ನೈರುತಕ್ಕಾಗ್ನೇಯ ಯಾಮ್ಯಕ
ವಾರುಣಕೆ ಸುರರೊಡೆಯರೆಮ್ಮಲಿ
ವೈರಬಂಧವಿದುಂಟೆ ಸಾಧನ ನಿನಗೆ ದಿವ್ಯಶರ
ಸೇರಿದರೆ ನಿನಗಾದರಿದೆಕೋ
ವಾರುಣ ಪ್ರತಿಕಾರ ಪಾವಕ
ನೈರುತಾದಿಗೆ ಕೊಳ್ಳೆನುತ ಗಂಧರ್ವಪತಿಯೆಚ್ಚ (ಅರಣ್ಯ ಪರ್ವ, ೨೦ ಸಂಧಿ, ೩೬ ಪದ್ಯ)
ತಾತ್ಪರ್ಯ:
ನಿರಋತಿ, ಅಗ್ನಿ, ಯಮ, ವರುಣ ಇವರ ಅಸ್ತ್ರಗಳನ್ನು ನಮ್ಮ ಮೇಲೆ ನೀನು ಪ್ರಯೋಗಿಸುವುದು ವ್ಯರ್ಥ. ದೇವತೆಗಳಿಗೂ ನಮಗೂ ವೈರವಿಲ್ಲ. ನಾನೂ ಗಂಧರ್ವರೊಡೆಯ, ನಿನಗೆ ಈ ಅಸ್ತ್ರಗಳು ತಿಳಿದಿದ್ದರೆ, ನಿನ್ನ ವಶವಾದರೆ ಇವಕ್ಕೆಲ್ಲಾ ನೀರು ತಿದ್ದುವ, ಎಲ್ಲ ಅಸ್ತ್ರಗಳಿಗೂ ಪ್ರತಿಕಾರವಾದ ಈ ದಿವ್ಯಾಸ್ತ್ರಗಳನ್ನು ಎದುರಿಸು ಎಂದು ಚಿತ್ರಸೇನನು ಅಸ್ತ್ರ ಪ್ರಯೋಗ ಮಾಡಿದನು.
ಅರ್ಥ:
ನಿರುತಿ: ನೈಋತ್ಯದಿಕ್ಕಿನ ಒಡೆಯ; ಸುರರೊಡೆಯ: ಇಂದ್ರ; ಸುರ: ದೇವತೆ; ವೈರ: ಶತ್ರು; ಬಂಧ: ಕಟ್ಟು, ಬಂಧನ; ಸಾಧನ: ಸಾಧಿಸುವಿಕೆ; ದಿವ್ಯ: ಶ್ರೇಷ್ಠ; ಶರ: ಬಾಣ; ಸೇರು: ತಲುಪು, ಮುಟ್ಟು; ವಾರುಣ: ನೀರು; ಪ್ರತೀಕಾರ: ಪರಿಹಾರ, ನಿವಾರಣೆ; ಪಾವಕ: ಅಗ್ನಿ; ಆದಿ: ಮೊದಲಾದ; ಗಂಧರ್ವಪತಿ: ಗಂಧರ್ವರ ರಾಜ; ಎಚ್ಚು: ಬಾಣ ಬಿಡು;
ಪದವಿಂಗಡಣೆ:
ನೈರುತಕ್+ಆಗ್ನೇಯ +ಯಾಮ್ಯಕ
ವಾರುಣಕೆ +ಸುರರ್+ಒಡೆಯರ್+ಎಮ್ಮಲಿ
ವೈರಬಂಧವಿದುಂಟೆ+ ಸಾಧನ+ ನಿನಗೆ+ ದಿವ್ಯಶರ
ಸೇರಿದರೆ+ ನಿನಗಾದರಿದೆ+ಕೋ
ವಾರುಣ+ ಪ್ರತಿಕಾರ+ ಪಾವಕ
ನೈರುತಾದಿಗೆ+ ಕೊಳ್ಳೆನುತ+ ಗಂಧರ್ವಪತಿ+ಎಚ್ಚ