ಪದ್ಯ ೨೬: ಕರ್ಣನು ಯಾವ ಹೆಸರಿನಿಂದ ಪ್ರಖ್ಯಾತನಾದ?

ಆದರಿಸಿದನು ರಾಧೆಯಲಿ ಮಗ
ನಾದನೆಂದುತ್ಸವದ ಮಾಡಿ ಮ
ಹೀದಿವಿಜರನು ದಾನಮಾನಂಗಲಲಿ ಸತ್ಕರಿಸಿ
ಆ ದಿನಂ ಮೊದಲಾಗಿ ಉದ್ಭವ
ವಾದುದವನೈಶ್ವರ್ಯ ಉನ್ನತ
ವಾದನಾ ರವಿನಂದನನು ರಾಧೇಯ ನಾಮದಲಿ (ಆದಿ ಪರ್ವ, ೩ ಸಂಧಿ, ೨೬ ಪದ್ಯ)

ತಾತ್ಪರ್ಯ:
ಸೂತನ ಹೆಂಡತಿಯ ಹೆಸರು ರಾಧೆ, ರಾಧೆಗೆ ಮಗನು ಜನಿಸಿದನೆಂದು ಉತ್ಸವವನ್ನು ಮಾಡಿ, ಬ್ರಾಹ್ಮಣರನ್ನು ದಾನಾದಿಗಳಿಂದ ಸತ್ಕರಿಸಿದನು. ಅಂದಿನಿಂದ ಸೂತನ ಐಶ್ವರ್ಯವು ಅಭಿವೃದ್ಧಿ ಹೊಂದಿತು ಸೂರನ ಪುತ್ರನಾದ ಆ ಮಗನು ರಾಧೇಯನೆಂಬ ಹೆಸರಿನಿಂದ ಪ್ರಸಿದ್ಧನಾದನು.

ಅರ್ಥ:
ಆದರ: ಗೌರವ; ಮಗ: ಸುತ; ಉತ್ಸವ: ಸಂಭ್ರಮ; ಮಹೀದಿವಿಜ: ಬ್ರಾಹ್ಮಣ; ಮಹೀ: ಭೂಮಿ; ದಾನ: ನೀಡು; ಸತ್ಕರಿಸು: ಗೌರವಿಸು; ದಿನ: ವಾರ; ಉದ್ಭವ: ಹುಟ್ಟು; ಐಶ್ವರ್ಯ: ಸಂಪತ್ತು; ಉನ್ನತ: ಹೆಚ್ಚು; ರವಿ: ಸೂರ್ಯ; ನಂದನ: ಮಗ; ನಾಮ: ಹೆಸರು;

ಪದವಿಂಗಡಣೆ:
ಆದರಿಸಿದನು+ ರಾಧೆಯಲಿ +ಮಗ
ನಾದನೆಂದ್+ಉತ್ಸವದ+ ಮಾಡಿ +ಮ
ಹೀ+ದಿವಿಜರನು +ದಾನ+ಮಾನಂಗಳಲಿ +ಸತ್ಕರಿಸಿ
ಆ +ದಿನಂ +ಮೊದಲಾಗಿ +ಉದ್ಭವ
ವಾದುದ್+ಅವನ್+ಐಶ್ವರ್ಯ+ ಉನ್ನತ
ವಾದನಾ +ರವಿನಂದನನು +ರಾಧೇಯ +ನಾಮದಲಿ

ಅಚ್ಚರಿ:
(೧) ಮಗ, ನಂದನ – ಸಮಾನಾರ್ಥಕ ಪದ
(೨) ಮ ಕಾರದ ಸಾಲು ಪದ – ಮಗನಾದನೆಂದುತ್ಸವದ ಮಾಡಿ ಮಹೀದಿವಿಜರನು

ಪದ್ಯ ೨೦: ನಿನ್ನದೆಂಥ ಜೀವನವೆಂದು ಧರ್ಮಜನೇಕೆ ಹಂಗಿಸಿದನು?

