ಪದ್ಯ ೧೭: ಅರ್ಜುನನು ಇಂದ್ರಕೀಲ ಪರ್ವತಕ್ಕೆ ಹೇಗೆ ಬೀಳ್ಕೊಟ್ಟನು?

ಎನುತ ತೇರಿನೊಳೊಂದು ಕಾಲಿ
ಟ್ಟನು ಧನಂಜಯನಿಂದ್ರಕೀಲದ
ವನಕೆ ಕೈಮುಗಿದೆರಗಿ ನುಡಿದನು ಮಧುರ ವಚನದಲಿ
ಮುನಿಜನವೆ ಪರ್ವತವೆ ಪಂಕಜ
ವನವೆ ತರುಲತೆಗುಲ್ಮ ಖಗ ಮೃಗ
ವನಚರರೆ ತಾ ಹೋಗಿ ಬಹೆನೈ ನಿಮ್ಮನುಜ್ಞೆಯಲಿ (ಅರಣ್ಯ ಪರ್ವ, ೮ ಸಂಧಿ, ೧೭ ಪದ್ಯ)

ತಾತ್ಪರ್ಯ:
ಹೀಗೆ ಹೇಳಿ ಅರ್ಜುನನು ರಥದಲ್ಲಿ ಒಂದು ಕಾಲಿಟ್ಟನು, ಕೆಳಗಿಳಿದು ಇಂದ್ರನೀಲ ವನಕ್ಕೆ ನಮಸ್ಕಾರವನ್ನು ಮಾಡಿ ಕೈಮುಗಿದು ನಿಂತು, ಓ ಇಂದ್ರಕೀಲದಲ್ಲಿರುವ ಮುನಿಜನರೇ, ಪರ್ವತವೇ, ಕಮಲ ವನಗಳೇ, ಮರ, ಬಳ್ಲಿ, ಪೊದೆಗಳೇ, ಪಕ್ಷಿಗಳೇ, ಮೃಗಗಳೇ, ವನಾರರೇ, ಮುನಿಜನರೇ, ನಾನು ನಿಮ್ಮ ಕರುಣೆಯಿಂದ ಇಷ್ಟು ದಿನ ಇಲ್ಲಿ ಸುಖವಾಗಿದ್ದೆನು, ಈಗ ನೀವು ಅಪ್ಪಣೆನೀಡಿ, ನಾನು ಹೋಗಿ ಬರುವೆ ಎಂದು ಬೇಡಿದನು.

ಅರ್ಥ:
ತೇರು: ರಥ; ಕಾಲು: ಪಾದ; ವನ: ಕಾಡು; ಎರಗು: ನಮಸ್ಕರಿಸು; ನುಡಿ: ಮಾತಾಡು; ಮಧುರ: ಸಿಹಿಯಾದುದು, ಸವಿಯಾದುದು; ವಚನ: ಮಾತು; ಮುನಿ: ಋಷಿ; ಜನ: ಗುಂಪು, ಮನುಷ್ಯ; ಪರ್ವತ: ಗಿರಿ; ಪಂಕಜ: ತಾವರೆ; ವನ: ಕಾಡು; ತರು: ಮರ; ಲತೆ: ಬಳ್ಳಿ; ಗುಲ್ಮ: ಪೊದೆ, ಪೊದರು; ಖಗ: ಪಕ್ಷಿ; ಮೃಗ: ಪ್ರಾಣಿ; ವನಚರರು: ಕಾಡಿನಲ್ಲಿ ಚಲಿಸುವ, ಜೀವಿಸುವ; ಹೋಗಿಬಹೆನೈ: ಹೋಗಿಬರುವೆ; ಅನುಜ್ಞೆ: ಒಪ್ಪಿಗೆ, ಅಪ್ಪಣೆ;

ಪದವಿಂಗಡಣೆ:
ಎನುತ +ತೇರಿನೊಳ್+ಒಂದು +ಕಾಲಿ
ಟ್ಟನು +ಧನಂಜಯನ್+ಇಂದ್ರಕೀಲದ
ವನಕೆ+ ಕೈಮುಗಿದ್+ಎರಗಿ +ನುಡಿದನು +ಮಧುರ +ವಚನದಲಿ
ಮುನಿಜನವೆ+ ಪರ್ವತವೆ+ ಪಂಕಜ
ವನವೆ+ ತರು+ಲತೆ+ಗುಲ್ಮ +ಖಗ +ಮೃಗ
ವನಚರರೆ +ತಾ +ಹೋಗಿ +ಬಹೆನೈ+ ನಿಮ್+ಅನುಜ್ಞೆಯಲಿ

ಅಚ್ಚರಿ:
(೧) ವನಕ್ಕೆ ತನ್ನ ಕೃತಜ್ಞತೆಯನ್ನು ತಿಳಿಸುವ ಪರಿ – ಇಂದ್ರಕೀಲದ ವನಕೆ ಕೈಮುಗಿದೆರಗಿ.. ತಾ ಹೋಗಿ ಬಹೆನೈ ನಿಮ್ಮನುಜ್ಞೆಯಲಿ;

ಪದ್ಯ ೧೮: ಬಳಾಕನ ಕಥೆಯೇನು?

