ಪದ್ಯ ೮೨: ಅರ್ಜುನನು ಅಮರಾವತಿಯನ್ನು ಹೇಗೆ ಪ್ರವೇಶಿಸಿದನು?

ಹೊಕ್ಕನಮರಾವತಿಯನರ್ಜುನ
ಎಕ್ಕತುಳದಲುಪಾರ್ಜಿಸಿದಪು
ಣ್ಯಕ್ಕೆ ಸರಿಯೇ ನಳನಹುಷ ಭರತಾದಿ ಭೂಮಿಪರು
ಉಕ್ಕಿದವು ಪರಿಮಳದ ತೇಜದ
ತೆಕ್ಕೆಗಳು ಲಾವಣ್ಯ ಲಹರಿಯ
ಸೊಕ್ಕುಗಳ ಸುರಸೂಳೆಗೇರಿಗಳೊಳಗೆ ನಡೆ ತಂದ (ಅರಣ್ಯ ಪರ್ವ, ೮ ಸಂಧಿ, ೮೨ ಪದ್ಯ)

ತಾತ್ಪರ್ಯ:
ಅರ್ಜುನನು ಅಮರಾವತಿಯನ್ನು ಪ್ರವೇಶಿಸಿದನು. ತನ್ನ ಪರಾಕ್ರಮದಿಮ್ದ ಅವನು ಗಳಿಸಿದ ಪುಣ್ಯಕ್ಕೆ ಸರಿ ಸಮಾನವಾದುದು ಇಲ್ಲ. ನಳ ನಹುಷ ಭರತನೇ ಮೊದಲಾದವರ ಪುಣ್ಯವು ಇವನ ಪುಣ್ಯಕ್ಕೆ ಸಮವಲ್ಲ. ಅರ್ಜುನನು ಅಮರಾವತಿಯ ಸೂಳೆಕೇರಿಗಳಲ್ಲಿ ರಥದಲ್ಲಿ ಚಲಿಸಿದನು, ಅಲ್ಲಿ ಸುಗಂಧ, ಸೌಂದರ್ಯ ತೇಜದ ತೆಕ್ಕೆಗಳು ಲಾವಣ್ಯದ ತೆರೆಗಳು ಕೊಬ್ಬಿ ಕಂಗೊಳಿಸುತ್ತಿದ್ದವು.

ಅರ್ಥ:
ಹೊಕ್ಕು: ಸೇರು; ಎಕ್ಕತುಳ: ಪರಾಕ್ರಮ; ಆರ್ಜಿಸು: ಸಂಪಾದಿಸು; ಪುಣ್ಯ: ಸದಾಚಾರ; ಸರಿ: ಸಮಾನವಾದ; ಭೂಮಿಪ: ರಾಜ; ಉಕ್ಕು: ಸುರಿ; ಪರಿಮಳ: ಸುಗಂಧ; ತೇಜ: ಕಾಂತಿ; ತೆಕ್ಕೆ: ಗುಂಪು; ಲಾವಣ್ಯ: ಚೆಲುವು, ಸೌಂದರ್ಯ; ಲಹರಿ: ರಭಸ, ಆವೇಗ; ಸೊಕ್ಕು:ಅಮಲು, ಮದ; ಸುರ: ದೇವತೆ; ಸೂಳೆ: ವೇಶ್ಯೆ; ಕೇರಿ: ಬೀದಿ, ಓಣಿ; ನಡೆ: ಚಲಿಸು, ಹೋಗು;

ಪದವಿಂಗಡಣೆ:
ಹೊಕ್ಕನ್+ಅಮರಾವತಿಯನ್+ಅರ್ಜುನ
ಎಕ್ಕತುಳದಲು+ಪಾರ್ಜಿಸಿದ+ಪು
ಣ್ಯಕ್ಕೆ +ಸರಿಯೇ +ನಳ+ನಹುಷ+ ಭರತಾದಿ+ ಭೂಮಿಪರು
ಉಕ್ಕಿದವು+ ಪರಿಮಳದ +ತೇಜದ
ತೆಕ್ಕೆಗಳು +ಲಾವಣ್ಯ +ಲಹರಿಯ
ಸೊಕ್ಕುಗಳ+ ಸುರಸೂಳೆ+ಕೇರಿಗಳ್+ಒಳಗೆ +ನಡೆ ತಂದ

ಅಚ್ಚರಿ:
(೧) ಲಾವಣ್ಯ ಲಹರಿ, ಸೋಕ್ಕುಗಳ ಸುರಸೂಳೆಕೇರಿ; ಭರತಾದಿ ಭೂಮಿಪರು; ತೇಜದ ತೆಕ್ಕೆಗಳು – ಜೋಡಿ ಅಕ್ಷರದ ಪದಗಳು

ಪದ್ಯ ೪೭: ದೇವತೆಗಳು ದ್ರೌಪದಿಯನ್ನು ನೋಡಿ ಏನೆಂದು ಉದ್ಗರಿಸಿದರು?

