ಅರಸ ಕೇಳುಬ್ಬಿನಲಿ ಧೌಮ್ಯನ
ಧರಣಿಪನ ರೋಮಶನ ಭೀಮನ
ಚರಣದಲಿ ಮೈಯಿಕ್ಕಿ ಕೈಮುಗಿದೆರಗಿ ಮುನಿಜನಕೆ
ಹರಸಿದನು ಹೊರವಂಟ ನಕುಲಾ
ದ್ಯರನು ಮಧುರ ಪ್ರೀತಿ ವಚನ
ಸ್ಫುರದ ಮಂದ ಸ್ನೇಹದಲಿ ನೋಡಿದನು ಪರಿಜನವ (ಅರಣ್ಯ ಪರ್ವ, ೧೨ ಸಂಧಿ, ೨೩ ಪದ್ಯ)
ತಾತ್ಪರ್ಯ:
ಜನಮೇಜಯ ಕೇಳು, ಧೌಮ್ಯ, ಯುಧಿಷ್ಠಿರ, ರೋಮಶ, ಭೀಮರಿಗೆ ಬಹು ಸಂಭ್ರಮದಿಂದ ಅರ್ಜುನನು ನಮಸ್ಕರಿಸಿದನು. ಮುನಿಗಳಿಗೆ ಕೈಮುಗಿದು ವಂದಿಸಿದನು. ತನಗೆ ನಮಸ್ಕರಿಸಿದ ನಕುಲನೇ ಮೊದಲಾದವರನ್ನು ಹರಸಿದನು, ಮಧುರ ವಚನ ಪೂರ್ವಕ ಗಾಢ ಸ್ನೇಹದಿಂದ ಬಂಧುಜನರನ್ನು ನೋಡಿದನು.
ಅರ್ಥ:
ಅರಸ: ರಾಜ; ಕೇಳು: ಆಲಿಸು; ಉಬ್ಬು: ಹಿಗ್ಗು; ಧರಣಿಪ: ರಾಜ; ಚರಣ: ಪಾದ; ಮೈಯಿಕ್ಕು: ನಮಸ್ಕರಿಸು; ಕೈಮುಗಿ: ನಮಸ್ಕರಿಸು; ಮುನಿ: ಋಷಿ; ಹರಸು: ಆಶೀರ್ವದಿಸು; ಹೊರವಂಟು: ತೆರಳಿ; ಆದಿ: ಮುಂತಾದ; ಮಧುರ: ಸವಿ; ಪ್ರೀತಿ: ಒಲವು; ವಚನ: ನುಡಿ; ಮಂದ: ದಟ್ಟ, ಗಟ್ಟಿ; ಸ್ನೇಹ: ಮಿತ್ರ; ನೋಡು: ವೀಕ್ಷಿಸು; ಪರಿಜನ: ಬಂಧುಜನ;
ಪದವಿಂಗಡಣೆ:
ಅರಸ +ಕೇಳ್+ಉಬ್ಬಿನಲಿ +ಧೌಮ್ಯನ
ಧರಣಿಪನ +ರೋಮಶನ +ಭೀಮನ
ಚರಣದಲಿ+ ಮೈಯಿಕ್ಕಿ +ಕೈಮುಗಿದ್+ಎರಗಿ+ ಮುನಿಜನಕೆ
ಹರಸಿದನು +ಹೊರವಂಟ+ ನಕುಲಾ
ದ್ಯರನು+ ಮಧುರ +ಪ್ರೀತಿ +ವಚನ
ಸ್ಫುರದ +ಮಂದ +ಸ್ನೇಹದಲಿ +ನೋಡಿದನು +ಪರಿಜನವ
ಅಚ್ಚರಿ:
(೧) ಮೈಯಿಕ್ಕು, ಕೈಮುಗಿದೆರಗು – ಸಮನಾರ್ಥಕ ಪದ