ಬರಿಯ ಧರ್ಮದ ಜಾಡ್ಯದಲಿ ಮೈ
ಮರೆದು ವನದಲಿ ಬೇರು ಬಿಕ್ಕೆಯ
ನರಸಿ ತೊಳಲ್ದುದು ಸಾಲದೇ ಹದಿಮೂರು ವತ್ಸರವು
ಉರುಕುಗೊಂಡೊಡೆ ರಾಜತೇಜವ
ಮೆರೆವ ದಿನವೆಂದಿಹುದು ನೀವಿ
ನ್ನರಿಯಿರೆಮ್ಮನು ಹರಿಯಬಿಡಿ ಸಾಕೆಂದನಾ ಭೀಮ (ವಿರಾಟ ಪರ್ವ, ೧೦ ಸಂಧಿ, ೪೦ ಪದ್ಯ)
ತಾತ್ಪರ್ಯ:
ಹದಿಮೂರು ವರ್ಷಗಳ ಕಾಲ ಧರ್ಮವೆಂಬ ಜಾಡ್ಯದಿಂದ ನರಳಿ ಗೆಡ್ಡೆಗೆಣಸು ಬೇರುಗಳನ್ನು ಹುಡುಕುತ್ತಾ ತೊಳಲಿದುದು ಸಾಕಾಗಲಿಲ್ಲವೇ? ಇದನ್ನೇ ಮುಂದುವರಿಸುತ್ತಾ ಹೋದರೆ ನಮ್ಮ ರಾಜ ತೇಜಸ್ಸನ್ನು ನಾವು ಮೆರೆಯುವುದು ಯಾವಾಗ? ನಮ್ಮ ಮನಸ್ಸು ನಿಮಗೆ ತಿಳಿಯುವುದಿಲ್ಲ ನನ್ನ ಕೈಬಿಡಿ ಎಂದು ಭೀಮನು ಹೇಳಿದನು.
ಅರ್ಥ:
ಬರಿ: ವ್ಯರ್ಥವಾದುದು; ಧರ್ಮ: ಧಾರಣ ಮಾಡಿದುದು; ಜಾಡ್ಯ: ನಿರುತ್ಸಾಹ; ಮರೆ: ನೆನಪಿನಿಂದ ದೂರ ಮಾಡು; ವನ: ಕಾದು; ಬೇರು: ಮರ, ಗಿಡಗಳ ಅಡಿಭಾಗ; ಬಿಕ್ಕೆ: ತಿರುಪೆ, ಭಿಕ್ಷೆ; ಅರಸು: ಹುಡುಕು; ತೊಳಲು: ಬವಣೆ, ಸಂಕಟ; ಸಾಲದು: ಸಾಕು; ವತ್ಸರ: ವರ್ಷ; ಉರುಕು: ಭಯ; ತೇಜ: ಪ್ರಕಾಶ; ದಿನ: ದಿವಸ; ಅರಿ: ತಿಳಿ; ಹರಿ: ಚಲಿಸು; ಸಾಕು: ನಿಲ್ಲಿಸು;
ಪದವಿಂಗಡಣೆ:
ಬರಿಯ +ಧರ್ಮದ +ಜಾಡ್ಯದಲಿ +ಮೈ
ಮರೆದು +ವನದಲಿ +ಬೇರು +ಬಿಕ್ಕೆಯನ್
ಅರಸಿ +ತೊಳಲ್ದುದು +ಸಾಲದೇ +ಹದಿಮೂರು +ವತ್ಸರವು
ಉರುಕುಗೊಂಡೊಡೆ+ ರಾಜ+ತೇಜವ
ಮೆರೆವ+ ದಿನವೆಂದ್+ಇಹುದು +ನೀವಿನ್
ಅರಿಯಿರ್+ಎಮ್ಮನು +ಹರಿಯಬಿಡಿ+ ಸಾಕೆಂದನಾ +ಭೀಮ
ಅಚ್ಚರಿ:
(೧) ಪಾಂಡವರು ಪಟ್ಟ ಕಷ್ಟ: ವನದಲಿ ಬೇರು ಬಿಕ್ಕೆಯನರಸಿ ತೊಳಲ್ದುದು ಸಾಲದೇ ಹದಿಮೂರು ವತ್ಸರವು