ಹಿಂದಣಪರಾಧವನು ಲೆಕ್ಕಿಸು
ತೊಂದೆರಡು ಮೂರಾಯ್ತು ನಾಲ್ಕೈ
ದೆಂದು ಮೆಟ್ಟಿದನವನಿಪಾಲನ ಮಕುಟಮಸ್ತಕವ
ಇಂದುಮುಖಿಯನು ಬೂತುಗೆಡೆದುದ
ಕೊಂದು ಘಾಯವ ಕೊಳ್ಳೆನುತ ಮಡ
ದಿಂದ ವದನವನೊದೆದು ಹಲುಗಳ ಕಳಚಿದನು ಭೀಮ (ಗದಾ ಪರ್ವ, ೮ ಸಂಧಿ, ೧೪ ಪದ್ಯ)
ತಾತ್ಪರ್ಯ:
ಎಲೈ ಕೌರವ, ಹಿಂದೆ ನೀನು ಮಾಡಿದ ಅಪರಾಧಗಳನ್ನು ಹೇಳಿ, ಒಂದು ಎರಡು ಮೂರು ನಾಲ್ಕು, ಐದು ಎಂದು ಎಣಿಸಿ ಕೌರವನ ಕಿರೀಟ ಖಚಿತವಾದ ತಲೆಯನ್ನು ಭೀಮನು ಮೆಟ್ಟಿದನು. ದ್ರೌಪದಿಯನ್ನು ಅಪಮಾನಿಸಿದ್ದಕ್ಕೆ ಈ ಒಂದು ಹೊಡೆತವನ್ನು ತೆಗೆದುಕೋ ಎಂದು ಅವನ ಮುಖಕ್ಕೆ ಹೊಡೆದು ಹಲ್ಲುಗಲನ್ನುದುರಿಸಿದನು.
ಅರ್ಥ:
ಹಿಂದಣ: ಹಿಂದೆ ನಡೆದ; ಅಪರಾಧ: ತಪ್ಪು; ಲೆಕ್ಕಿಸು: ಎಣಿಕೆಮಾಡು; ಮೆಟ್ಟು: ತುಳಿ; ಅವನಿಪಾಲ: ರಾಜ; ಮಕುಟ: ಕಿರೀಟ; ಮಸ್ತಕ: ಶಿರ; ಇಂದುಮುಖಿ: ಸ್ತ್ರಿ (ದ್ರೌಪದಿ); ಬೂತು: ಕುಚೋದ್ಯ, ಕುಚೇಷ್ಟೆ; ಘಾಯ: ಪೆಟ್ಟು; ಮಡ:ಪಾದದ ಹಿಂಭಾಗ, ಹರಡು, ಹಿಮ್ಮಡಿ; ವದನ: ಮುಖ; ಒದೆ: ತಳ್ಳು, ನೂಕು; ಹಲು: ದಂತ; ಕಲಚು: ಬೀಳಿಸು, ಸಡಲಿಸು;
ಪದವಿಂಗಡಣೆ:
ಹಿಂದಣ್+ಅಪರಾಧವನು +ಲೆಕ್ಕಿಸುತ್
ಒಂದೆರಡು +ಮೂರಾಯ್ತು +ನಾಲ್ಕೈದ್
ಎಂದು +ಮೆಟ್ಟಿದನ್+ಅವನಿಪಾಲನ +ಮಕುಟ+ಮಸ್ತಕವ
ಇಂದುಮುಖಿಯನು +ಬೂತುಗೆಡೆದುದಕ್
ಒಂದು +ಘಾಯವ +ಕೊಳ್ಳೆನುತ +ಮಡ
ದಿಂದ +ವದನವನ್+ಒದೆದು +ಹಲುಗಳ +ಕಳಚಿದನು +ಭೀಮ
ಅಚ್ಚರಿ:
(೧) ೨ ಸಾಲುಗಳಲ್ಲಿ ಅಂಕಿಗಳನ್ನು ಬರೆದ ಪರಿ – ಒಂದೆರಡು ಮೂರಾಯ್ತು ನಾಲ್ಕೈ
(೨) ಭೀಮನ ಕೋಪವನ್ನು ತೋರುವ ಪರಿ – ಇಂದುಮುಖಿಯನು ಬೂತುಗೆಡೆದುದಕೊಂದು ಘಾಯವ ಕೊಳ್ಳೆನುತ ಮಡದಿಂದ ವದನವನೊದೆದು ಹಲುಗಳ ಕಳಚಿದನು