ಪದ್ಯ ೧೬: ಧರ್ಮಜನಿಗೆ ಯಾವ ಕನಸು ಬಿದ್ದಿತು?

ಆ ದಿವಸವನು ಮಧುರಗೇಯ ನಿ
ನಾದದಲಿ ಕವಿ ವಾದಿ ವಾಗ್ಮಿ ವಿ
ನೋದದಲಿ ನೂಕಿದರು ಮಜ್ಜನ ಭೋಜನಾದಿಯಲಿ
ಆದುದುತ್ಸಹವಂದಿನಿರುಳು ದಿ
ನಾದಿಯಲಿ ಕಂಡನು ಕನಸ ಪ್ರಾ
ಸಾದ ಶಿಖರವು ಮುರಿದು ಬಿದ್ದುದನಡವಿಮಧ್ಯದಲಿ (ಸಭಾ ಪರ್ವ, ೧೪ ಸಂಧಿ, ೧೬ ಪದ್ಯ)

ತಾತ್ಪರ್ಯ:
ಆ ದಿನ ಯುಧಿಷ್ಠಿರನು ಸಂತೋಷದಲ್ಲಿ ಕಳೆದನು. ಸಂಗೀತದ ಮಧುರ ಧ್ವನಿಯಲ್ಲಿ ತೇಲುತ್ತ, ಕವಿ ವಾಗ್ಮಿಗಳ ಮಾತನ್ನು ಸವಿಯುತ್ತಾ, ಸ್ಸಾನ ಭೋಜನಾದಿಗಳನ್ನು ಪೂರೈಸಿ ರಾತ್ರಿ ನಿದ್ರೆಗೆ ಜಾರಿದನು. ಬೆಳಗಿನ ಜಾವದಲ್ಲಿ ಉನ್ನತವಾದ ಪ್ರಾಕಾರದ ಶಿಖರವು ಮುರಿದು ಕಾಡಿನ ಮಧ್ಯದಲ್ಲಿ ಬಿದ್ದಂತೆ ಕನಸನ್ನು ಕಂಡನು.

ಅರ್ಥ:
ದಿವಸ: ದಿನ; ಮಧುರ: ಸವಿಯಾದ; ನಿನಾದ: ಉಲಿವು, ಧ್ವನಿ; ಕವಿ: ಕಬ್ಬಿಗ; ಗೇಯ: ಗಾಯನ; ವಾದಿ: ವ್ಯಾಖ್ಯಾನಕಾರ; ವಾಗ್ಮಿ: ವಾಕ್ಪಟು; ವಿನೋದ: ಹಾಸ್ಯ, ತಮಾಷೆ; ನೂಕು: ತಳ್ಳು; ಮಜ್ಜನ: ಸ್ನಾನ; ಭೋಜನ: ಊಟ; ಆದಿ: ಮುಂತಾದ; ಉತ್ಸಹ: ಉತ್ಸವ, ಸಂಭ್ರಮ; ಇರುಳು: ರಾತ್ರಿ; ದಿನ: ವಾರ; ಆದಿ: ಮೊದಲು; ಕಂಡನು: ನೋಡಿದನು; ಕನಸು: ಸ್ವಪ್ನ; ಪ್ರಾಸಾದ: ಪ್ರಾಕಾರ; ಶಿಖರ: ತುದಿ; ಮುರಿ: ಸೀಳು; ಬಿದ್ದು: ನೆಲಕ್ಕೆ ಬೀಳು; ಅಡವಿ: ಕಾಡು; ಮಧ್ಯ: ನಡುವೆ;

ಪದವಿಂಗಡಣೆ:
ಆ +ದಿವಸವನು +ಮಧುರ+ಗೇಯ +ನಿ
ನಾದದಲಿ +ಕವಿ +ವಾದಿ +ವಾಗ್ಮಿ +ವಿ
ನೋದದಲಿ+ ನೂಕಿದರು+ ಮಜ್ಜನ +ಭೋಜನ+ಆದಿಯಲಿ
ಆದುದ್+ಉತ್ಸಹವ್+ಅಂದಿನ್+ಇರುಳು +ದಿನ
ಆದಿಯಲಿ +ಕಂಡನು +ಕನಸ +ಪ್ರಾ
ಸಾದ +ಶಿಖರವು +ಮುರಿದು +ಬಿದ್ದುದನ್+ಅಡವಿ+ಮಧ್ಯದಲಿ

ಅಚ್ಚರಿ:
(೧) ದಿವಸ, ದಿನ – ಸಮನಾರ್ಥಕ ಪದ
(೨) ನಿನಾದ, ವಿನೋದ – ಪ್ರಾಸ ಪದ
(೩) ಒಂದೇ ಪದವಾಗಿ ರಚನೆ – ಆದುದುತ್ಸಹವಂದಿನಿರುಳು