ಪದ್ಯ ೩೨: ಶಕುನಿಯ ಸೈನ್ಯವನ್ನು ಯಾರು ಕೊಂದರು?

ಕವಿದುದಾ ಪರಿವಾರ ವಡಬನ
ತಿವಿವ ತುಂಬಿಗಳಂತೆ ಶಕುನಿಯ
ಬವರಿಗರು ಮಂಡಳಿಸೆ ಸಹದೇವನ ರಥಾಗ್ರದಲಿ
ತೆವರಿಸಿದನನಿಬರ ಚತುರ್ಬಲ
ನಿವಹವನು ನಿಮಿಷಾರ್ಧದಲಿ ಸಂ
ತವಿಸಿದನು ಸಹದೇವ ಕೊಂದನು ಸೌಬಲನ ಬಲವ (ಗದಾ ಪರ್ವ, ೨ ಸಂಧಿ, ೩೨ ಪದ್ಯ)

ತಾತ್ಪರ್ಯ:
ಶಕುನಿಯ ಸೇನೆಯು ವಡಬಾಗ್ನಿಯನ್ನು ಕವಿಯುವ ದುಂಬಿಗಳಂತೆ ಸಹದೇವನನ್ನು ಸುತ್ತುವರಿದಿತು. ಸಹದೇವನು ನಿಮಿಷಾರ್ಧದಲ್ಲಿ ಅವರೆಲ್ಲರನ್ನೂ ತಡೆದು ಶಕುನಿಯ ಸೇನೆಯನ್ನು ಕೊಂದನು.

ಅರ್ಥ:
ಕವಿ: ಆವರಿಸು; ಪರಿವಾರ: ಪರಿಜನ, ಬಂಧುಜನ; ವಡಬ: ಸಮುದ್ರದೊಳಗಿರುವ ಬೆಂಕಿ; ತಿವಿ: ಚುಚ್ಚು; ತುಂಬಿ: ದುಂಬಿ, ಭ್ರಮರ; ಬವರ: ಕಾಳಗ, ಯುದ್ಧ; ಮಂಡಳಿಸು: ಸುತ್ತುವರಿ; ರಥ: ಬಂಡಿ; ಅಗ್ರ: ಮುಂಭಾಗ; ತೆವರು: ಹಿಮ್ಮೆಟ್ಟು, ಅಟ್ಟು, ಓಡಿಸು; ಅನಿಬರ: ಅಷ್ಟುಜನ; ನಿಮಿಷ: ಕ್ಷಣ; ಸಂತವಿಸು: ಸಮಾಧಾನಗೊಳಿಸು; ಕೊಂದು: ಕೊಲ್ಲು; ಬಲ: ಶಕ್ತಿ, ಸೈನ್ಯ;

ಪದವಿಂಗಡಣೆ:
ಕವಿದುದಾ+ ಪರಿವಾರ +ವಡಬನ
ತಿವಿವ+ ತುಂಬಿಗಳಂತೆ +ಶಕುನಿಯ
ಬವರಿಗರು +ಮಂಡಳಿಸೆ +ಸಹದೇವನ +ರಥಾಗ್ರದಲಿ
ತೆವರಿಸಿದನ್+ಅನಿಬರ +ಚತುರ್ಬಲ
ನಿವಹವನು +ನಿಮಿಷಾರ್ಧದಲಿ +ಸಂ
ತವಿಸಿದನು +ಸಹದೇವ +ಕೊಂದನು +ಸೌಬಲನ +ಬಲವ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕವಿದುದಾ ಪರಿವಾರ ವಡಬನತಿವಿವ ತುಂಬಿಗಳಂತೆ

ಪದ್ಯ ೭೯: ಯುದ್ಧದಲ್ಲಿ ಯಾರು ಆಯಾಸಗೊಂಡರು?

