ಪದ್ಯ ೧೧: ಪಾಂಡವರಿಗೆ ಅಳುವುದೇಕೆ ವ್ಯರ್ಥವೆಂದು ಶಕುನಿ ಹೇಳಿದನು?

ವಿಷಯಲಂಪಟರಕ್ಷಲೀಲಾ
ವ್ಯಸನಕೋಸುಗವೊತ್ತೆಯಿಟ್ಟರು
ವಸುಮತಿಯನನ್ಯಾಯವುಂಟೇ ನಿನ್ನ ಮಕ್ಕಳಲಿ
ಉಸುರಲಮ್ಮದೆ ಸತ್ಯವನು ಪಾ
ಲಿಸಲು ಹೊಕ್ಕರರಣ್ಯವನು ತ
ದ್ವ್ಯಸನ ಫಲಭೋಗಿಗಳಿಗಳಲುವಿರೇಕೆ ನೀವೆಂದ (ಅರಣ್ಯ ಪರ್ವ, ೧೮ ಸಂಧಿ, ೧೧ ಪದ್ಯ)

ತಾತ್ಪರ್ಯ:
ಶಕುನಿಯು ತನ್ನ ಮಾತನ್ನು ಮುಂದುವರೆಸುತ್ತಾ, ವಿಷಯ ಲಂಪಟತೆಯನ್ನು ಉಳಿಸಿ ಬೆಳೆಸಲು, ಭೂಮಿಯನ್ನೇ ಜೂಜಿನಲ್ಲಿ ಪಣವಾಗಿ ಒಡ್ಡಿದರು. ನಿನ್ನ ಮಕ್ಕಳು ಮಾಡಿದ ಅನ್ಯಾಯವೇನು? ಪಾಂಡವರು ಜೂಜಿನಲ್ಲಿ ಸೋತು ಸತ್ಯಪಾಲನೆಗಾಗಿ ಕಾಡಿಗೆ ಹೋದರು. ತಾವೇ ತಂದುಕೊಂಡ ಕಷ್ಟವನ್ನು ಅನುಭವಿಸುತ್ತಾರೆ, ಅವರಿಗಾಗಿ ನೀವೇಕೆ ದುಃಖ ಪಡುತ್ತೀರಿ ಎಂದು ಧೃತರಾಷ್ಟ್ರನಿಗೆ ಹೇಳಿದನು.

ಅರ್ಥ:
ವಿಷಯ: ಭೋಗಾಭಿಲಾಷೆ; ಲಂಪಟ: ವಿಷಯಾಸಕ್ತ, ಕಾಮುಕ; ಅಕ್ಷ: ಪಗಡೆ ಆಟದ ದಾಳ; ಲೀಲಾ: ಕ್ರೀಡೆ; ವ್ಯಸನ: ಚಟ; ಒತ್ತೆಯಿಡು: ಜೂಜಿನಲ್ಲಿ ಇಡತಕ್ಕ ಹಣ; ವಸುಮತಿ: ಭೂಮಿ; ಅನ್ಯಾವ: ಸರಿಯಿಲ್ಲದ; ಉಸುರು: ಹೇಳು, ಮಾತನಾಡು; ಸತ್ಯ: ದಿಟ; ಪಾಲಿಸು: ರಕ್ಷಿಸು, ಕಾಪಾಡು; ಹೊಕ್ಕು: ಸೇರು; ಅರಣ್ಯ: ಕಾದು; ಫಲ: ಪ್ರಯೋಜನ, ಫಲಿತಾಂಶ; ಭೋಗಿ: ವಿಷಯಾಸಕ್ತ ; ಅಳು: ಕೊರಗು;

ಪದವಿಂಗಡಣೆ:
ವಿಷಯ+ಲಂಪಟರ್+ಅಕ್ಷ+ಲೀಲಾ
ವ್ಯಸನಕ್+ಓಸುಗವ್+ಒತ್ತೆ+ಯಿಟ್ಟರು
ವಸುಮತಿಯನ್+ಅನ್ಯಾಯವುಂಟೇ+ ನಿನ್ನ+ ಮಕ್ಕಳಲಿ
ಉಸುರಲಮ್ಮದೆ +ಸತ್ಯವನು+ ಪಾ
ಲಿಸಲು +ಹೊಕ್ಕರ್+ಅರಣ್ಯವನು+ ತ
ದ್ವ್ಯಸನ +ಫಲಭೋಗಿಗಳಿಗ್+ಅಳಲುವಿರೇಕೆ+ ನೀವೆಂದ

ಅಚ್ಚರಿ:
(೧) ಪಾಂಡವರನ್ನು ಹಂಗಿಸುವ ಪರಿ – ವಿಷಯಲಂಪಟರಕ್ಷಲೀಲಾವ್ಯಸನಕೋಸುಗವೊತ್ತೆಯಿಟ್ಟರು
ವಸುಮತಿಯನ

ಪದ್ಯ ೨೮: ಅರ್ಜುನನು ಕರ್ಣನಾರೆಂದು ಕೃಷ್ಣನಲ್ಲಿ ಕೇಳಿದನು – ೫?