ಬನದೊಳೊಬ್ಬ ಬಳಾಕನೆಂಬವ
ವನಚರನು ತನ್ನಯ ಕುಟುಂಬವ
ನನುದಿನವು ಮೃಗವಧೆಯಲೇ ಸಲಹಿದನು ಬೇಸರದೆ
ತನಗೆ ಕಡೆಪರಿಯಂತ ಮತ್ತೊಂ
ದನುವನರಿಯನು ರಾಗ ಲೋಭವ
ನೆನೆಯನದರಿಂ ಹಿಂಸೆ ಸಂದುದು ವೃತ್ತಿರೂಪದಲಿ (ಕರ್ಣ ಪರ್ವ, ೧೭ ಸಂಧಿ, ೧೮ ಪದ್ಯ)

ತಾತ್ಪರ್ಯ:
ಒಂದಾನೊಂದು ಕಾಲದಲ್ಲಿ ಒಂದು ಕಾಡಿನಲ್ಲಿ ಬಳಾಕನೆಂಬ ಬೇಡನಿದ್ದನು. ಅನುದಿನವು ಅವನು ಮೃಗಗಳನ್ನು ಬೇಟೆಯಾಡಿ ತನ್ನ ಕುಟುಂಬವನ್ನು ಪೋಷಿಸುತ್ತಿದ್ದನು. ಮರಣಕಾಲದವರೆಗೂ ಅವನು ಇನ್ನೊಂದು ಕರ್ಮಕ್ಕೆ ಹೋಗಲಿಲ್ಲ. ಆದರೆ ಅವನಿಗೆ ರಾಗ, ಲೋಭಗಳಿರಲಿಲ್ಲ. ಅವನ ವೃತ್ತಿಯೀಮ್ದೇ ಅವನು ಹಿಂಸೆಯನ್ನು ಮಾಡಿದನು.

ಅರ್ಥ:
ಬನ: ವನ, ಕಾಡು; ವನಚರ: ಬೇಟೆಗಾರ; ಕುಟುಂಬ: ಪರಿವಾರ; ಅನುದಿನ: ಪ್ರತಿನಿತ್ಯ; ಮೃಗ: ಪ್ರಾಣಿ; ವಧೆ: ಸಾಯಿಸು; ಸಲಹು: ಕಾಪಾಡು, ಪೋಷಿಸು; ಬೇಸರ: ನಿರುತ್ಸಾಹ, ಬೇಜಾರು; ಕಡೆ: ಅಂತ್ಯ; ಪರಿ: ರೀತಿ; ಅನುವು: ರೀತಿ, ಹೊಂದಿಕೆ; ಅರಿ: ತಿಳಿ; ರಾಗ: ಒಲಮೆ, ಪ್ರೀತಿ; ಲೋಭ: ಅತಿಯಾಸೆ, ದುರಾಸೆ ; ನೆನೆ: ಜ್ಞಾಪಿಸಿಕೊಳ್ಳದೆ; ಹಿಂಸೆ: ನೋವು; ಸಂದು: ಸಂದರ್ಭ ; ವೃತ್ತಿ: ಕೆಲಸ;

ಪದವಿಂಗಡಣೆ:
ಬನದೊಳ್+ಒಬ್ಬ +ಬಳಾಕನ್+ಎಂಬವ
ವನಚರನು +ತನ್ನಯ +ಕುಟುಂಬವನ್
ಅನುದಿನವು +ಮೃಗ+ವಧೆಯಲೇ +ಸಲಹಿದನು+ ಬೇಸರದೆ
ತನಗೆ +ಕಡೆಪರಿಯಂತ+ ಮತ್ತೊಂ
ದನುವನ್+ಅರಿಯನು +ರಾಗ +ಲೋಭವ
ನೆನೆಯನ್+ಅದರಿಂ +ಹಿಂಸೆ+ ಸಂದುದು +ವೃತ್ತಿರೂಪದಲಿ