ಮುರಮಥನ ಸಾತ್ಯಕಿ ಯುಧಿಷ್ಠಿರ
ಧರಣಿಪತಿ ನರ ಭೀಮ ಮಾದ್ರೇ
ಯರುಗಳೈವರ ಸಾರಥಿಗಳು ಯುಯುತ್ಸು ದಾರುಕರು
ತೆರಳಿತೇಳಕ್ಷೋಣಿಯ ನೃಪ
ರರಸಿಯರು ದ್ರೌಪದಿಯ ರೋದನ
ಸರದ ಗಾನದ ಜಠರತಾಡನ ತಾಳಮೇಳದಲಿ (ಗದಾ ಪರ್ವ, ೧೧ ಸಂಧಿ, ೨೮ ಪದ್ಯ)
ತಾತ್ಪರ್ಯ:
ಶ್ರೀಕೃಷ್ಣ, ಸಾತ್ಯಕಿ, ಪಾಂಡವರು ಅವರ ಸಾರಥಿಗಳು, ಯುಯುತ್ಸು, ದಾರುಕರು, ಪಾಂಡವರ ಏಳು ಅಕ್ಷೋಹಿಣೀ ಸೈನ್ಯದ ಸಮಸ್ತ ಕ್ಷತ್ರಿಯರ ಪತ್ನಿಯರೂ ರೋದನ ಗಾಯನ ಮಾಡುತ್ತಾ, ಹೊಟ್ಟೆಯನ್ನು ಬಡಿದುಕೊಳ್ಳುವುದೇ ತಾಳವನ್ನಾಗಿಸಿಕೊಂಡು ರಣರಂಗಕ್ಕೆ ಹೋದರು.
ಅರ್ಥ:
ಮುರಮಥನ: ಕೃಷ್ಣ; ಧರಣಿಪತಿ: ರಾಜ; ನರ: ಅರ್ಜುನ; ಸಾರಥಿ: ಸೂತ; ತೆರಳು: ಹೊರದು; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ನೃಪ: ರಾಜ; ಅರಸಿ: ರಾಣಿ; ರೋದನ: ಅಳಲು, ದುಃಖ; ಸರ: ಉಲಿ, ಧ್ವನಿ; ಗಾನ: ಹಾಡು; ಜಠರ: ಹೊಟ್ಟೆ; ತಾಡನ: ಹೊಡೆತ; ತಾಳ:ಅಳತೆ, ಗೇಣು; ಮೇಳ: ಗುಂಪು;
ಪದವಿಂಗಡಣೆ:
ಮುರಮಥನ +ಸಾತ್ಯಕಿ+ ಯುಧಿಷ್ಠಿರ
ಧರಣಿಪತಿ +ನರ +ಭೀಮ +ಮಾದ್ರೇ
ಯರುಗಳ್+ಐವರ +ಸಾರಥಿಗಳು +ಯುಯುತ್ಸು +ದಾರುಕರು
ತೆರಳಿತ್+ಏಳಕ್ಷೋಣಿಯ +ನೃಪರ್
ಅರಸಿಯರು +ದ್ರೌಪದಿಯ +ರೋದನ
ಸರದ +ಗಾನದ +ಜಠರತಾಡನ +ತಾಳಮೇಳದಲಿ
ಅಚ್ಚರಿ:
(೧) ರೂಪಕದ ಪ್ರಯೋಗ – ನೃಪರರಸಿಯರು ದ್ರೌಪದಿಯ ರೋದನ ಸರದ ಗಾನದ ಜಠರತಾಡನ ತಾಳಮೇಳದಲಿ