ಋಷಿಗಳನುಮತದಿಂದ ಕುಂತಿಯ
ಬಸುರಲೇನುದಯಿಸನಲೇ ನೀ
ನಸುರರಿಪು ಬಹು ಕಪಟನಾಟಕ ಸೂತ್ರಧಾರನಲೆ
ವಸುಮತಿಯ ಭಾರವನು ಸಲೆ ಹಿಂ
ಗಿಸುವ ಕೃತ್ಯವು ನಿನ್ನದೆನಗು
ಬ್ಬಸವಿದೇನೆಂದರಿಯೆನಕಟಾ ಕರ್ಣನಾರೆಂದ (ಕರ್ಣ ಪರ್ವ, ೨೬ ಸಂಧಿ, ೨೮ ಪದ್ಯ)

ತಾತ್ಪರ್ಯ:
ನನ್ನ ತಾಯಿಗೆ ಮುನಿಗಳು ನೀಡಿದ ವರದಿಂದ ಇವನು ನನ್ನ ತಾಯಿಯ ಗರ್ಭದಲ್ಲಿ ಹುಟ್ಟಿದವನೇ? ನೀನು ದಾನವವೈರಿ, ಕಪಟನಾಟಕ ಸೂತ್ರಧಾರ, ಭೂಭಾರವನ್ನಿಳಿಸುವದೇ ನಿನ್ನ ಪ್ರತಿಜ್ಞೆ, ನನಗೇಕೆ ಈಗ ಸಂಕಟವಾಗುತ್ತಿದೆ? ಅಯ್ಯೋ ಕೃಷ್ಣ ಕರ್ಣನಾರು ಎಂದು ದಯವಿಟ್ಟು ತಿಳಿಸು ಎಂದು ಅರ್ಜುನನು ಬೇಡಿದನು.

ಅರ್ಥ:
ಋಷಿ: ಮುನಿ; ಮತ: ವಿಚಾರ ; ಅನು: ರೀತಿ, ಕ್ರಮ; ಬಸುರ: ಗರ್ಭ; ಉದಯಿಸು: ಹುಟ್ಟು; ಅಸುರರಿಪು: ರಾಕ್ಷಸವೈರಿ; ಬಹು: ತುಂಬ; ಕಪಟ: ಮೋಸ; ಕಪಟನಾಟಕ: ಸೃಷ್ಟಿ ಮುಂತಾದವುಗಳ ಬಂಧನವಿಲ್ಲದೆ, ಅವುಗಳನ್ನು ನಡೆಸುವವ; ಸೂತ್ರಧಾರ: ನಿರೂಪಕ, ಆಡಿಸುವವ; ವಸುಮತಿ: ಭೂಮಿ; ಭಾರ: ಹೊರೆ, ತೂಕ; ಸಲೆ: ವಿಸ್ತೀರ್ಣ; ಕೃತ್ಯ: ಕೆಲಸ; ಉಬ್ಬಸ: ಸಂಕಟ, ಮೇಲುಸಿರು; ಅರಿ: ತಿಳಿ; ಅಕಟಾ: ಅಯ್ಯೋ;

ಪದವಿಂಗಡಣೆ:
ಋಷಿಗಳ್+ಅನುಮತದಿಂದ+ ಕುಂತಿಯ
ಬಸುರಲೇನ್+ಉದಯಿಸನಲೇ +ನೀನ್
ಅಸುರರಿಪು +ಬಹು +ಕಪಟನಾಟಕ+ ಸೂತ್ರಧಾರನಲೆ
ವಸುಮತಿಯ +ಭಾರವನು +ಸಲೆ +ಹಿಂ
ಗಿಸುವ +ಕೃತ್ಯವು +ನಿನ್ನದ್+ಎನಗ್
ಉಬ್ಬಸವಿದೇನೆಂದ್+ಅರಿಯೆನ್+ಅಕಟಾ +ಕರ್ಣನಾರೆಂದ

ಅಚ್ಚರಿ:
(೧) ಕೃಷ್ಣನನ್ನು ಕರೆಯುವ ಬಗೆ – ಅಸುರರಿಪು ಕಪಟನಾಟಕ ಸೂತ್ರಧಾರ; ವಸುಮತಿಯ ಭಾರವನು ಸಲೆ ಹಿಂಗಿಸುವ ಕೃತ್ಯವು ನಿನ್ನದೆ

ಪದ್ಯ ೧೨: ಕೃಷ್ಣನು ವಿದುರನಿಗೆ ಏನು ಹೇಳಿ ಮನೆಯನ್ನು ಪ್ರವೇಶಿಸಿದನು?

