ಪದ್ಯ ೧೦೩: ಚಿತ್ರಸೇನನು ಊರ್ವಶಿಗೆ ಏನು ಹೇಳಿದನು?

ಆತನುತ್ತಮ ನಾಯಕನು ವಿ
ಖ್ಯಾತೆ ನೀ ಸುರಲೋಕದಲಿ ಲ
ಜ್ಜಾತಿಶಯವೇಕಿಲ್ಲಿ ನಾವೇ ನಿಮ್ಮ ಪರಿವಾರ
ಸೋತಡೆಯು ದಿಟಭಂಗವಲ್ಲ ಪು
ರಾತನದ ನಳನಹುಷ ಭರತ ಯ
ಯಾತಿ ನೃಪರೊಳಗೀತನಗ್ಗಳನಬಲೆ ಕೇಳೆಂದ (ಅರಣ್ಯ ಪರ್ವ, ೮ ಸಂಧಿ, ೧೦೩ ಪದ್ಯ)

ತಾತ್ಪರ್ಯ:
ಚಿತ್ರಸೇನನು ಅರ್ಜುನನು ಉತ್ತಮ ದೀರೋದಾತ್ತ ನಾಯಕ, ನೀಣು ಸ್ವರ್ಗದಲ್ಲಿ ಮಹಾ ಪ್ರಸಿದ್ಧೆಯಾಗಿರುವವಳು. ನಾವು ನಿಮ್ಮ ಪರಿವಾರದವರು, ನಾಚಿಕೆಯೇಕೆ? ಒಂದು ಪಕ್ಷ ಸೋತರೂ ಅವಮಾನವೇನೂ ಆಗುವುದಿಲ್ಲ, ಹಿಂದಿನ ನಳ, ನಹುಷ, ಭರತ, ಯಯಾತಿ ಇವರಿಗಿಂತಲೂ ಇವನು ಹೆಚ್ಚಿನವನು ಎಂದು ಊರ್ವಶಿಗೆ ಹೇಳಿದನು.

ಅರ್ಥ:
ಉತ್ತಮ: ಶ್ರೇಷ್ಠ; ನಾಯಕ: ಒಡೆಯ; ವಿಖ್ಯಾತ: ಪ್ರಸಿದ್ಧಿ; ಸುರಲೋಕ: ಸ್ವರ್ಗ; ಅತಿಶಯ: ಹೆಚ್ಚಳ, ಅಸಾಧಾರಣ ಮಹಿಮೆ; ಪರಿವಾರ: ಸುತ್ತಲಿನವರು, ಪರಿಜನ; ಸೋತು: ಪರಾಭವ; ದಿಟ: ಸತ್ಯ; ಭಂಗ: ಮುರಿ, ಚೂರು; ಪುರಾತನ: ಹಳೆಯದು; ನೃಪ: ರಾಜ; ಅಗ್ಗ: ಶ್ರೇಷ್ಠ; ಅಬಲೆ: ಸ್ತ್ರೀ, ಹೆಣ್ಣು; ಕೇಳು: ಆಲಿಸು; ಲಜ್ಜ: ನಾಚಿಕೆ;

ಪದವಿಂಗಡಣೆ:
ಆತನ್+ಉತ್ತಮ +ನಾಯಕನು +ವಿ
ಖ್ಯಾತೆ +ನೀ +ಸುರಲೋಕದಲಿ+ ಲಜ್ಜ
ಅತಿಶಯವೇಕಿಲ್ಲಿ +ನಾವೇ +ನಿಮ್ಮ +ಪರಿವಾರ
ಸೋತಡೆಯು +ದಿಟ+ಭಂಗವಲ್ಲ +ಪು
ರಾತನದ +ನಳ+ನಹುಷ+ ಭರತ+ ಯ
ಯಾತಿ +ನೃಪರೊಳಗ್+ಈತನ್+ಅಗ್ಗಳನ್+ಅಬಲೆ +ಕೇಳೆಂದ

ಅಚ್ಚರಿ:
(೧) ಅರ್ಜುನನ ಹಿರಿಮೆ – ನೃಪರೊಳಗೀತನಗ್ಗಳನಬಲೆ ಕೇಳೆಂದ