ಜೀವಸಖ ರಾಧೇಯನಾತನ
ಸಾವಿನಲಿ ನೀನುಳಿದೆ ಸೋದರ
ಮಾವ ಶಕುನಿಯ ಸೈಂಧವನ ದುಶ್ಯಾಸನಾದಿಗಳ
ಸಾವಿನಲಿ ಹಿಂದುಳಿದ ಜೀವನ
ಜೀವನವೆ ಜೀವನನಿವಾಸವಿ
ದಾವ ಗರುವಿಕೆ ಕೊಳನ ಹೊರವಡು ಕೈದುಗೊಳ್ಳೆಂದ (ಗದಾ ಪರ್ವ, ೫ ಸಂಧಿ, ೨೦ ಪದ್ಯ)

ತಾತ್ಪರ್ಯ:
ನಿನ್ನ ಪ್ರಾಣ ಸ್ನೇಹಿತನಾದ ಕರ್ಣನು ಸತ್ತರೂ, ನೀನು ಬದುಕಿರುವೆ, ನಿನ್ನ ಸೋದರಮಾವ ಶಕುನಿ, ಮೈದುನ ಸೈಂಧವ, ತಮ್ಮ ದುಶ್ಯಾಸನ ಇವರೆಲ್ಲ ಸತ್ತರೂ ನೀನು ಬದುಕಿರುವೆ ಇಂತಹ ಜೀವನವು ಒಂದು ಜೀವನವೇ? ಇದೆಂಥ ಸ್ವಾಭಿಮಾನ ಹೀನತೆ? ಕೊಳವನ್ನು ಬಿಟ್ಟು ಹೊರಬಂದು ಆಯುಧವನ್ನು ಹಿಡಿ ಎಂದು ಪ್ರಚೋದಿಸಿದನು.

ಅರ್ಥ:
ಜೀವ: ಜೀವನ; ರಾಧೇಯ: ಕರ್ಣ; ಸಾವು: ಮರಣ; ಉಳಿ: ಬದುಕು; ಸೋದರಮಾವ: ತಾಯಿಯ ತಮ್ಮ; ಆದಿ: ಮುಂತಾದ; ನಿವಾಸ: ಆಲಯ; ಗರುವ: ಶ್ರೇಷ್ಠ; ಕೊಳ: ಸರಸಿ; ಹೊರವಡು: ಹೊರಗೆ ಬಾ; ಕೈದು: ಆಯುಧ;

ಪದವಿಂಗಡಣೆ:
ಜೀವಸಖ +ರಾಧೇಯನ್+ಆತನ
ಸಾವಿನಲಿ +ನೀನುಳಿದೆ +ಸೋದರ
ಮಾವ +ಶಕುನಿಯ +ಸೈಂಧವನ+ ದುಶ್ಯಾಸನಾದಿಗಳ
ಸಾವಿನಲಿ +ಹಿಂದುಳಿದ +ಜೀವನ
ಜೀವನವೆ +ಜೀವನ+ನಿವಾಸವ್
ಇದಾವ +ಗರುವಿಕೆ +ಕೊಳನ +ಹೊರವಡು +ಕೈದುಗೊಳ್ಳೆಂದ

ಅಚ್ಚರಿ:
(೧) ಜೀವನ ಪದದ ಬಳಕೆ – ಸಾವಿನಲಿ ಹಿಂದುಳಿದ ಜೀವನ ಜೀವನವೆ ಜೀವನನಿವಾಸವಿದಾವ ಗರುವಿಕೆ

ಪದ್ಯ ೪೦: ಯುಧಿಷ್ಠಿರನು ಯುದ್ಧವೇಕೆ ಸಾಮಾನ್ಯವೆಲ್ಲೆಂದ?

ಕಂದ ವೈರಿ ವ್ಯೂಹವಸದಳ
ವೆಂದೆನಿಪುದದರೊಳಗೆ ಕೃಪ ಗುರು
ನಂದನರು ರಾಧೇಯ ಭೂರಿಶ್ರವ ಜಯದ್ರಥರು
ಇಂದುಧರನಡಹಾಯ್ದರೊಮ್ಮಿಗೆ
ಹಿಂದು ಮುಂದೆನಿಸುವರು ನೀ ಗೆಲು
ವಂದವೆಂತೈ ಸಮರವಿದು ಸಾಮಾನ್ಯವಲ್ಲೆಂದ (ದ್ರೋಣ ಪರ್ವ, ೪ ಸಂಧಿ, ೪೦ ಪದ್ಯ)