ಚೆಲುವಿಕೆಯ ಚೈತನ್ಯವೋ ಪರಿ
ಮಳದ ಪುತ್ಥಳಿಯೋ ಲತಾಂಗಿಯ
ಸುಳಿವೊ ಲಾವಣ್ಯೈಕರಸ ಸಾಕಾರ ವಿಭ್ರಮವೋ
ಲಲಿತ ಶೃಂಗಾರಾಬ್ಧಿ ಮಥನೋ
ಚ್ಚಲಿತ ಸುಧೆಯೋ ಸಾಧಕರಿಗಿದು
ಫಲಿಸಿದರೆ ಕೃತಕೃತ್ಯರವರೆಂದುದು ಸುರಸ್ತೋಮ (ಆದಿ ಪರ್ವ, ೧೩ ಸಂಧಿ, ೪೭ ಪದ್ಯ)

ತಾತ್ಪರ್ಯ:
ರಾಜರು ಮಾತ್ರವಲ್ಲ ಆ ವೈಭವದ ಸಮಾರಂಭವನ್ನು ವೀಕ್ಷಿಸುತ್ತಿದ್ದ ದೇವತೆಗಳು ದ್ರೌಪದಿಯನ್ನು ಕಂಡು, ಈ ದ್ರೌಪದಿ ಚೈತನ್ಯ ಪಡೆದ ಸೌಂದರ್ಯದ ಸಾಕಾರ ಮೂರ್ತಿಯೋ, ಪರಿಮಳವನ್ನು ಬೀರುವ ಮೂರ್ತಿಯೋ, ಈ ಲತಾಂಗಿ (ಚೆಲುವೆ)ಯ ಸುಳಿವು ಲಾವಣ್ಯವೇ ಆಕಾರತಾಳಿ ವಿಲಾಸವನ್ನು ಬೀರುವ ಲಾವಣ್ಯವತಿಯೋ, ಚೆಲುವು ಶೃಂಗಾರದ ಸಮುದ್ರವನ್ನು ಕಡೆದಾಗ ಹೊರಬಂದ ಅಮೃತವೋ, ಇಂತಹ ಲಾವಣ್ಯವತಿಯನ್ನು ಪಡೆದವನು ನಿಜಕ್ಕು ಕೃತಕೃತ್ಯನು ಎಂದು ದೇವತೆಗಳ ಗುಂಪು ಉದ್ಗರಿಸಿತು.

ಅರ್ಥ:
ಚೆಲುವು: ಅಂದ, ಸೌಂದರ್ಯ; ಚೆಲುವಿಕೆ: ಚೆಲುವೆ, ಸೌಂದರ್ಯವತಿ; ಚೈತನ್ಯ: ಶಕ್ತಿ, ಚಲನೆ, ಸಾಮರ್ಥ್ಯ; ಪರಿಮಳ: ಸುಗಂಧ; ಪುತ್ಥಳಿ: ಪ್ರತಿಮೆ, ವಿಗ್ರಹ; ಲತಾಂಗಿ: ಕೋಮಲೆ; ಸುಳಿವು: ಕುರುಹು, ಗುರುತು; ಲಾವಣ್ಯ: ಚೆಲುವು, ಸೌಂದರ್ಯ; ರಸ: ಸಾರ, ಸುಧೆ; ಸಾಕಾರ: ಮನೋಹರವಾದ, ಸುಂದರವಾದ; ವಿಭ್ರಮ: ಸುತ್ತಾಟ, ಭ್ರಮೆ; ಲಲಿತ: ಚೆಲುವು, ಸೌಂದರ್ಯ; ಶೃಂಗಾರ: ಅಲಂಕಾರ, ಭೂಷಣ; ಅಬ್ಧಿ: ಸಮುದ್ರ; ಮಥನ: ಕಡೆಯುವುದು, ಮಂಥನ; ಉಚ್ಚಲ: ಚಿಮ್ಮುವ; ಸುಧೆ: ಅಮೃತ; ಸಾಧಕ: ಕಾರ್ಯವನ್ನು ಸಾಧಿಸುವ, ನಿಪುಣ; ಫಲ: ಫಲಿತಾಂಶ, ಹಣ್ಣು; ಕೃತಕೃತ್ಯ: ಸಫಲತೆಯನ್ನು ಪಡೆದವ; ಸುರ: ದೇವತೆ; ಸ್ತೋಮ: ಗುಂಪು;

ಪದವಿಂಗಡಣೆ:
ಚೆಲುವಿಕೆಯ +ಚೈತನ್ಯವೋ +ಪರಿ
ಮಳದ +ಪುತ್ಥಳಿಯೋ +ಲತಾಂಗಿಯ
ಸುಳಿವೊ+ ಲಾವಣ್ಯೈಕರಸ+ ಸಾಕಾರ+ ವಿಭ್ರಮವೋ
ಲಲಿತ+ ಶೃಂಗಾರ+ಅಬ್ಧಿ +ಮಥನೋ
ಚ್ಚಲಿತ +ಸುಧೆಯೋ+ ಸಾಧಕರಿಗಿದು
ಫಲಿಸಿದರೆ +ಕೃತಕೃತ್ಯರವರ್+ಎಂದುದು +ಸುರಸ್ತೋಮ

ಅಚ್ಚರಿ:
(೧) ಲಾವಣ್ಯ, ಚೆಲುವಿಕೆ, ಲತಾಂಗಿ, ಲಲಿತ – ಸಮಾನಾರ್ಥಕ ಪದಗಳು
(೨) ಜೋಡಿ ಪದಗಳು- “ಚ” -ಚೆಲುವಿಕೆಯ ಚೈತನ್ಯವೋ; “ಪ” – ಪರಿಮಳದ ಪುತ್ಥಳಿಯೋ; “ಸ” – ಸುಧೆಯೋ ಸಾಧಕರಿಗಿದು