ಪದ್ಯ ೧೦: ಅರ್ಜುನನು ಕಂಡ ಕನಸಿನ ಮರ್ಮವೇನು?

ಕನಸನೀ ಹದನಾಗಿ ಕಂಡೆನು
ದನುಜಹರ ಬೆಸಸಿದರ ಫಲವನು
ನನಗೆನಲು ನಸುನಗುತ ನುಡಿದನು ದಾನವಧ್ವಂಸಿ
ನಿನಗೆ ಶೂಲಿಯ ಕರುಣವಾಯ್ತಿಂ
ದಿನಲಿ ಪಾಶುಪತಾಸ್ತ್ರ ನಿನ್ನದು
ದಿನದೊಳರಿ ಸೈಂಧವ ವಧವ್ಯಾಪಾರವಹುದೆಂದ (ದ್ರೋಣ ಪರ್ವ, ೯ ಸಂಧಿ, ೧೦ ಪದ್ಯ)

ತಾತ್ಪರ್ಯ:
ಅರ್ಜುನನು ಮಾತನಾಡುತ್ತಾ ತನ್ನ ಕನಸನ್ನು ಕೃಷ್ಣನಿಗೆ ವಿವರಿಸಿದನು. ಇದರ ಫಲವೇನೆಂದು ಕೃಷ್ಣನಲ್ಲಿ ಕೇಳಲು, ಶ್ರೀಕೃಷ್ಣನು ನಸುನಕ್ಕು, ನಿನಗೆ ಶಿವನ ಕರುಣೆ ದೊರಕಿತು. ಈ ದಿವಸ ಪಾಶುಪತಾಸ್ತ್ರವು ನಿನ್ನದು, ಇಂದು ಸೈಂಧವನ ವಧೆಯಾಗುತ್ತದೆ ಎಂದನು.

ಅರ್ಥ:
ಕನಸು: ಸ್ವಪ್ನ; ಹದ: ಸರಿಯಾದ ಸ್ಥಿತಿ; ಕಂಡು: ನೋಡು; ದನುಜ: ರಾಕ್ಷರ; ಹರ: ನಾಶ; ದನುಜಹರ: ಕೃಷ್ಣ; ಬೆಸ: ಕೆಲಸ, ಕಾರ್ಯ; ಫಲ: ಪ್ರಯೋಜನ; ನಸುನಗು: ಮಂದಸ್ಮಿತ; ನುಡಿ: ಮಾತು; ದಾನವ: ರಾಕ್ಷಸ; ಧ್ವಂಸಿ: ನಾಶ; ಶೂಲಿ: ಈಶ್ವರ; ಕರುಣ: ದಯೆ; ಅಸ್ತ್ರ: ಶಸ್ತ್ರ; ಅರಿ: ವೈರಿ; ವಧ: ಸಾಯಿಸು; ವ್ಯಾಪಾರ: ವ್ಯವಹಾರ;

ಪದವಿಂಗಡಣೆ:
ಕನಸನ್+ಈ+ ಹದನಾಗಿ +ಕಂಡೆನು
ದನುಜಹರ +ಬೆಸಸ್+ಇದರ +ಫಲವನು
ನನಗೆನಲು +ನಸುನಗುತ +ನುಡಿದನು +ದಾನವಧ್ವಂಸಿ
ನಿನಗೆ +ಶೂಲಿಯ +ಕರುಣವಾಯ್ತ್
ಇಂದಿನಲಿ +ಪಾಶುಪತಾಸ್ತ್ರ +ನಿನ್ನದು
ದಿನದೊಳ್+ಅರಿ +ಸೈಂಧವ +ವಧ+ವ್ಯಾಪಾರವಹುದೆಂದ

ಅಚ್ಚರಿ:
(೧) ದನುಜಹರ, ದಾನವಧ್ವಂಸಿ – ಕೃಷ್ಣನನ್ನು ಕರೆದ ಪರಿ
(೨) ನ ಕಾರದ ತ್ರಿವಳಿ ಪದ – ನನಗೆನಲು ನಸುನಗುತ ನುಡಿದನು