ತಾತ್ಪರ್ಯ:
ಕಂದ ಅಭಿಮನ್ಯು, ಶತ್ರುಗಳು ಒಡ್ಡಿರುವ ವ್ಯೂಹವು ಭೇದಿಸಲು ಅಸಾಧ್ಯವೆನ್ನಿಸಿಕೊಳ್ಳುತ್ತದೆ. ಆ ವ್ಯೂಹದಲ್ಲಿ ಕೃಪ, ಅಶ್ವತ್ಥಾಮ, ಕರ್ಣ, ಭೂರಿಶ್ರವ, ಜಯದ್ರಥರು, ಶಿವನೇ ಒಮ್ಮೆ ಬಂದರೂ ಅವನು ಬೆನ್ನು ತಿರುಗಿಸುವಂತೆ ಮಾಡಬಲ್ಲರು, ನೀನು ಗೆಲ್ಲುವ ಬಗೆಯಾದರೂ ಯಾವುದು? ಇದು ಸಾಮಾನ್ಯ ಯುದ್ಧವಲ್ಲ ಎಂದು ಯುಧಿಷ್ಠಿರನು ಹೇಳಿದನು.

ಅರ್ಥ:
ಕಂದ: ಮಗು; ವೈರಿ: ಶತ್ರು; ವ್ಯೂಹ: ಸಮೂಹ; ದಳ: ಸೈನ್ಯ; ಗುರು: ಆಚಾರ್ಯ; ನಂದನ: ಮಗ; ರಾಧೇಯ: ಕೃಷ್ಣ; ಇಂದು: ಚಂದ್ರ; ಧರ: ಧರಿಸಿದವ; ಇಂದುಧರ: ಶಿವ; ಅಡಹಾಯ್ದು: ಅಡ್ಡ ಬಂದ; ಹಿಂದು: ಹಿಂಭಾಗ; ಗೆಲುವು: ಜಯ; ಸಮರ: ಯುದ್ಧ; ಸಾಮಾನ್ಯ: ಸಹಜ; ಅಸದಳ: ಅಸಾಧ್ಯ;

ಪದವಿಂಗಡಣೆ:
ಕಂದ +ವೈರಿ +ವ್ಯೂಹವ್+ಅಸದಳವ್
ಎಂದೆನಿಪುದ್+ಅದರೊಳಗೆ +ಕೃಪ +ಗುರು
ನಂದನರು +ರಾಧೇಯ +ಭೂರಿಶ್ರವ +ಜಯದ್ರಥರು
ಇಂದುಧರನ್+ಅಡಹಾಯ್ದರ್+ಒಮ್ಮಿಗೆ
ಹಿಂದು +ಮುಂದೆನಿಸುವರು +ನೀ +ಗೆಲು
ವಂದವ್+ಎಂತೈ +ಸಮರವಿದು+ ಸಾಮಾನ್ಯವಲ್ಲೆಂದ

ಅಚ್ಚರಿ:
(೧) ಪರಾಕ್ರಮಿಗಳ ಶೂರತ್ವ – ಇಂದುಧರನಡಹಾಯ್ದರೊಮ್ಮಿಗೆ ಹಿಂದು ಮುಂದೆನಿಸುವರು

ಪದ್ಯ ೩೯: ಭೀಷ್ಮರು ಕರ್ಣನನ್ನು ಹೇಗೆ ಜರೆದರು?

ಗಳಹದಿರು ರಾಧೇಯ ನಿನ್ನಯ
ಕುಲವನೋಡದೆ ಮೇರೆದಪ್ಪುವ
ಸಲುಗೆಯಿದಲೇ ಸ್ವಾಮಿಸಂಪತ್ತಿನ ಸಗಾಢತನ
ಕಲಿಗಳುಳಿದಂತೆನ್ನ ಸರಿಸಕೆ
ನಿಲುವನಾವನು ದೇವದಾನವ
ರೊಳಗೆ ನಿನ್ನೊಡನೊರಲಿ ಫಲವೇನೆಂದನಾ ಭೀಷ್ಮ (ಭೀಷ್ಮ ಪರ್ವ, ೧ ಸಂಧಿ, ೩೯ ಪದ್ಯ)

