ಪದ್ಯ ೩೪: ಏಳರ ಮಹತ್ವವನ್ನರಿತವರು ಹೇಗೆ ಮುಕ್ತಿಯನ್ನು ಪಡೆಯುತ್ತಾರೆ?

ಜಲಧಿ ಮಾತೃಕೆ ವಾರ ಕುಲಗಿರಿ
ಗಳು ವಿಭಕ್ತಿ ದ್ವೀಪದಂಗಾ
ವಳಿ ಮುನೀಶ್ವರರುಗಳ ಧಾತುಗಡಣದ ವೇದಿಗಳ
ತಿಳಿದು ಕಾಲದ ಗತಿಯ ಗಮಕಂ
ಗಳನರಿದು ನಡೆವವರುಗಳು ನಿ
ರ್ಮಳದಲೆಡಹದೆ ಬೆರೆಸಿಕೊಂಬರು ಮುಕ್ತಿ ಮಾರ್ಗವನು (ಉದ್ಯೋಗ ಪರ್ವ, ೪ ಸಂಧಿ, ೩೪ ಪದ್ಯ)

ತಾತ್ಪರ್ಯ:
ಏಳರ ಸಂಖ್ಯೇತವನ್ನು ಉಪಮಾನವನ್ನಾಗಿಸಿ ಮುಕ್ತಿಗೆ ದಾರಿಯನ್ನು ಸನತ್ಸುಜಾತರು ಸೂಚಿಸಿದ್ದಾರೆ. ಲವಣ, ಕಬ್ಬಿನಹಾಲು (ಇಕ್ಷು), ಸುರಾ, ಸರ್ಪಿ, ದಧಿ, ಕ್ಷೀರ, ನೀರು ಇವುಗಳಿರುವ ಏಳು ಸಮುದ್ರಗಳು; ಸಪ್ತ ಮಾತೃಕೆಯರಾದ ಬಾಹ್ಮಿ, ಮಾಹೇಶ್ವರಿ, ವಾರಾಹಿ, ವೈಷ್ಣವಿ, ಇಂದ್ರಾಣಿ, ಕೌಮಾರಿ, ಚಾಮುಂಡಾ; ಏಳು ವಾರಗಳಾದ ಭಾನು, ಸೋಮ, ಮಂಗಳ, ಬುಧ, ಗುರು, ಶುಕ್ರ, ಶನಿ; ಏಳು ಎತ್ತರದ ಪರ್ವತಗಳಾದ ಮಹೇಂದ್ರ, ಮಲಯ, ಸಹ್ಯ, ಶುಕ್ತಿಮತ್, ಋಕ್ಷ, ವಿಂಧ್ಯ, ಪಾರಿಯಾತ್ರ; ಸಪ್ತ ವಿಭಕ್ತಿಗಳು, ಸಪ್ತ ದ್ವೀಪಗಳಾದ ಜಂಬೂ, ಪ್ಲಕ್ಷ, ಶಾಲ್ಮಲಿ, ಕುಶ, ಕ್ರೌಂಚ, ಶಾಕ, ಪುಷ್ಕರ; ಸಪ್ತ ಋಷಿಗಳಾದ ಅತ್ರಿ, ವಸಿಷ್ಠ, ಕಾಶ್ಯಪ, ಗೌತಮ, ಭಾರದ್ವಾಜ, ವಿಶ್ವಾಮಿತ್ರ, ಜಮದಗ್ನಿ; ದೇಹದಲ್ಲಿನ ಏಳು ಧಾತುಗಳಾದ ರಸ, ರಕ್ತ, ಮಾಂಸ, ಮೇಧಸ್ಸು, ಮಜ್ಜೆ, ಅಸ್ಥಿ, ಶುಕ್ರ, ಇವುಗಳ ಕಾಲದ ನಡೆ ರೀತಿಗಳನ್ನು ತಿಳಿದು ಯಾರು ಬಾಳುವರೋ ಅವರು ಮುಕ್ತಿಯ ಮಾರ್ಗಾವನ್ನು ಸೇರುತ್ತಾರೆ ಎಂದು ತಿಳಿಸಿದರು.

