ಪದ್ಯ ೪: ಪಾಂಡವರಿಗೆ ಎಷ್ಟು ವರ್ಷಗಳಾದವು?

ವರುಷ ಹದಿನಾರಾಯ್ತು ಧರಣೀ
ಶ್ವರನ ಹಿರಿಯ ಮಗಂಗೆ ಭೀಮಗೆ
ವರುಷ ಹದಿನೈದರ್ಜುನಗೆ ಹದಿನಾಲ್ಕು ಹದಿಮೂರು
ಕಿರಿಯರಿಬ್ಬರಿಗನಿಬರಾ ಮುನಿ
ವರರಿನಧ್ಯಯನಾದಿ ವಿದ್ಯಾ
ನಿರತರಾದರು ಬಂದುದೊಂದು ವಸಂತಮಯ ಸಮಯ (ಆದಿ ಪರ್ವ, ೫ ಸಂಧಿ, ೪ ಪದ್ಯ)

ತಾತ್ಪರ್ಯ:
ಧರ್ಮರಾಜನಿಗೆ ಹದಿನಾರು ವರ್ಷಗಳು ತುಂಬಿದವು. ಭೀಮನಿಗೆ ಹದಿನೈದು ವರ್ಷ, ಅರ್ಜುನನಿಗೆ ಹದಿನಾಲ್ಕು, ನಕುಲ ಸಹದೇವರಿಗೆ ಹದಿಮೂರು ವರ್ಷಗಳು ತುಂಬಿದವು. ಅವರೆಲ್ಲರಿಗೂ ಋಷಿಗಳಿಂದ ವಿದ್ಯಾಭ್ಯಾಸವು ನಡೆಯುತ್ತಿತ್ತು. ಹೀಗೆ ಪಾಂಡವರು ವಿದ್ಯಾಭ್ಯಾಸದಲ್ಲಿ ಮಗ್ನರಾಗಿರಲು ವಸಂತ ಋತುವು ಬಂದಿತು.

ಅರ್ಥ:
ವರುಷ: ಸಂವತ್ಸರ; ಧರಣೀಶ್ವರ: ರಾಜ; ಹಿರಿಯ: ದೊಡ್ಡ, ಜೇಷ್ಠ; ಮಗ: ಪುತ್ರ; ಕಿರಿಯ: ಚಿಕ್ಕವ; ಮುನಿ: ಋಷಿ; ವರ: ಶ್ರೇಷ್ಠ; ಅಧ್ಯಯನ: ಓದುವುದು; ವಿದ್ಯ: ಜ್ಞಾನ; ನಿರತ: ಆಸಕ್ತನಾದ; ಬಂದು: ಆಗಮಿಸು; ವಸಂತ: ಆರು ಋತುಗಳಲ್ಲಿ ಒಂದು; ಸಮಯ: ಕಾಲ;

ಪದವಿಂಗಡಣೆ:
ವರುಷ +ಹದಿನಾರಾಯ್ತು+ ಧರಣೀ
ಶ್ವರನ +ಹಿರಿಯ +ಮಗಂಗೆ +ಭೀಮಗೆ
ವರುಷ +ಹದಿನೈದ್+ಅರ್ಜುನಗೆ +ಹದಿನಾಲ್ಕು +ಹದಿಮೂರು
ಕಿರಿಯರಿಬ್ಬರಿಗ್+ಅನಿಬರಾ +ಮುನಿ
ವರರಿನ್+ಅಧ್ಯಯನಾದಿ +ವಿದ್ಯಾ
ನಿರತರಾದರು +ಬಂದುದೊಂದು +ವಸಂತಮಯ +ಸಮಯ

ಅಚ್ಚರಿ:
(೧) ಹಿರಿಯ, ಕಿರಿಯ – ವಿರುದ್ಧ ಪದಗಳು
(೨) ವರುಷ – ೧, ೩ ಸಾಲಿನ ಮೊದಲ ಪದ

ಪದ್ಯ ೨೨: ಭೀಷ್ಮರು ಹೇಗೆ ಲೆಕ್ಕವನ್ನು ವಿವರಿಸಿದರು?