ತಾತ್ಪರ್ಯ:
ಎಲೈ ಕರ್ಣ, ಬಾಯಿಗೆ ಬಂದಂತೆ ಒದರಬೇಡ. ನಿನ್ನ ಕುಲವನ್ನು ನೋಡಿಕೊಳ್ಳದೆ, ಸ್ವಾಮಿಗೆ ಆಪ್ತನೆಂಬ ಸಲಗೆಯಿಂದ ಹೀಗೆ ಹೇಳುತ್ತಿರುವೆ, ದೇವತೆಗಳು, ದಾನವರಲ್ಲಿ ನನಗೆ ಸರಿಸಮಾನನಾದ ವೀರನು ಯಾರು? ನಿನ್ನೊಡನೆ ಸುಮ್ಮನೆ ಅರಚುವುದರಿಂದ ಏನು ಪ್ರಯೋಜನ ಎಂದು ಭೀಷ್ಮನು ಹೇಳಿದನು.

ಅರ್ಥ:
ಗಳಹು: ಪ್ರಲಾಪಿಸು, ಹೇಳು; ರಾಧೇಯ: ಕರ್ಣ; ಕುಲ: ವಂಶ; ನೋಡು: ತೋರು, ವೀಕ್ಷಿಸು; ಮೇರೆ: ಎಲ್ಲೆ, ಗಡಿ; ತಪ್ಪು: ಸರಿಯಿಲ್ಲದ; ಸಲುಗೆ: ಸದರ; ಸ್ವಾಮಿ: ಒಡೆಯ; ಸಂಪತ್ತು: ಐಶ್ವರ್ಯ; ಸಗಾಢ: ಜೋರು, ರಭಸ; ಕಲಿ: ಪರಾಕ್ರಮಿ; ಉಳಿ: ಜೀವಿಸು; ಸರಿಸಕೆ: ಸಮಾನ; ನಿಲುವ: ಎದುರು ನಿಲ್ಲುವ; ದೇವ: ಸುರರು; ದಾನವ: ರಾಕ್ಷಸ; ಒರಲು: ಅರಚು, ಕೂಗಿಕೊಳ್ಳು; ಫಲ: ಪ್ರಯೋಜನ;

ಪದವಿಂಗಡಣೆ:
ಗಳಹದಿರು+ ರಾಧೇಯ +ನಿನ್ನಯ
ಕುಲವ+ನೋಡದೆ +ಮೇರೆ +ತಪ್ಪುವ
ಸಲುಗೆಯಿದಲೇ+ ಸ್ವಾಮಿ+ಸಂಪತ್ತಿನ+ ಸಗಾಢತನ
ಕಲಿಗಳ್+ಉಳಿದಂತ್+ಎನ್ನ +ಸರಿಸಕೆ
ನಿಲುವನ್+ಆವನು +ದೇವ+ದಾನವ
ರೊಳಗೆ +ನಿನ್ನೊಡನ್+ಒರಲಿ +ಫಲವೇನೆಂದನಾ +ಭೀಷ್ಮ

ಅಚ್ಚರಿ:
(೧) ಸ ಕಾರದ ಸಾಲು ಪದ – ಸಲುಗೆಯಿದಲೇ ಸ್ವಾಮಿಸಂಪತ್ತಿನ ಸಗಾಢತನ

ಪದ್ಯ ೭೮: ವಿದುರನು ದುರ್ಯೋಧನನಿಗೆ ಏನೆಂದು ಎಚ್ಚರಿಸಿದನು?

ಮಣಿಯೆ ನೀನಿಲ್ಲೀಯನರ್ಥವ
ಕುಣಿಕೆಗೊಳಿಸಿದ ನೀ ಸಹಿತ ನಿ
ನ್ನೆಣೆಗಳಹ ಸೈಂಧವನನೀ ರಾಧೇಯ ಶಕುನಿಗಳ
ರಣದೊಳಗೆ ಭೀಮಾರ್ಜುನರ ಮಾ
ರ್ಗಣದ ಧಾರೆಗೆ ವೀರನಾರಾ
ಯಣನೆ ಸೇರಿಸಿಕೊಡುವನರಿದಿರುಯೆಂದನಾ ವಿದುರ (ಸಭಾ ಪರ್ವ, ೧೪ ಸಂಧಿ, ೭೮ ಪದ್ಯ)