ಅರ್ಥ:
ಜಲಧಿ: ಸಮುದ್ರ, ಸಾಗರ; ಮಾತೃಕೆ: ಮಾತೆ, ತಾಯಿ; ವಾರ: ದಿನ; ಗಿರಿ: ಬೆಟ್ಟ; ಕುಲಗಿರಿ: ಎತ್ತರದ ಪರ್ವತಗಳು; ವಿಭಕ್ತಿ:ವ್ಯಾಕರಣದಲ್ಲಿ ಪ್ರಕೃತಿಗೆ ಪ್ರತ್ಯಯವು ಸೇರಿ ಸಿದ್ಧಿಸುವ ಅನ್ವಯ, ಏಳು ಎಂಬ ಸಂಕೇತ ಪದ; ದ್ವೀಪ: ಸಮುದ್ರದಿಂದ ಆವರಿಸಿದ ಭೂಭಾಗ; ಮುನೀಶ್ವರ: ಋಷಿ; ಧಾತು: ಮೂಲವಸ್ತು; ವೇದಿ:ಪಂಡಿತ, ವಿದ್ವಾಂಸ; ತಿಳಿ: ಅರಿತು; ಕಾಲ: ಸಮಯ; ಗತಿ: ಹರಿವು, ವೇಗ; ಗಮಕ: ಕ್ರಮ, ಅಣಿ; ಅರಿ: ತಿಳಿ; ನಡೆ: ಹೆಜ್ಜೆ ಹಾಕು; ನಿರ್ಮಳ: ನೆಮ್ಮದಿ, ನಿರಾಳ; ಎಡಹದೆ: ಬೀಳದೆ, ಮುಗ್ಗರಿಸದೆ; ಬೆರಸು: ಸೇರಿಸು; ಮುಕ್ತಿ: ಮೋಕ್ಷ, ಕೈವಲ್ಯ; ಮಾರ್ಗ: ದಾರಿ;

ಪದವಿಂಗಡಣೆ:
ಜಲಧಿ +ಮಾತೃಕೆ +ವಾರ +ಕುಲಗಿರಿ
ಗಳು+ ವಿಭಕ್ತಿ +ದ್ವೀಪದಂಗಾ
ವಳಿ +ಮುನೀಶ್ವರರುಗಳ +ಧಾತುಗಡಣದ+ ವೇದಿಗಳ
ತಿಳಿದು +ಕಾಲದ +ಗತಿಯ +ಗಮಕಂ
ಗಳನರಿದು +ನಡೆವವರುಗಳು +ನಿ
ರ್ಮಳದಲ್+ಎಡಹದೆ +ಬೆರೆಸಿಕೊಂಬರು +ಮುಕ್ತಿ +ಮಾರ್ಗವನು

ಅಚ್ಚರಿ:
(೧) ೭ನ್ನು ಸೂಚಿಸುವ ಪದಗಳ ಬಳಕೆ – ಜಲಧಿ, ಮಾತೃಕೆ, ವಾರ, ಕುಲಗಿರಿ, ವಿಭಕ್ತಿ, ದ್ವೀಪ, ಮುನೀಶ್ವರ, ಧಾತು

ಪದ್ಯ ೧೪: ಯಾವ ಲಗ್ನದಲ್ಲಿ ಪಾಂಡವರು ದಿಗ್ವಿಜಯಕ್ಕೆ ಹೊರಟರು?