ಮಗನೆ ಕೇಳೀರೈದು ವರುಷಕೆ
ಮಿಗುವವೆರಡೇ ಮಾಸ ಮಾಸಾ
ದಿಗಳನವರನುಭವಿಸಿದರು ಹದಿಮೂರು ವತ್ಸರವ
ಮಿಗುವವಧಿ ಬುಧರರಿಯೆ ನಿನ್ನಿನ
ಹಗಲು ನಿನ್ನದು ಪಾಂಡುತನಯರು
ಹೊಗುವಡಿಂದಿನ ದಿವಸವವರದು ಕಂದ ಕೇಳೆಂದ (ವಿರಾಟ ಪರ್ವ, ೮ ಸಂಧಿ, ೨೨ ಪದ್ಯ)

ತಾತ್ಪರ್ಯ:
ದುರ್ಯೋಧನನ ಪ್ರಶ್ನೆಗೆ ಭೀಷ್ಮರು ಉತ್ತರಿಸುತ್ತಾ, ಮಗನೇ ಹತ್ತು ವರ್ಷಗಳ ಅವಧಿಯಲ್ಲಿ ಎರಡು ಅಧಿಕಮಾಸಗಳು ಬರುತ್ತವೆ, ಅವನ್ನೂ ಸೇರಿಸಿ ಅವರು ವನವಾಸ ಅಜ್ಞಾತವಾಸಗಳನ್ನು ಮುಗಿಸಿದರು. ತಿಳಿದವರ ಲೆಕ್ಕದಂತೆ ನಿನ್ನೆಯ ಹಗಲು ನಿನ್ನದು, ಈ ಹಗಲು ಪಾಂಡವರದು ಎಂದು ಭೀಷ್ಮರು ಹೇಳಿದರು.

ಅರ್ಥ:
ಮಗ: ಸುತ, ಪುತ್ರ; ಕೇಳು: ಆಲಿಸು; ಈರೈದು: ಹತ್ತು; ವರುಷ: ಸಂವತ್ಸರ; ಮಿಗು: ಹೆಚ್ಚಾಗು, ಅಧಿಕವಾಗು; ಮಾಸ: ತಿಂಅಳು; ಅನುಭವಿಸು: ಕಷ್ಟಪಡು; ಆದಿ: ಪೂರ್ವ ಕಾಲ; ವತ್ಸರ: ವರ್ಷ; ಮಿಗು: ಹೆಚ್ಚಾಗು, ಅಧಿಕವಾಗು; ಬುಧ: ವಿದ್ವಾಂಸ; ಅರಿ: ತಿಳಿ; ಹಗಲು: ದಿನ; ತನಯ: ಮಕ್ಕಳು; ಕಂದ: ಮಗು; ಹೊಗು: ಮುಟ್ಟು, ಪ್ರವೇಶಿಸು;

ಪದವಿಂಗಡಣೆ:
ಮಗನೆ +ಕೇಳ್+ಈರೈದು +ವರುಷಕೆ
ಮಿಗುವವ್+ಎರಡೇ +ಮಾಸ +ಮಾಸಾ
ದಿಗಳನ್+ಅವರ್+ಅನುಭವಿಸಿದರು+ ಹದಿಮೂರು +ವತ್ಸರವ
ಮಿಗುವ್+ಅವಧಿ +ಬುಧರ್+ಅರಿಯೆ +ನಿನ್ನಿನ
ಹಗಲು +ನಿನ್ನದು +ಪಾಂಡು+ತನಯರು
ಹೊಗುವಡ್+ಇಂದಿನ +ದಿವಸವ್+ಅವರದು +ಕಂದ +ಕೇಳೆಂದ

ಅಚ್ಚರಿ:
(೧) ವರುಷ, ವತ್ಸರ; ತನಯ, ಮಗ, ಕಂದ – ಸಮಾನಾರ್ಥಕ ಪದಗಳು

ಪದ್ಯ ೫೭: ಜಂಬೂದ್ವೀಪದಲ್ಲಿ ಎಷ್ಟು ವರುಷಗಳಿವೆ?