ತಾತ್ಪರ್ಯ:
ಅಯ್ಯೋ ದುರ್ಯೋಧನ ನೀನು ನನ್ನ ಮಾತಿಗೆ ಬೆಲೆಕೊಡುವುದಿಲ್ಲ. ಈಗ ನಡೆಯುತ್ತಿರುವ ಅನರ್ಥಕ್ಕೆ ಕೊನೆಗೊಳಿಸದೆ ನಿಂತಿರುವ ನೀನು ಮತ್ತು ನಿನ್ನ ಸಹಚರರಾದ ಜಯದ್ರಥ, ಶಕುನಿ, ಕರ್ಣ, ನೀವೆಲ್ಲರೂ ಯುದ್ಧದಲ್ಲಿ ಭೀಮಾರ್ಜುನರ ಬಾಣಗಳಿಗೆ ಪರಮಾತ್ಮ ಶ್ರೀಕೃಷ್ಣನೇ ಬಲಿಕೊಡುತ್ತಾನೆ, ಇದನ್ನು ನೆನಪಿನಲ್ಲಿಟ್ಟುಕೋ ಎಂದು ವಿದುರನು ಕೋಪದಿಂದ ದುರ್ಯೋಧನನಿಗೆ ಹೇಳಿದನು.

ಅರ್ಥ:
ಮಣಿ: ಬಾಗು, ಬಗ್ಗು; ಅನರ್ಥ: ಕೇಡು; ಕುಣಿಕೆ: ಕೊನೆ, ತುದಿ; ಸಹಿತ: ಜೊತೆ; ಎಣೆ: ಸಮ, ಸಾಟಿ, ಜೊತೆ; ಸೈಂಧವ: ಜಯದ್ರಥ; ರಾಧೇಯ: ಕರ್ಣ; ರಣ: ಯುದ್ಧ; ಮಾರ್ಗಣ: ಬಾಣ, ಅಂಬು; ಧಾರೆ: ಪ್ರವಾಹ; ಸೇರಿಸು: ಜೊತೆಗೂಡು; ಅರಿ: ತಿಳಿ;

ಪದವಿಂಗಡಣೆ:
ಮಣಿಯೆ +ನೀನಿಲ್ಲ್+ಈ+ಅನರ್ಥವ
ಕುಣಿಕೆಗೊಳಿಸಿದ +ನೀ +ಸಹಿತ +ನಿನ್
ಎಣೆಗಳಹ+ ಸೈಂಧವನನ್+ಈ+ ರಾಧೇಯ +ಶಕುನಿಗಳ
ರಣದೊಳಗೆ+ ಭೀಮಾರ್ಜುನರ+ ಮಾ
ರ್ಗಣದ +ಧಾರೆಗೆ +ವೀರನಾರಾ
ಯಣನೆ +ಸೇರಿಸಿ+ಕೊಡುವನ್+ಅರಿದಿರು+ಎಂದನಾ+ ವಿದುರ

ಅಚ್ಚರಿ:
(೧) ನೀನಿಲ್ಲೀ, ನೀ, ನಿನ್ನೆಣೆ – ನೀ ಪದದ ಬಳಕೆ

ಪದ್ಯ ೨೬: ಕರ್ಣನ ಸಾವನ್ನು ದುರ್ಯೋಧನನು ಹೇಗೆ ದುಃಖಿಸಿದನು -೨?

ರಾಯ ಹಮ್ಮೈಸಿದನು ಹಾ ರಾ
ಧೇಯ ಹಾ ರಾಧೇಯ ಹಾ ರಾ
ಧೇಯ ಹಾ ಎನ್ನಾನೆ ಬಾರೈ ನಿನ್ನ ತೋರೆನುತ
ಬಾಯಬಿಟ್ಟುದು ಕಯ್ಯ ಕೈದುವ
ಹಾಯಿಕಿತು ಕಂಬನಿಯ ಕಡಲೊಳು
ಹಾಯಿದೆದ್ದುದು ಹೊರಳುತಿರ್ದುದು ಕೂಡೆ ಪರಿವಾರ (ಕರ್ಣ ಪರ್ವ, ೨೭ ಸಂಧಿ, ೨೬ ಪದ್ಯ)