ಪರಮಲಗ್ನದೊಳಿಂದು ಕೇಂದ್ರದೊ
ಳಿರಲು ಗುರು ಭಾರ್ಗವರು ಲಗ್ನದೊ
ಳಿರೆ ಶುಭಗ್ರಹದೃಷ್ಟಿ ಸಕಳೇಕಾದಶಸ್ಥಿತಿಯ
ಕರಣ ತಿಥಿ ನಕ್ಷತ್ರ ವಾರೋ
ತ್ಕರದಲಭಿಮತ ಸಿದ್ಧಿಯೋಗದೊ
ಳರಸನನುಜರು ದಿಗ್ವಿಜಯಕನುವಾದರೊಗ್ಗಿನಲಿ (ಸಭಾ ಪರ್ವ, ೩ ಸಂಧಿ, ೧೪ ಪದ್ಯ)

ತಾತ್ಪರ್ಯ:
ಶ್ರೇಷ್ಠವಾದ ಲಗ್ನದಲ್ಲಿ ಚಂದ್ರನು ಕೇಂದ್ರಸ್ಥಾನದಲ್ಲಿರಲು, ಶುಕ್ರಗ್ರಹವು ಲಗ್ನದಲ್ಲಿರಲು, ಶುಭಗ್ರಹದೃಷ್ಟಿಯು ಏಕಾದಶ ಸ್ಥಾನದ ಮೇಲಿರಲು, ಶುಭ ನಕ್ಷತ್ರ, ಶುಭಕರಣ, ಶುಭತಿಥಿಯಂದು ಸಿದ್ಧಿಯೋಗದಲ್ಲಿ ಧರ್ಮರಾಜನ ತಮ್ಮಂದಿರು ದಿಗ್ವಿಜಯಕ್ಕೆ ಸಿದ್ದರಾದರು.

ಅರ್ಥ:
ಪರಮ: ಶ್ರೇಷ್ಠ; ಲಗ್ನ: ಸಮಯ; ಇಂದು: ಚಂದ್ರ; ಕೇಂದ್ರ: ಮುಖ್ಯ ಸ್ಥಾನ; ಗುರು: ಆಚಾರ್ಯ; ಭಾರ್ಗವ: ಶುಕ್ರಾಚಾರ್ಯ; ಅಭಿಮತ:ಅಭಿಪ್ರಾಯ; ಅರಸ: ರಾಜ; ಅನುಜ: ತಮ್ಮ; ದಿಗ್ವಿಜಯ: ಎಲ್ಲಾ ದಿಕ್ಕುಗಳಲ್ಲೂ ಜಯ ಸಾಧಿಸುವ ಯಾತ್ರೆ; ಯೋಗ: ಹೊಂದಿಸುವಿಕೆ; ಉತ್ಕರ: ಸಮೂಹ; ಅನುವಾಗು: ಸಿದ್ಧಿಯಾಗು; ಒಗ್ಗು: ಗುಂಪು, ಸಮೂಹ; ಕರಣ: ಉದ್ದೇಶ

ಪದವಿಂಗಡಣೆ:
ಪರಮ+ಲಗ್ನದೊಳ್+ಇಂದು +ಕೇಂದ್ರದೊಳ್
ಇರಲು +ಗುರು +ಭಾರ್ಗವರು +ಲಗ್ನ+ದೊಳ್
ಇರೆ+ ಶುಭಗ್ರಹದೃಷ್ಟಿ +ಸಕಳ್+ಏಕಾದಶ+ಸ್ಥಿತಿಯ
ಕರಣ+ ತಿಥಿ +ನಕ್ಷತ್ರ +ವಾರೋ
ತ್ಕರದಲ್+ಅಭಿಮತ +ಸಿದ್ಧಿಯೋಗದೊಳ್
ಅರಸನ್+ಅನುಜರು +ದಿಗ್ವಿಜಯಕ್+ಅನುವಾದರ್+ಒಗ್ಗಿನಲಿ

ಅಚ್ಚರಿ:
(೧) ೪ ಸಾಲು – ಕರಣ ತಿಥಿ ನಕ್ಷತ್ರ ವಾರ – ದಾಸರ ಪದವನ್ನು ನೆನಪಿಸುವ ಪದ್ಯ – “ಇಂದಿನ ದಿನವೆ ಶುಭದಿನವು”
(೨) ೧, ೩, ೫ ಸಾಲಿನ ಕೊನೆಪದಗಳು “ದೊಳ್” ಪದದಿಂದ ಅಂತ್ಯವಾಗುವುದು