ವರುಷವೊಂಬತ್ತಾಗಿಹುದು ವಿ
ಸ್ತರದ ಜಂಬೂದ್ವೀಪವೊಂದೇ
ವರುಷವೇಳಾಗಿಹವು ತಾ ಶತ ಸಂಖ್ಯೆಯಾದ್ವೀಪ
ನಿರುತಕಡೆಯದ್ವೀಪವೆಂಬುದು
ವರುಷವೆರಡಾಗಿರಲು ಮಾನಸ
ಗಿರಿಯದರ ನಡುವಿಹುದು ಚಕ್ರದ ಕಂಬಿಯಂದದಲಿ (ಅರಣ್ಯ ಪರ್ವ, ೮ ಸಂಧಿ, ೫೭ ಪದ್ಯ)

ತಾತ್ಪರ್ಯ:
ಜಂಬೂದ್ವೀಪದಲ್ಲಿ ಒಂಬತ್ತು ವರ್ಷಗಳಿವೆ. ಉಳಿದವುಗಳಲ್ಲಿ ಹಲವು ದ್ವೀಪಗಳಿವೆ. ಕಡೆಯ ದ್ವೀಪದಲ್ಲಿ ಎರಡು ವರ್ಷಗಳಿವೆ. ಅಲ್ಲಿ ಚಕ್ರದ ಕಂಬಿಯಂತೆ ಮಾನಸಗಿರಿಯಿದೆ.

ಅರ್ಥ:
ವರುಷ: ಭೂ ಮಂಡಲದ ಒಂಭತ್ತು ವಿಭಾಗಗಳಲ್ಲಿ ಒಂದು; ವಿಸ್ತರ: ವಿಸ್ತಾರ, ಅಗಲ; ದ್ವೀಪ: ನೀರಿನಿಂದ ಆವರಿಸಿಕೊಂಡಿರುವ ಭೂಭಾಗ; ನಿರುತ: ನಿಶ್ಚಯ; ಗಿರಿ: ಬೆಟ್ಟ; ನಡು: ಮಧ್ಯ; ಚಕ್ರ: ಗಾಲಿ; ಕಂಬಿ: ಉಕ್ಕಿನ ಸಲಾಕಿ;

ಪದವಿಂಗಡಣೆ:
ವರುಷವ್+ಒಂಬತ್ತಾಗಿಹುದು +ವಿ
ಸ್ತರದ +ಜಂಬೂ+ದ್ವೀಪವ್+ಒಂದೇ
ವರುಷವ್+ಏಳಾಗಿಹವು +ತಾ +ಶತ+ ಸಂಖ್ಯೆಯಾ+ದ್ವೀಪ
ನಿರುತಕಡೆಯ+ ದ್ವೀಪವೆಂಬುದು
ವರುಷವ್+ಎರಡಾಗಿರಲು +ಮಾನಸ
ಗಿರಿ+ಅದರ +ನಡುವಿಹುದು +ಚಕ್ರದ +ಕಂಬಿಯಂದದಲಿ

ಪದ್ಯ ೪೪: ಗಿರಿಗಳ ವಿಸ್ತಾರವೆಷ್ಟು?

ವರುಷ ಮಧ್ಯದ ಪರ್ವತಂಗಳ
ಹರಹು ತಾನೆರಡೆರಡು ಸಾಸಿರ
ವರುಷ ನವನವ ನವಸಹಸ್ರವದಾರು ಮಧ್ಯದಲಿ
ವರುಷವದು ಇಪ್ಪತ್ತ ನಾಲ್ಕರ
ಪರಿಗಣಿತ ಮೂಡಣದು ಪಡುವಣ
ದೆರಡು ತಾನದರಂತೆ ಮೆರೆವುದು ಹೊರಗೆ ಲವಣಾಬ್ಧಿ (ಅರಣ್ಯ ಪರ್ವ, ೮ ಸಂಧಿ, ೪೪ ಪದ್ಯ)