ಗುರುತನುಜ ರವಿಸೂನು ಮಾದ್ರೇ
ಶ್ವರ ಜಯದ್ರಥ ಕೌರವಾದಿಗ
ಳರಿ ಗದಾಘಾತದಲಿ ಕೈ ಮೈ ದಣಿದು ಮನದಣಿದು
ತೆರಳಿದರು ಬಳಿಕಪರಜಲಧಿಯೊ
ಳುರಿವ ವಡಬನ ದೀಪ್ತಶಿಖರದೊ
ಳೆರಗುವಂತೆ ಪತಂಗ ಮಂಡಲವಿಳಿದುದಂಬರವ (ದ್ರೋಣ ಪರ್ವ, ೩ ಸಂಧಿ, ೭೯ ಪದ್ಯ)

ತಾತ್ಪರ್ಯ:
ಅಶ್ವತ್ಥಾಮ, ಕರ್ಣ, ಶಲ್ಯ, ಜಯದ್ರಥ, ಕೌರವರು ಭೀಮನ ಗದೆಯ ಹೊಡೆತದಿಂದ ಕೈ, ಮೈ ಮನಸ್ಸುಗಳಿಂದ ದಣಿದರು. ಅಷ್ಟರಲ್ಲಿ ಪಶ್ಚಿಮ ಸಮುದ್ರದೊಳಕ್ಕೆ ಜ್ವಲಿಸುವ ಬಡಬಾನಲ ಶಿಖರಕ್ಕೆ ಎರಗುವಂತೆ ಸೂರ್ಯಮಂಡಲವು ಆಕಾಶದಿಂದ ಕೆಳಗಿಳಿಯಿತು.

ಅರ್ಥ:
ತನುಜ: ಮಗ; ಗುರು: ಆಚಾರ್ಯ; ರವಿ: ಸೂರ್ಯ; ಸೂನು: ಮಗ; ಮಾದ್ರೇಶ್ವರ: ಶಲ್ಯ, ಮದ್ರ ದೇಶದ ದೊರೆ; ಆದಿ: ಮುಂತಾದ; ಅರಿ: ಕತ್ತರಿಸು; ಗದೆ: ಮುದ್ಗರ; ಆಘಾತ: ಹೊಡೆತ; ಕೈ: ಹಸ್ತ; ಮೈ: ತನು; ದಣಿ: ಆಯಾಸ; ಮನ: ಮನಸ್ಸು; ತೆರಳು: ಹಿಂದಿರುಗು; ಬಳಿಕ: ನಂತರ; ಅಪರ: ಪಶ್ಚಿಮದಿಕ್ಕು; ಜಲಧಿ: ಸಾಗರ; ಉರಿ: ಬೆಂಕಿ; ವಡಬ: ಸಮುದ್ರದಲ್ಲಿರುವ ಬೆಂಕಿ, ಬಡ ಬಾಗ್ನಿ; ದೀಪ್ತ: ಪ್ರಕಾಶವುಳ್ಳ; ಶಿಖರ: ತುದಿ; ಎರಗು: ಬಾಗು; ಪತಂಗ: ಸೂರ್ಯ; ಮಂಡಲ:ವರ್ತುಲಾಕಾರ; ಇಳಿ: ಬಾಗು; ಅಂಬರ: ಆಗಸ;

ಪದವಿಂಗಡಣೆ:
ಗುರು+ತನುಜ +ರವಿ+ಸೂನು +ಮಾದ್ರೇ
ಶ್ವರ +ಜಯದ್ರಥ +ಕೌರವ್+ಆದಿಗಳ್
ಅರಿ +ಗದ+ಆಘಾತದಲಿ +ಕೈ +ಮೈ +ದಣಿದು +ಮನದಣಿದು
ತೆರಳಿದರು +ಬಳಿಕ್+ಅಪರ+ಜಲಧಿಯೊಳ್
ಉರಿವ +ವಡಬನ+ ದೀಪ್ತ+ಶಿಖರದೊಳ್
ಎರಗುವಂತೆ +ಪತಂಗ +ಮಂಡಲವ್+ಇಳಿದುದ್+ಅಂಬರವ

ಅಚ್ಚರಿ:
(೧) ಸೂರ್ಯ ಮುಳುಗಿದ ಎಂದು ಹೇಳುವ ಪರಿ – ಅಪರಜಲಧಿಯೊಳುರಿವ ವಡಬನ ದೀಪ್ತಶಿಖರದೊ
ಳೆರಗುವಂತೆ ಪತಂಗ ಮಂಡಲವಿಳಿದುದಂಬರವ