ಪದ್ಯ ೧೧: ಹಸ್ತಿನಾಪುರದ ವಾಣಿಜ್ಯ ವೀಥಿಯ ಸ್ಥಿತಿ ಹೇಗಿತ್ತು?

ಕೂಡೆ ಗಜಬಜವಾಯ್ತು ಪಾಳೆಯ
ವೋಡಿತಲ್ಲಿಯದಲ್ಲಿ ಜನವ
ಲ್ಲಾಡಿದುದು ಕ್ರಯವಿಕ್ರಯದ ವಾಣಿಜ್ಯವೀಥಿಯಲಿ
ಹೂಡಿದವು ಬಂಡಿಗಳು ಹರಿದೆಡೆ
ಯಾಡಿದವು ಕೊಲ್ಲಾರಿಗಳು ರಥ
ಗೂಡಿದವು ಬದ್ದರದ ದಂಡಿಗೆ ಬಂದವರಮನೆಗೆ (ಗದಾ ಪರ್ವ, ೪ ಸಂಧಿ, ೧೧ ಪದ್ಯ)

ತಾತ್ಪರ್ಯ:
ಆ ಕ್ಷಣದಲ್ಲೇ ಗಲಭೆ ಆರಂಭವಾಯಿತು. ಕೆಲ ಜನರು ಓಡಿ ಹೋದರು. ಅಂಗಡಿ ಬೀದಿಯಲ್ಲಿ ಜನ ಅಲುಗಾಡಿದರು. ಬಂಡಿಗಳನ್ನು ಹೂಡಿದರು. ಕಮಾನು ಬಂಡಿಗಳು ಓಡಾಡಿದವು. ರಥಗಳೊಡನೆ ಬದ್ದರದ ಪಲ್ಲಕ್ಕಿಗಳು ಅರಮನೆಗೆ ಬಂದವು.

ಅರ್ಥ:
ಕೂಡು: ಜೊತೆ; ಗಜಬಜ: ಗೊಂದಲ; ಪಾಳೆಯ: ಬಿಡಾರ; ಓಡು: ಧಾವಿಸು; ಜನ: ನರರ ಗುಂಪು; ಅಲ್ಲಾಡು: ತೂಗಾಡು; ಕ್ರಯ: ಬೆಲೆ, ಕಿಮ್ಮತ್ತು; ವಿಕ್ರಯ: ಮಾರಾಟ, ಬಿಕರಿ; ವೀಥಿ: ದಾರಿ, ಮಾರ್ಗ; ವಾಣಿಜ್ಯ: ವ್ಯಾಪಾರ; ಹೂಡು: ಅಣಿಗೊಳಿಸು; ಬಂಡಿ: ರಥ; ಹರಿ: ಕಡಿ, ಕತ್ತರಿಸು; ಎಡೆಯಾಡು: ಅತ್ತಿತ್ತ ಸುತ್ತಾಡು; ಕೊಲ್ಲಾರಿ: ಮುಖಂಡ, ಪ್ರಮುಖ; ರಥ: ಬಂಡಿ; ಬದ್ದರ: ಮಂಗಳಕರವಾದುದು; ದಂಡಿ: ಘನತೆ, ಹಿರಿಮೆ, ಶಕ್ತಿ; ಅರಮನೆ: ರಾಜರ ಆಲಯ; ಬಂದು: ಆಗಮಿಸು;

ಪದವಿಂಗಡಣೆ:
ಕೂಡೆ +ಗಜಬಜವಾಯ್ತು +ಪಾಳೆಯವ್
ಓಡಿತ್+ಅಲ್ಲಿಯದಲ್ಲಿ +ಜನವ್
ಅಲ್ಲಾಡಿದುದು +ಕ್ರಯ+ವಿಕ್ರಯದ +ವಾಣಿಜ್ಯ+ವೀಥಿಯಲಿ
ಹೂಡಿದವು +ಬಂಡಿಗಳು+ ಹರಿದೆಡೆ
ಆಡಿದವು +ಕೊಲ್ಲಾರಿಗಳು +ರಥ
ಕೂಡಿದವು +ಬದ್ದರದ +ದಂಡಿಗೆ +ಬಂದವ್+ಅರಮನೆಗೆ

ಅಚ್ಚರಿ:
(೧) ಗಜಬಜ, ಕ್ರಯವಿಕ್ರಯ – ಪದಗಳ ಬಳಕೆ
(೨) ಹೂಡಿ, ಆಡಿ, ಓಡಿ, ಅಲ್ಲಾಡಿ, ಕೂಡಿ – ಪ್ರಾಸ ಪದಗಳು