ತಾತ್ಪರ್ಯ:
ಒಂಬತ್ತು ವರ್ಷಗಳ (ಕುರು, ಹಿರಣ್ಮಯ, ರಮ್ಯಕ, ಇಳಾವೃತ, ಹರಿ, ಕಿಂಪುರುಷ, ಭರತ, ಭದ್ರಾಶ್ವ, ಕೇತುಮಾಲ) ನಡುವಿರುವ ಗಿರಿಗಳು ಎರಡೆರಡು ಸಹಸ್ರ ಯೋಜನ ವಿಸ್ತಾರವಾಗಿವೆ. ಮಧ್ಯದಲ್ಲಿ ಆರು ಸಹಸ್ರ ಯೋಜನ ವಿಸ್ತಾರದ ಪರ್ವತಗಳಿವೆ. ಹೀಗೆ ಪೂರ್ವ, ಪಶ್ಚಿಮ ದಿಕ್ಕುಗಳಲ್ಲಿ ಇಪ್ಪತ್ನಾಲ್ಕು ಯೋಜನ ವಿಸ್ತಾರದ ಪರ್ವತಗಳಿವೆ. ಇವು ಲವಣ ಸಮುದ್ರದವರೆಗೂ ಹಬ್ಬಿವೆ.

ಅರ್ಥ:
ವರ್ಷ: ಭೂ ಮಂಡಲದ ವಿಭಾಗ; ಮಧ್ಯ: ನಡುವೆ; ಪರ್ವತ: ಗಿರಿ, ಬೆಟ್ಟ; ಹರಹು: ವಿಸ್ತಾರ; ಸಾಸಿರ: ಸಹಸ್ರ, ಸಾವಿರ; ನವ: ಹೊಸ; ಪರಿಗಣನೆ: ಗಮನ, ಲೆಕ್ಕಾಚಾರ; ಮೂಡಣ: ಪೂರ್ವ; ಪಡುವಣ: ಪಶ್ಚಿಮ; ಮೆರೆ: ಹೊಳೆ, ಪ್ರಕಾಶಿಸು; ಹೊರಗೆ: ಆಚೆ; ಲವಣ: ಉಪ್ಪು; ಅಬ್ಧಿ: ಸಾಗರ;

ಪದವಿಂಗಡಣೆ:
ವರುಷ +ಮಧ್ಯದ +ಪರ್ವತಂಗಳ
ಹರಹು+ ತಾನ್+ಎರಡೆರಡು +ಸಾಸಿರ
ವರುಷ +ನವನವ +ನವ+ಸಹಸ್ರವದ್+ಆರು+ ಮಧ್ಯದಲಿ
ವರುಷವದು +ಇಪ್ಪತ್ತ +ನಾಲ್ಕರ
ಪರಿಗಣಿತ+ ಮೂಡಣದು +ಪಡುವಣದ್
ಎರಡು+ ತಾನದರಂತೆ +ಮೆರೆವುದು+ ಹೊರಗೆ +ಲವಣಾಬ್ಧಿ

ಅಚ್ಚರಿ:
(೧) ಎರಡೆರಡು , ನವನವ – ಜೋಡಿ ಪದಗಳ ಬಳಕೆ

ಪದ್ಯ ೩೨: ನಾರದರು ಪಾಂಡವರಿಗೆ ಯಾವ ಮಾರ್ಗ ಸೂಚಿಸಿದರು?

