ಪಾರ್ಥ ಪರಿಯಂತೇಕೆ ಸಮರ
ವ್ಯರ್ಥಜೀವರು ನೀವು ಕೌರವ
ನರ್ಥವನು ಸಲೆ ತಿಂಬುದಲ್ಲದೆ ಸಮರ ನಿಮಗೇಕೆ
ಸ್ವಾರ್ಥ ಲೋಲುಪ್ತಿಯಲಿ ನಿಲುವ ಸ
ಮರ್ಥರಾದರೆ ಬಾಣಧಾರಾ
ತೀರ್ಥದೊಳಗೋಲಾಡಿಸುವೆನೆಂದೆಚ್ಚನಭಿಮನ್ಯು (ದ್ರೋಣ ಪರ್ವ, ೬ ಸಂಧಿ, ೧೦ ಪದ್ಯ)
ತಾತ್ಪರ್ಯ:
ಅಭಿಮನ್ಯುವು ಉತ್ತರಿಸುತ್ತಾ, ಅರ್ಜುನನ ತನಕ ಏಕೆ ಹೋಗಬೇಕು? ನೀವು ಯುದ್ಧದಲ್ಲಿ ವ್ಯರ್ಥಜೀವಿಗಳು. ಕೌರವನ ಹಣವನ್ನು ತಿನ್ನುವುದೊಂದೇ ನಿಮಗೆ ಗೊತ್ತು, ನಿಮಗೆ ಯುದ್ಧವೇಕೆ? ಸ್ವಾರ್ಥ ಸಾಧಿಸಲೆಂದು ಯುದ್ಧಕ್ಕೆ ನಿಲ್ಲುವವರಾದರೆ, ನಿಮ್ಮನ್ನು ಬಾಣಗಳ ಧಾರೆಯ ತೀರ್ಥದೊಳಗೆ ಮುಳುಗಿಸಿ ಸದ್ಗತಿಯನ್ನು ಕೊಡುತ್ತೇನೆ ಎಂದು ಬಾಣ ಪ್ರಯೋಗ ಮಾಡಿದನು.
ಅರ್ಥ:
ಪರಿ: ನಡೆ, ಪ್ರವಹಿಸು; ಸಮರ: ಯುದ್ಧ; ವ್ಯರ್ಥ: ನಿರುಪಯುಕ್ತತೆ; ಜೀವರು: ಬದುಕಿರುವವರು; ಅರ್ಥ: ಹಣ; ಸಲೆ: ಒಂದೇ ಸಮನೆ, ಏಕಪ್ರಕಾರವಾಗಿ; ತಿಂಬು: ತಿನ್ನು; ಸ್ವಾರ್ಥ: ತನ್ನ ಪ್ರಯೋಜನ, ಸ್ವಹಿತ; ಲೋಲುಪ್ತಿ: ಸುಖ, ಸಂತೋಷ; ನಿಲು: ಚಲಿಸದಿರು; ಸಮರ್ಥ: ಬಲಶಾಲಿ; ಬಾಣ: ಸರಳ, ಅಂಬು; ಧಾರಾ: ವರ್ಷ; ತೀರ್ಥ: ಪವಿತ್ರವಾದ ಜಲ, ನೀರು; ಓಲಾಡು: ಹಾರಾಡು; ಎಚ್ಚು: ಬಾಣ ಪ್ರಯೋಗ ಮಾಡು;
ಪದವಿಂಗಡಣೆ:
ಪಾರ್ಥ +ಪರಿಯಂತೇಕೆ+ ಸಮರ
ವ್ಯರ್ಥ+ಜೀವರು+ ನೀವು +ಕೌರವನ್
ಅರ್ಥವನು +ಸಲೆ +ತಿಂಬುದಲ್ಲದೆ +ಸಮರ +ನಿಮಗೇಕೆ
ಸ್ವಾರ್ಥ +ಲೋಲುಪ್ತಿಯಲಿ +ನಿಲುವ +ಸ
ಮರ್ಥರಾದರೆ+ ಬಾಣ+ಧಾರಾ
ತೀರ್ಥದೊಳಗ್+ಓಲಾಡಿಸುವೆನೆಂದ್+ಎಚ್ಚನ್+ಅಭಿಮನ್ಯು
ಅಚ್ಚರಿ:
(೧) ಹಂಗಿಸುವ ಪರಿ – ಸಮರ ವ್ಯರ್ಥಜೀವರು ನೀವು ಕೌರವನರ್ಥವನು ಸಲೆ ತಿಂಬುದಲ್ಲದೆ ಸಮರ ನಿಮಗೇಕೆ