಯಸಿದಿರ್+ಇವರ +ಯಾಗಕೆ
ನಂದಗೋಪನ +ಮಕ್ಕಳಲ್ಲದೆ +ಯೋಗ್ಯರಿಲ್ಲೆಂದ

ಅಚ್ಚರಿ:
(೧) ರಾಜ ಮತ್ತು ರಾಜ್ಯರ ಹೆಸರು – ವಿಂದ, ಅನುವಿಂದ, ಕಾಂಭೋಜ, ಗಾಂಧಾರ, ಶಕುನಿ, ಬೃಹದ್ರಥ
(೨)ಮಹೀಶ, ನೃಪ – ಸಮನಾರ್ಥಕ ಪದ