ಪದ್ಯ ೧೯: ಧರ್ಮಜನು ಯಾವ ವನಕ್ಕೆ ಹೊರಟನು?

ಕೇಳಲಷ್ಟಾವಕ್ರ ಚರಿತವ
ಹೇಳಿದನು ಲೋಮಶ ಮುನೀಂದ್ರ ನೃ
ಪಾಲಕಂಗರುಹಿದನು ಪೂರ್ವಾಪರದ ಸಂಗತಿಯ
ಭಾಳಡವಿ ಬಯಲಾಯ್ತು ಖಗಮೃಗ
ಜಾಲ ಸವೆದುದು ಗಂಧಮಾದನ
ಶೈಲವನದಲಿ ವಾಸವೆಂದವನೀಶ ಹೊರವಂಟ (ಅರಣ್ಯ ಪರ್ವ, ೧೦ ಸಂಧಿ, ೧೯ ಪದ್ಯ)

ತಾತ್ಪರ್ಯ:
ಅಷ್ಟಾವಕ್ರನ ಚರಿತ್ರೆಯನ್ನು ಹೇಳೆಂದು ಕೇಳಲು ಲೋಮಶನು ಆ ಕಥೆಯನ್ನೆಲ್ಲವನ್ನೂ ಹೇಳಿದನು. ಪಾಂಡವರಿದ್ದ ಅಡವಿಯಲ್ಲಿ ಹಣ್ಣು ಹೂವುಗಳು ಪಕ್ಷಿ ಮೃಗಗಳು ಸವೆದು ಹೋಗಲು, ಗಂಧಮಾದನಗಿರಿಯ ವನಕ್ಕೆ ಹೋಗೋಣವೆಂದು ಧರ್ಮಜನು ಹೊರಟನು.

ಅರ್ಥ:
ಕೇಳು: ಆಲಿಸು; ಚರಿತ: ಕಥೆ; ಮುನಿ: ಋಷಿ; ನೃಪಾಲ: ರಾಜ; ಅರುಹು: ತಿಳಿಸು, ಹೇಳು; ಪೂರ್ವಾಪರ: ಹಿಂದು ಮುಂದು; ಸಂಗತಿ: ವಿಷಯ; ಭಾಳಡವಿ: ದೊಡ್ಡ ಕಾಡು; ಬಯಲು: ಬರಿದಾದ ಜಾಗ; ಖಗ: ಪಕ್ಷಿ; ಮೃಗ: ಪ್ರಾಣಿ; ಜಾಲ: ಗುಂಪು; ಸವೆ: ಉಂಟಾಗು; ಶೈಲ: ಬೆಟ್ಟ; ವಾಸ: ಜೀವಿಸು; ಅವನೀಶ: ರಾಜ; ಹೊರವಂಟ: ತೆರಳು;

ಪದವಿಂಗಡಣೆ:
ಕೇಳಲ್+ಅಷ್ಟಾವಕ್ರ +ಚರಿತವ
ಹೇಳಿದನು +ಲೋಮಶ +ಮುನೀಂದ್ರ +ನೃ
ಪಾಲಕಂಗ್+ಅರುಹಿದನು +ಪೂರ್ವಾಪರದ+ ಸಂಗತಿಯ
ಭಾಳಡವಿ+ ಬಯಲಾಯ್ತು +ಖಗ+ಮೃಗ
ಜಾಲ +ಸವೆದುದು +ಗಂಧಮಾದನ
ಶೈಲವನದಲಿ +ವಾಸವೆಂದ್+ಅವನೀಶ +ಹೊರವಂಟ

ಅಚ್ಚರಿ:
(೧) ಅಡವಿಯು ಬರಡಾಯಿತು ಎಂದು ಹೇಳಲು – ಭಾಳಡವಿ ಬಯಲಾಯ್ತು ಖಗಮೃಗ
ಜಾಲ ಸವೆದುದು

ಪದ್ಯ ೧೦: ಲೋಮಶ ಮುನಿಯು ಯಾವ ಕಥೆಯನ್ನು ಧರ್ಮಜನಿಗೆ ಹೇಳಿದರು?

