ಜನನವೇ ಲಯಬೀಜ ಮರಣವೆ
ಜನನ ಬೀಜವು ತೋರಿ ಕೆಡುವೀ
ತನುವಿನಭಿರಂಜನೆಯ ಸೌಖ್ಯಕೆ ಮಾರದಿರು ಮನವ
ಘನಪರಂಜ್ಯೋತಿಸ್ವರೂಪದ
ನೆನಹ ಮರೆದೀ ಮೋಹಮಯ ಬಂ
ಧನದೊಳಗೆ ಮರುಳಹರೆ ಮಗನೇ ನಿನ್ನನರಿಯೆಂದ (ದ್ರೋಣ ಪರ್ವ, ೭ ಸಂಧಿ, ೨೫ ಪದ್ಯ)
ತಾತ್ಪರ್ಯ:
ವ್ಯಾಸರು ಉತ್ತರಿಸುತ್ತಾ, ಧರ್ಮಜ ಕೇಳು, ಹುಟ್ಟು ಸಾವಿಗೆ ಬೀಜ, ಸಾವು ಹುಟ್ಟಿನ ಬೀಜ, ತೋರಿ ಅಡಗುವ ದೇಹದ ರಂಜನೆಯ ಸೌಖ್ಯವನ್ನು ನೆಚ್ಚಿ ಕೆಡಬೇಡ. ಘನಪರಂಜ್ಯೋತಿ ಸ್ವರೂಪದ ಬ್ರಹ್ಮವನ್ನು ಧ್ಯಾನಿಸುವುದನ್ನು ಮರೆತು ಮೋಹದ ಬಂಧನಕ್ಕೆ ಮರುಳಾಗುವರೇ? ನೀನಾರು ಎನ್ನುವುದನ್ನು ವಿಚಾರಿಸಿ ಅರಿತುಕೋ ಎಂದು ಉಪದೇಶಿಸಿದರು.
ಅರ್ಥ:
ಜನನ: ಹುಟ್ಟು; ಲಯ: ನಾಶ; ಮರಣ: ಸಾವು; ಬೀಜ: ಉತ್ಪತ್ತಿ ಸ್ಥಾನ, ಮೂಲ; ತೋರು: ಕಾಣಿಸು; ಕೆಡುವು: ಹಾಳು; ತನು: ದೇಹ; ರಂಜನೆ: ಮೆರುಗು, ಕಾಂತಿ; ಸೌಖ್ಯ: ಸುಖ; ಮಾರು: ವಿಕ್ರಯಿಸು; ಮನ: ಮನಸ್ಸು; ಘನ: ಶ್ರೇಷ್ಠ; ಪರಂಜ್ಯೋತಿ: ದಿವ್ಯವಾದ ತೇಜಸ್ಸುಳ್ಳವನು, ಪರಮಾತ್ಮ; ಸ್ವರೂಪ: ನಿಜವಾದ ರೂಪ, ಸ್ವಂತ ಆಕೃತಿ; ನೆನಹು: ನೆನಪು; ಮರೆ: ನೆನಪಿನಿಂದ ದೂರವಾಗು; ಮೋಹ: ಪ್ರೀತಿ, ಭ್ರಾಂತಿ, ಭ್ರಮೆ; ಬಂಧನ: ಕಟ್ಟು, ಸಂಕೋಲೆ; ಮರುಳು: ಬುದ್ಧಿಭ್ರಮೆ, ಹುಚ್ಚು; ಅರಿ: ತಿಳಿ;
ಪದವಿಂಗಡಣೆ:
ಜನನವೇ +ಲಯ+ಬೀಜ +ಮರಣವೆ
ಜನನ+ ಬೀಜವು +ತೋರಿ +ಕೆಡುವ್
ಈ+ತನುವಿನ್+ಅಭಿರಂಜನೆಯ+ ಸೌಖ್ಯಕೆ +ಮಾರದಿರು +ಮನವ
ಘನ+ಪರಂಜ್ಯೋತಿ+ಸ್ವರೂಪದ
ನೆನಹ +ಮರೆದ್+ಈ+ ಮೋಹಮಯ +ಬಂ
ಧನದೊಳಗೆ+ ಮರುಳಹರೆ+ ಮಗನೇ +ನಿನ್ನನರಿಯೆಂದ
ಅಚ್ಚರಿ:
(೧) ಜನನ ಮರಣದ ಚಕ್ರವನ್ನು ವಿವರಿಸುವ ಪರಿ – ಜನನವೇ ಲಯಬೀಜ ಮರಣವೆ ಜನನ ಬೀಜವು
(೨) ವ್ಯಾಸರ ನುಡಿಮುತ್ತು – ಕೆಡುವೀತನುವಿನಭಿರಂಜನೆಯ ಸೌಖ್ಯಕೆ ಮಾರದಿರು ಮನವ; ಘನಪರಂಜ್ಯೋತಿಸ್ವರೂಪದನೆನಹ ಮರೆದೀ ಮೋಹಮಯ ಬಂಧನದೊಳಗೆ ಮರುಳಹರೆ