ತಾತ್ಪರ್ಯ:
ಕರ್ಣನ ಸಾವು ದುರ್ಯೋಧನನಿಗೆ ಬಹಳ ದುಃಖವು ತಂದಿತು, ಅವನು ಗೋಳಾಡುತ್ತ, ಹಾ ಕರ್ಣಾ ಹಾ ರಾಧೇಯ ಹಾ ರಾಧೇಯ, ನನ್ನ ಬಲವೇ, ನನ್ನ ತಂದೆ, ಮೇಲೇಳು, ನನ್ನ ಮುಂದೆ ಕಾಣಿಸಿಕೋ ಎಂದು ಹೇಳುತ್ತಿರಲು ಉಳಿದ ಪರಿವಾರದವರು ಅವರ ಕೈಯಲ್ಲಿದ್ದ ಆಯುಧಗಳನ್ನು ಕೆಳಕ್ಕೆಸೆದು ಬಾಯಿ ಬಾಯಿ ಬಿಟ್ಟು ಕಣ್ಣೀರಿನ ಸಾಗರದಲ್ಲಿ ಹೊರಳಾಡಿದರು.

ಅರ್ಥ:
ರಾಯ: ರಾಜ, ಒಡೆಯ; ಹಮ್ಮೈಸು: ಗೋಳಾಡು, ದುಃಖಿಸು, ಮೂರ್ಛೆ ಹೋಗು; ರಾಧೇಯ: ಕರ್ಣ; ಎನ್ನಾನೆ: ನನ್ನ ಶಕ್ತಿಯೇ; ಬಾರೈ: ಬಾ, ಆಗಮಿಸು; ತೋರು: ಪ್ರಕಟಿಸು; ಬಾಯಿ: ಮುಖದ ಅಂಗ; ಬಿಟ್ಟು: ತೆರೆದು; ಕಯ್ಯ: ಹಸ್ತ; ಕೈದು: ಆಯುಧ; ಹಾಯಿಕು: ಎಸೆ, ಹೊರಹಾಕು; ಕಂಬನಿ: ಕಣ್ಣೀರು; ಕಡಲು: ಸಾಗರ; ಹಾಯಿ: ಮೇಲೆಬೀಳು, ಚಾಚು; ಎದ್ದು: ಮೇಲೇಳು; ಹೊರಳು: ಉರುಳಾದು; ಕೂಡೆ: ಜೊತೆ; ಪರಿವಾರ: ಸಂಬಂಧಿಕರು;

ಪದವಿಂಗಡಣೆ:
ರಾಯ +ಹಮ್ಮೈಸಿದನು +ಹಾ +ರಾ
ಧೇಯ +ಹಾ +ರಾಧೇಯ+ ಹಾ +ರಾ
ಧೇಯ +ಹಾ +ಎನ್ನಾನೆ+ ಬಾರೈ +ನಿನ್ನ+ ತೋರೆನುತ
ಬಾಯಬಿಟ್ಟುದು+ ಕಯ್ಯ+ ಕೈದುವ
ಹಾಯಿಕಿತು +ಕಂಬನಿಯ +ಕಡಲೊಳು
ಹಾಯಿದ್+ಎದ್ದುದು+ ಹೊರಳುತಿರ್ದುದು +ಕೂಡೆ +ಪರಿವಾರ

ಅಚ್ಚರಿ:
(೧) ರಾಧೇಯ – ೩ ಬಾರಿ ಪ್ರಯೋಗ
(೨) ನೋವನ್ನು ಚಿತ್ರಿಸಲು ಹಾ ಪದದ ಬಳಕೆ
(೩) ದುಃಖದ ಅಪಾರತೆಯನ್ನು ಹೇಳಲು – ಕಂಬನಿಯ ಕಡಲೊಳು ಹಾಯಿದೆದ್ದುದು ಹೊರಳುತಿರ್ದುದು

ಪದ್ಯ ೩೭: ಕರ್ಣನು ಅಶ್ವಸೇನ ಸರ್ಪನಿಗೆ ಏನು ಹೇಳಿದ?

