ಪಾರಿವದುಪಾಧ್ಯರನು ನಮಿಸುತೆ
ವಾರನಾರಿಯರಾನನದಲಿ ಚ
ಕೋರಗಳ ಚಾಲೈಸಿದರು ಕೆಲರಂಗಪರಿಮಳಕೆ
ಸಾರಿದರೆ ಮರಿದುಂಬಿಗಳ ಸುಖ
ಪಾರಣೆಯ ಬೆಸಗೊಳುತ ನಗುತ ವಿ
ಕಾರಿಗಳು ವೇಡೈಸಿದರು ನೃಪ ಮುನಿ ನಿಜಾಶ್ರಮವ (ಅರಣ್ಯ ಪರ್ವ, ೧೯ ಸಂಧಿ, ೫ ಪದ್ಯ)
ತಾತ್ಪರ್ಯ:
ಗಣಿಕೆಯರು ಪಾರಿವಾಳದ ಉಪಾಧ್ಯಾರರಿಗೆ ಕೈಮುಗಿದು, ಮುಖದಿಂದ ಚಕೋರ ಪಕ್ಷಿಗಳ ಅನುಕರಣ ಮಾಡಿದರು. ಅವರ ಅಂಗ ಪರಿಮಳಕ್ಕೆ ಬಂದ ದುಂಬಿಗಳನ್ನು ಊಟವಾಯಿತೇ ಎಂದು ಕೇಳಿದರು. ಇಂತಹ ಸುಂದರ ಗಣಿಕೆಯರು ರಾಜಾ ಮತ್ತು ಮುನಿಗಳ ಆಶ್ರಯಕ್ಕೆ ದಾಳಿಯಿಟ್ಟರು.
ಅರ್ಥ:
ಪಾರಿವ: ಪಾರಿವಾಳ; ಉಪಾಧ್ಯ: ಉಪಾಧ್ಯಾಯ; ನಮಿಸು: ಎರಗು, ಗೌರವಿಸು; ವಾರನಾರಿ: ಗಣಿಕೆ, ವೇಶ್ಯೆ; ಆನನ: ಮುಖ; ಚಕೋರ: ಜೊನ್ನ ವಕ್ಕಿ, ಬೆಳದಿಂಗಳನ್ನೇ ಸೇವಿಸಿ ಬದುಕುವುದೆಂದು ನಂಬಲಾದ ಒಂದು ಪಕ್ಷಿ; ಚಾಳೈಸು: ಚಲಿಸುವಂತೆ ಮಾಡು; ಕೆಲರು: ಕೆಲವರು; ಅಂಗ: ದೇಹದ ಭಾಗ; ಪರಿಮಳ: ಸುಗಂಧ; ಸಾರು: ಹರಡು; ಮರಿದುಂಬಿ: ಚಿಕ್ಕ ಭ್ರಮರ; ಸುಖ: ನೆಮ್ಮದಿ; ಪಾರಣೆ: ತೃಪ್ತಿ, ಸಂತೋಷ; ಬೆಸ: ಕೆಲಸ, ಕಾರ್ಯ; ನಗುತ: ಹರ್ಷ; ವಿಕಾರ: ಬದಲಾವಣೆ, ಮಾರ್ಪಾಟು; ವೇಡೈಸು: ಸುತ್ತುವರಿ; ನೃಪ: ರಾಜ; ಮುನಿ: ಋಷಿ; ಆಶ್ರಮ: ಕುಟೀರ;
ಪದವಿಂಗಡಣೆ:
ಪಾರಿವದ್+ಉಪಾಧ್ಯರನು +ನಮಿಸುತೆ
ವಾರನಾರಿಯರ್+ಆನನದಲಿ +ಚ
ಕೋರಗಳ+ ಚಾಲೈಸಿದರು+ ಕೆಲರ್+ಅಂಗ+ಪರಿಮಳಕೆ
ಸಾರಿದರೆ +ಮರಿದುಂಬಿಗಳ +ಸುಖ
ಪಾರಣೆಯ +ಬೆಸಗೊಳುತ +ನಗುತ +ವಿ
ಕಾರಿಗಳು +ವೇಡೈಸಿದರು +ನೃಪ +ಮುನಿ +ನಿಜಾಶ್ರಮವ
ಅಚ್ಚರಿ:
(೧) ಗಣಿಕೆಯರ ಸೌಂದರ್ಯ – ಅಂಗಪರಿಮಳಕೆ ಸಾರಿದರೆ ಮರಿದುಂಬಿಗಳ ಸುಖಪಾರಣೆಯ ಬೆಸಗೊಳುತ