ಲೋಲಲೋಚನೆ ದೃಢಪತಿವ್ರತೆ
ಏಳು ದುಃಖಿಸಬೇಡ ಭೃಗು ಜಾ
ಬಾಲಿ ಜಮದಗ್ನ್ಯಾದಿ ದಿವ್ಯ ಮುನೀಂದ್ರ ಗಣವಿದೆಲ
ಓಲಗಿಸುವುದು ದುಷ್ಕೃತಿಗೆ ನಿ
ಪ್ಪಾಳೆಯವು ಬಳಿಕಹುದು ಮಂತ್ರ ವಿ
ಶಾಲ ಬೀಜದಿನಹುದು ಸಂತತಿ ಕಾಂತೆ ಕೇಳೆಂದ (ಆದಿ ಪರ್ವ, ೪ ಸಂಧಿ, ೩೧ ಪದ್ಯ)
ತಾತ್ಪರ್ಯ:
ಆಗ ಪಾಂಡುವು ಕುಂತಿಗೆ ಹೇಳುತ್ತಾ, ಸುಂದರಿ ನೀನು ಮಹಾ ಪತಿವ್ರತೆ, ದುಃಖಿಸದೇ ಮೇಲೇಳು. ಭೃಗು, ಜಾಬಾಲಿ, ಜಮದಗ್ನಿ ಹೀಗೆ ಮೊದಲಾದ ಋಷಿಶ್ರೇಷ್ಠರ ಗಣವು ಇಲ್ಲಿದೆ. ಅವರು ದುಷ್ಕರ್ಮಕ್ಕೆ ಪ್ರಾಯಶ್ಚಿತ್ತವನ್ನು ಮಾಡಿಸಿದರೆ, ಪಾಪದ ಪಾಳೆಯವು ನಮ್ಮನ್ನು ಬಿಟ್ಟುಹೋಗುತ್ತದೆ. ಬಳಿಕ ಮಂತ್ರಬೀಜದಿಂದ ನಮಗೆ ಮಕ್ಕಳಾಗುವರು ಎಂದು ಹೇಳಿದನು.
ಅರ್ಥ:
ಲೋಲಲೋಚನೆ: ಚಂಚಲವಾದ ಕಣ್ಣುಳ್ಳ, ಸ್ತ್ರೀ; ದೃಢ: ಗಟ್ಟಿ; ಪತಿವ್ರತೆ: ಸಾಧ್ವಿ, ಗರತಿ; ದುಃಖ: ದುಗುಡ; ದಿವ್ಯ: ಶ್ರೇಷ್ಠ; ಗಣ: ಗುಂಪು; ಓಲಗ: ಸೇವೆ, ದರ್ಬಾರು; ದುಷ್ಕೃತಿ: ಕೆಟ್ಟ ಕೆಲಸ; ಪಾಳೆಯ: ಬೀಡು, ಶಿಬಿರ; ಬಳಿಕ: ನಂತರ; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ವಿಶಾಲ: ದೊಡ್ಡ; ಬೀಜ: ಉತ್ಪತ್ತಿ ಸ್ಥಾನ, ಮೂಲ, ಕಾರಣ; ಸಂತತಿ: ಮಕ್ಕಳು; ಕಾಂತೆ: ಪ್ರಿಯತಮೆ; ಕೇಳು: ಆಲಿಸು;
ಪದವಿಂಗಡಣೆ:
ಲೋಲಲೋಚನೆ+ ದೃಢ+ಪತಿವ್ರತೆ
ಏಳು+ ದುಃಖಿಸಬೇಡ +ಭೃಗು +ಜಾ
ಬಾಲಿ +ಜಮದಗ್ನ್ಯಾದಿ+ ದಿವ್ಯ+ ಮುನೀಂದ್ರ +ಗಣವಿದೆಲ
ಓಲಗಿಸುವುದು +ದುಷ್ಕೃತಿಗೆ +ನಿ
ಪ್ಪಾಳೆಯವು +ಬಳಿಕಹುದು +ಮಂತ್ರ +ವಿ
ಶಾಲ +ಬೀಜದಿನ್+ಅಹುದು +ಸಂತತಿ +ಕಾಂತೆ +ಕೇಳೆಂದ
ಅಚ್ಚರಿ:
(೧) ಕುಂತಿಯನ್ನು ಕರೆದ ಪರಿ – ಲೋಲಲೋಚನೆ, ದೃಢಪತಿವ್ರತೆ, ಕಾಂತೆ;