ಪದ್ಯ ೪೬: ಅರ್ಜುನನು ಯಾವುದನ್ನು ನೆನಪಿಸಲು ಹೇಳಿದನು?

ಅನಿಲಸುತ ಸಪ್ರಾಣಿಸಲಿ ರಿಪು
ಜನಪನೂರುವಿಭಂಗವೆ ಮು
ನ್ನಿನ ಪ್ರತಿಜ್ಞೆಯಲಾ ಸಭಾಮಧ್ಯದಲಿ ಕುರುಪತಿಯ
ನೆನಸಿಕೊಡಿ ಸಾಕಿನ್ನು ಬೇರೊಂ
ದನುನಯವು ತಾನೇನು ವಿಜಯಾಂ
ಗನೆಗೆ ದ್ರುಪದಕುಮಾರಿ ತಪ್ಪದೆ ಸವತಿಯಹಳೆಂದ (ಗದಾ ಪರ್ವ, ೭ ಸಂಧಿ, ೪೬ ಪದ್ಯ)

ತಾತ್ಪರ್ಯ:
ಅರ್ಜುನನು ನುಡಿಯುತ್ತಾ, ಭೀಮನು ಪ್ರಾಣ ಸಹಿತನಾಗಲಿ, ವೈರಿಯ ತೊಡೆಯನ್ನು ಮುರಿವೆನೆಂಬುದೇ ಪ್ರತಿಜ್ಞೆಯಲ್ಲವೇ? ಸಭೆಯ ನಡುವೆ ಭೀಮನು ಶಪಥಮಾಡಲಿಲ್ಲವೇ? ಅದನ್ನು ಭೀಮನಿಗೆ ನೆನಪಿಸಿರಿ. ದ್ರೌಪದಿಗೆ ವಿಜಯಲಕ್ಷ್ಮಿಯು ಸವತಿಯಾಗುತ್ತಾಳೆ ಎಂದನು.

ಅರ್ಥ:
ಅನಿಲಸುತ: ಭೀಮ; ಸಪ್ರಾಣಿ: ಪ್ರಾಣ ಸಹಿತ; ರಿಪು: ವೈರಿ; ಜನಪ: ರಾಜ; ನೂರು: ಶತ; ಭಂಗ: ಮುರಿಯುವಿಕೆ; ಮುನ್ನಿನ: ಮುಂಚೆ; ಪ್ರತಿಜ್ಞೆ: ಶಪಥ, ಪಣ; ಸಭೆ: ಪರಿಷತ್ತು, ಗೋಷ್ಠಿ; ಮಧ್ಯ: ನಡುವೆ; ನೆನಸು: ಜ್ಞಾಪಿಸಿಕೋ; ಸಾಕು: ತಡೆ; ಅನುನಯ: ನಯವಾದ ಮಾತುಗಳಿಂದ ಮನವೊಲಿಸುವುದು, ಪ್ರೀತಿ; ಕುಮಾರಿ: ಪುತ್ರಿ; ಸವತಿ: ತನ್ನ ಗಂಡನ ಇನ್ನೊ ಬ್ಬಳು ಹೆಂಡತಿ, ಸಪತ್ನಿ;

ಪದವಿಂಗಡಣೆ:
ಅನಿಲಸುತ +ಸಪ್ರಾಣಿಸಲಿ +ರಿಪು
ಜನಪನ್+ಊರು+ವಿಭಂಗವೆ +ಮು
ನ್ನಿನ +ಪ್ರತಿಜ್ಞೆಯಲಾ +ಸಭಾಮಧ್ಯದಲಿ+ ಕುರುಪತಿಯ
ನೆನಸಿಕೊಡಿ +ಸಾಕಿನ್ನು+ ಬೇರೊಂದ್
ಅನುನಯವು +ತಾನೇನು +ವಿಜಯಾಂ
ಗನೆಗೆ +ದ್ರುಪದಕುಮಾರಿ +ತಪ್ಪದೆ+ ಸವತಿಯಹಳೆಂದ

ಅಚ್ಚರಿ:
(೧) ಗೆಲ್ಲಲಿ ಎಂದು ಹೇಳುವ ಪರಿ – ವಿಜಯಾಂಗನೆಗೆ ದ್ರುಪದಕುಮಾರಿ ತಪ್ಪದೆ ಸವತಿಯಹಳೆಂದ