ಬಳಿಕ ಲೋಮಶ ಸಹಿತ ನೃಪಕುಲ
ತಿಲಕ ಬಂದನಗಸ್ತ್ಯನಾಶ್ರಮ
ದೊಳಗೆ ಬಿಟ್ಟನು ಪಾಳೆಯವನಾ ಮುನಿಯಚರಿತವನು
ತಿಳುಹಿದನು ಲೋಮಶನು ವೃತ್ರನ
ಕಲಹಕೆಂದು ದಧೀಚಿ ಮುನಿಪತಿ
ಯೆಲುವನಮರರು ಬೇಡಿದುದನರುಹಿದನು ಜನಪತಿಗೆ (ಅರಣ್ಯ ಪರ್ವ, ೧೦ ಸಂಧಿ, ೧೦ ಪದ್ಯ)

ತಾತ್ಪರ್ಯ:
ನಂತರ ಲೋಮಶ ಮುನಿಯ ಜೊತೆ ಧರ್ಮರಾಯನು ಅಗಸ್ತ್ಯರ ಆಶ್ರಮಕ್ಕೆ ಬಂದು ಅಲ್ಲಿ ಬೀಡು ಬಿಟ್ಟನು. ಲೋಮಶನು ಅಗಸ್ತ್ಯನ ಚರಿತ್ರೆಯನ್ನು ಹೇಳಿದ ಬಳಿಕ ದಧೀಚಿಯ ಎಲುಬನ್ನು ದೇವತೆಗಳು ಬೇಡಿದ ಕಥೆಯನ್ನು ಹೇಳಿದನು.

ಅರ್ಥ:
ಬಳಿಕ: ನಂತರ; ಸಹಿತ: ಜೊತೆ; ನೃಪ: ರಾಜ; ಕುಲ: ವಂಶ; ತಿಲಕ: ಶ್ರೇಷ್ಠ; ನೃಪಕುಲತಿಲಕ: ಶ್ರೇಷ್ಠನಾದ ರಾಜ; ಆಶ್ರಮ: ಕುಟೀರ; ಪಾಳೆಯ: ಬೀಡು, ಶಿಬಿರ; ಮುನಿ: ಋಷಿ; ಚರಿತ: ವಿಚಾರ, ಕಥೆ; ತಿಳುಹು: ತಿಳಿಸು; ಕಲಹ: ಜಗಳ; ಮುನಿಪತಿ: ಋಷಿ; ಯೆಲುಬು: ಮೂಳೆ; ಅಮರ: ದೇವತೆ; ಬೇಡು: ಕೇಳು; ಅಉಹು: ತಿಳಿಸು; ಜನಪತಿ: ರಾಜ;

ಪದವಿಂಗಡಣೆ:
ಬಳಿಕ +ಲೋಮಶ +ಸಹಿತ +ನೃಪಕುಲ
ತಿಲಕ +ಬಂದನ್+ಅಗಸ್ತ್ಯನ್+ಆಶ್ರಮ
ದೊಳಗೆ +ಬಿಟ್ಟನು +ಪಾಳೆಯವನಾ+ ಮುನಿಯ+ಚರಿತವನು
ತಿಳುಹಿದನು +ಲೋಮಶನು +ವೃತ್ರನ
ಕಲಹಕೆಂದು +ದಧೀಚಿ +ಮುನಿಪತಿ
ಯೆಲುವನ್+ಅಮರರು +ಬೇಡಿದುದನ್+ಅರುಹಿದನು +ಜನಪತಿಗೆ

ಅಚ್ಚರಿ:
(೧) ಯುಧಿಷ್ಠಿರನನ್ನು ನೃಪಕುಲತಿಲಕ ಎಂದು ಕರೆದಿರುವುದು