ಹಸಿದು ನಾವೈತಂದರೀ ಪರಿ
ಮಸಗಿ ಕುಣಿದಾಡಿದೊಡೆ ಮೇಣೀ
ವಸತಿಯನು ಸುಗಿದೆತ್ತಿ ಬಿಸುಟರೆ ತನಗೆ ತಣಿವಹುದೆ
ವಸುಮತಿಯ ವಲ್ಲಭರು ಮಿಗೆ ಪ್ರಾ
ರ್ಥಿಸಿದೊಡೊಲ್ಲದೆ ಬಂದೆವೈ ನಾ
ಚಿಸದಿರೈ ಬಾ ವಿದುರಯೆನುತೊಳಹೊಕ್ಕನಸುರಾರಿ (ಉದ್ಯೋಗ ಪರ್ವ, ೮ ಸಂಧಿ, ೧೨ ಪದ್ಯ)

ತಾತ್ಪರ್ಯ:
ವಿದುರನ ಸಂತೋಷದ ಪರಿಯನ್ನು ಕಂಡು ಕೃಷ್ಣನು, ಎಲೈ ವಿದುರ ನಾವು ಹಸಿದು ಬಂದರೆ ನೀನು ಈ ರೀತಿ ಹರಿದಾಡಿ, ಕುಣಿದಾಡಿದರೆ ವಾಸವಿರುವ ನಿನ್ನೀ ಮನೆಯೇನಾದರು ಹಾನಿಹೊಂದಿದರೆ ನಾನೆಲ್ಲಿ ವಿಶ್ರಮಿಸಲಿ. ಭೂಮಿಯ ಒಡೆಯರು (ಪಾಂಡವರು) ನನ್ನ ಬಳಿ ಅಧಿಕವಾಗಿ ಪ್ರಾರ್ಥಿಸಿದುದರಿಂದ ನಾನಿಲ್ಲಿಗೆ ಬಂದಿದ್ದೇನೆ ಅದು ಬಿಟ್ಟು ಬೇರೇನು ಇಲ್ಲ. ಹೀಗೆ ನೀವು ಹೆಚ್ಚಾಗಿ ಸಂತೋಷವನ್ನು ಪ್ರಕಟಿಸಿದರೆ ನನಗೆ ನಾಚಿಕೆಯಾಗುತ್ತದೆಂದು ವಿದುರನನ್ನು ಕರೆದು ಮನೆಯ ಒಳಕ್ಕೆ ಪ್ರವೇಶಿಸಿದನು.

ಅರ್ಥ:
ಹಸಿ: ಹಸಿವು, ಆಹಾರವನ್ನು ಬಯಸು;ಐತರು: ಬಂದು ಸೇರು; ಪರಿ: ರೀತಿ; ಮಸಗು: ಹರಡು; ಕುಣಿ: ನರ್ತಿಸು; ಮೇಣ್: ಮತ್ತು; ವಸತಿ: ವಾಸಮಾಡುವಿಕೆ; ಸುಗಿ: ಸುಲಿ, ತುಂಡುಮಾಡು; ಎತ್ತು: ಮೇಲೇಳು; ಬಿಸುಟು: ಬಿಸಾಡಿದ, ತ್ಯಜಿಸಿದ; ತಣಿ: ತೃಪ್ತಿಹೊಂದು, ಸಮಾಧಾನಗೊಳ್ಳು; ವಸುಮತಿ:ಭೂಮಿ; ವಲ್ಲಭ:ಒಡೆಯ, ಪ್ರಭು; ಮಿಗೆ: ಮತ್ತು, ಅಧಿಕ; ಪಾರ್ಥಿಸು: ಆರಾಧಿಸು; ನಾಚಿಸು: ಲಜ್ಜೆ, ಸಿಗ್ಗು; ಬಾ: ಆಗಮಿಸು; ಒಳಗೆ: ಆಂತರ್ಯ; ಹೊಕ್ಕು: ಸೇರು; ಅಸುರಾರಿ: ಅಸುರರ ವೈರಿ (ಕೃಷ್ಣ)

ಪದವಿಂಗಡಣೆ:
ಹಸಿದು+ ನಾವ್+ಐತಂದರ್+ಈ+ ಪರಿ
ಮಸಗಿ +ಕುಣಿದಾಡಿದೊಡೆ +ಮೇಣ್+ಈ
ವಸತಿಯನು +ಸುಗಿದೆತ್ತಿ+ ಬಿಸುಟರೆ+ ತನಗೆ+ ತಣಿವಹುದೆ
ವಸುಮತಿಯ +ವಲ್ಲಭರು+ ಮಿಗೆ+ ಪ್ರಾ
ರ್ಥಿಸಿದೊಡಲ್ಲದೆ +ಬಂದೆವೈ +ನಾ
ಚಿಸದಿರೈ+ ಬಾ +ವಿದುರ+ಯೆನುತ್+ಒಳಹೊಕ್ಕನ್+ಅಸುರಾರಿ

ಅಚ್ಚರಿ:
(೧) ‘ತ’ ಕಾರದ ಜೋಡಿ ಪದ – ತನಗೆ ತಣಿವಹುದೆ
(೨) ‘ವ’ ಕಾರದ ಜೋಡಿ ಪದ – ವಸುಮತಿಯ ವಲ್ಲಭರು
(೩) ವಸತಿ, ವಸುಮತಿ – ಪದಗಳ ಬಳಕೆ