ಅರಸ ಚಿತ್ತೈಸೊಂದು ವತ್ಸರ
ವಿರಲಿ ನಿಮ್ಮೊಬ್ಬರಲಿ ಸತಿ ಮರು
ವರುಷಕೊಬ್ಬನೊಳಿಂತು ಪಂಚಕಕೈದು ವರುಷದಲಿ
ಅರಸಿಯನು ಪತಿ ಸಹಿತ ಮಂಚದೊ
ಳಿರಲು ಕಾಬುದು ಸಲ್ಲದದು ಗೋ
ಚರಿಸಿದರೆ ಬಳಿಕದಕೆ ಪ್ರಾಯಶ್ಚಿತ್ತವಿಧಿಯುಂಟು (ಆದಿ ಪರ್ವ, ೧೮ ಸಂಧಿ, ೩೨ ಪದ್ಯ)

ತಾತ್ಪರ್ಯ:
ನಾರದರು ಎಚ್ಚರಿಸಿದ ನಂತರ ಧರ್ಮರಾಯನಿಗೆ ಒಂದು ಮಾರ್ಗವನ್ನು ಸೂಚಿಸಿದರು. ದ್ರೌಪದಿಯು ಒಂದು ವರುಷ ಒಬ್ಬರ ಜೊತೆಯಿರಲಿ, ಬಳಿಕ ಮತ್ತೊಂದು ವರುಷ ಇನ್ನೊಬ್ಬರ ಜೊತೆ ಇರಲಿ, ಹೀಗೆ ಐವರೊಡನೆ ಐದು ವರುಷ ಕಳೆಯಲಿ. ದ್ರೌಪದಿಯು ಮಂಚದಲ್ಲಿ ಪತಿಯೊಡನಿದ್ದಾಗ ಅವರನ್ನು ಉಳಿದವರು ನೋಡಬಾರದು, ಹಾಗೆ ನೋಡಿದರೆ ಅದಕ್ಕೆ ಪ್ರಾಯಶ್ಚಿತ್ತವುಂಟು.

ಅರ್ಥ:
ಅರಸ: ರಾಜ; ಚಿತ್ತ: ಮನಸ್ಸು; ಚಿತ್ತೈಸು: ಗಮನವಿಟ್ಟು ಕೇಳು; ಒಂದು: ಏಕ; ವತ್ಸರ: ವರುಷ; ಸತಿ: ಪತ್ನಿ; ಪಂಚ: ಐದು; ಅರಸಿ: ರಾಣಿ; ಪತಿ: ಗಂಡ; ಸಹಿತ: ಜೊತೆ; ಕಾಬುದು: ಕಾಣಬೇಕು; ಸಲ್ಲದು: ಸರಿಯಲ್ಲ; ಗೋಚರಿಸು: ಕಾಣು; ಬಳಿಕ: ನಂತರ; ಪಾಯಶ್ಚಿತ್ತ: ತಪ್ಪಿಗಾಗಿ ವ್ಯಥೆ ಪಟ್ಟು ಪರಿಹಾರ ಮಾಡಿಕೊಳ್ಳುವ ಕರ್ಮ ವಿಧಿ;

ಪದವಿಂಗಡಣೆ:
ಅರಸ +ಚಿತ್ತೈಸ್+ಒಂದು +ವತ್ಸರ
ವಿರಲಿ +ನಿಮ್ಮೊಬ್ಬರಲಿ+ ಸತಿ+ ಮರು
ವರುಷಕ್+ಒಬ್ಬನೊಳ್+ಇಂತು+ ಪಂಚಕಕ್+ಐದು +ವರುಷದಲಿ
ಅರಸಿಯನು +ಪತಿ +ಸಹಿತ +ಮಂಚದೊಳ್
ಇರಲು +ಕಾಬುದು +ಸಲ್ಲದ್+ಅದು+ ಗೋ
ಚರಿಸಿದರೆ +ಬಳಿಕ್+ಅದಕೆ +ಪ್ರಾಯಶ್ಚಿತ್ತ+ವಿಧಿಯುಂಟು

ಅಚ್ಚರಿ:
(೧) ಅರಸ, ಅರಸಿ – ೧,೩ ಸಾಲಿನ ಮೊದಲ ಪದ, ಪುಲ್ಲಿಂಗ, ಸ್ತ್ರೀಲಿಂಗ ಪದ
(೨) ವರುಷ, ವತ್ಸರ – ಸಮನಾರ್ಥಕ ಪದ
(೩) ವರುಷ – ೩ ಸಾಲಿನ ಮೊದಲನೆ ಹಾಗು ಕೊನೆ ಪದ

ಪದ್ಯ ೩೩: ಮತ್ತೆ ಹಸ್ತಿನಾಪುರಕ್ಕೆ ಬಂದಾಗ ಧರ್ಮರಾಜನ ವಯಸ್ಸೆಷ್ಟು?

ವೀತಭಯರನ್ಯೋನ್ಯ ಪರಮ
ಪ್ರೀತಿಗಳ ಬೆಳವಿಗೆಯಲಿದ್ದರು
ಭೂತಳಾಧಿಪರೈದು ಸಂವತ್ಸರಗಳೊಂದಾಗಿ
ಖ್ಯಾತವಿದು ಪಾಂಚಾಲಪುರದೊಳ
ತೀತವಾಯಿತ್ತೊಂದು ವರುಷವ
ಭೀತಿ ಧರ್ಮಸುತಂಗೆ ಮೂವತ್ತಾರು ಸಮಯವಾಯ್ತು (ಆದಿ ಪರ್ವ, ೧೭ ಸಂಧಿ, ೩೩ ಪದ್ಯ)

ತಾತ್ಪರ್ಯ:
ಪಾಂಡವರು ಅನ್ಯೋನ್ಯ ಪ್ರೀತಿಯಿಂದ ಭಯರಹಿತವಾಗಿ ಐದು ವರ್ಷಗಳನ್ನು ಕೌರವರೊಡನೆ ಕಳೆದರು. ಪಾಂಚಾಲನಗರದಲ್ಲಿ ಪಾಂಡವರು ಒಂದು ವರ್ಷ ಕಳೆದಿದ್ದರು, ಈ ಸಮಯಕ್ಕೆ ಧರ್ಮರಾಜನಿಗೆ ಮೂವತ್ತಾರು ವರ್ಷಗಳಾಗಿದ್ದವು.

ಅರ್ಥ:
ವೀತ: ಕಳೆದ; ಅಭಯ: ನಿರ್ಭೀತಿ;ಅನ್ಯೋನ್ಯ: ಪರಸ್ಪರ ಪ್ರೀತಿ, ಸ್ನೇಹ; ಪರಮ: ಶ್ರೇಷ್ಠ; ಪ್ರೀತಿ: ಮಮತೆ; ಬೆಳವಿಗೆ:ಬೆಳವೆಣಿಗೆ, ಅಭಿವೃದ್ಧಿ; ಭೂತಳಾಧಿಪ: ರಾಜ; ಸಂವತ್ಸರ: ವರ್ಷ; ಖ್ಯಾತ: ಪ್ರಸಿದ್ದ; ಅತೀತ:ಮೀರಿದ; ಭೀತ:ಕಳೆದ; ಸುತ: ಮಗ;

ಪದವಿಂಗಡಣೆ:
ವೀತ್ +ಅಭಯರ್+ಅನ್ಯೋನ್ಯ +ಪರಮ
ಪ್ರೀತಿಗಳ+ ಬೆಳವಿಗೆಯಲ್+ಇದ್ದರು
ಭೂತಳಾಧಿಪರ್+ಐದು +ಸಂವತ್ಸರಗಳ್+ಒಂದಾಗಿ
ಖ್ಯಾತವಿದು+ ಪಾಂಚಾಲ+ಪುರದೊಳ್
ಅತೀತ+ವಾಯಿತ್+ಒಂದು +ವರುಷವ
ಭೀತಿ+ ಧರ್ಮಸುತಂಗೆ+ ಮೂವತ್ತಾರು+ ಸಮಯವಾಯ್ತು

ಅಚ್ಚರಿ:
(೧) ವೀತ, ಭೀತ – ೧, ೬ ಸಾಲಿನ ಮೊದಲ ಪದ, (ಪ್ರಾಸ)
(೨) ಐದು ಸಂವತ್ಸರ, ಒಂದು ವರುಷ, ಮೂವತ್ತಾರು ಸಮಯ – ವರ್ಷವನ್ನು (ಕಾಲ) ಸೂಚಿಸುವ ಪದ