ಅರಿಯೆ ನಾ ನೀನೆಂದು ಲೋಗರ
ಮರೆಯಲರಿಗಳ ಗೆಲುವ ಕರ್ಣನೆ
ಯರಿಯಲಾ ನೀನೆನ್ನ ಹವಣನು ತೊಡುವುದಿಲ್ಲೆನಲು
ಮರುಗಿದನು ಶಲ್ಯನು ನೃಪಾಲನ
ನಿರಿದೆಯೋ ರಾಧೇಯ ನೀನೆಂ
ದುರುಬೆಯಲಿ ಕೋಪಿಸುತ ಕರ್ಣನ ಬಯ್ದು ಗಜರಿದನು (ಕರ್ಣ ಪರ್ವ, ೨೫ ಸಂಧಿ, ೩೭ ಪದ್ಯ)

ತಾತ್ಪರ್ಯ:
ಕರ್ಣನು ಅಶ್ವಸೇನ ಸರ್ಪರಾಜನನ್ನು ಉದ್ದೇಶಿಸುತ್ತಾ, ನನಗೆ ನೀನಾರೆಂದು ತಿಳಿದಿರಲಿಲ್ಲ. ಈ ಕರ್ಣನು ಜನರ ಮರೆಯಲ್ಲಿ ನಿಂತು ಶತ್ರುಗಳನ್ನು ಕೊಲ್ಲುವವನಲ್ಲ. ನಿನ್ನನ್ನು ನಾನು ಮತ್ತೆ ತೊಡುವುದಿಲ್ಲ ಎಂದನು. ಇದನ್ನು ಕೇಳಿದ ಶಲ್ಯನು ಅತೀವ ಸಂಕಟಪಟ್ಟು, ಕರ್ಣ ನೀನು ದುರ್ಯೋಧನನನ್ನು ಕೊಂದೆ, ಎಂದು ಕೋಪಿಸುತ್ತ ಕರ್ಣನನ್ನು ಗದರಿ ಬಯ್ದನು.

ಅರ್ಥ:
ಅರಿ: ತಿಳಿ; ಲೋಗರ:ಜನತೆ, ಸಾಮಾನ್ಯ; ಮರೆ: ಗುಟ್ಟು, ರಹಸ್ಯ; ಅರಿ: ವೈರಿ; ಗೆಲುವ: ಜಯಿಸುವ; ಅರಿ: ಹವಣ: ಸಿದ್ಧತೆ, ಉಪಾಯ; ತೊಡು: ಧರಿಸು; ಮರುಗು: ತಳಮಳ, ಸಂಕಟ; ನೃಪಾಲ: ರಾಜ; ಇರಿ: ಚುಚ್ಚು; ಉರುಬು:ಅತಿಶಯವಾದ ವೇಗ; ಕೋಪ: ಸಿಟ್ಟುಗೊಳ್ಳು; ಬಯ್ದು: ಜರಿದು; ಗದರು: ಅಬ್ಬರಿಸು, ಗರ್ಜಿಸು;

ಪದವಿಂಗಡಣೆ:
ಅರಿಯೆ +ನಾ +ನೀನೆಂದು +ಲೋಗರ
ಮರೆಯಲ್+ಅರಿಗಳ +ಗೆಲುವ +ಕರ್ಣನೆ
ಅರಿಯಲಾ +ನೀನೆನ್ನ +ಹವಣನು+ ತೊಡುವುದಿಲ್+ಎನಲು
ಮರುಗಿದನು +ಶಲ್ಯನು +ನೃಪಾಲನನ್
ಇರಿದೆಯೋ +ರಾಧೇಯ +ನೀನೆಂದ್
ಉರುಬೆಯಲಿ +ಕೋಪಿಸುತ +ಕರ್ಣನ +ಬಯ್ದು +ಗಜರಿದನು

ಅಚ್ಚರಿ:
(೧) ಕರ್ಣನ ದಿಟ್ಟ ನುಡಿ: ಲೋಗರ ಮರೆಯಲರಿಗಳ ಗೆಲುವ ಕರ್ಣನೆ ಯರಿಯಲಾ
(೨) ಶಲ್ಯನ ಕೋಪದ ನುಡಿ: ನೃಪಾಲನನಿರಿದೆಯೋ ರಾಧೇಯ

ಪದ್ಯ ೩೩: ಧರ್ಮಜನ ನೀರಸವಾದ ಪ್ರತಿಕ್ರಿಯೆ ಹೇಗಿತ್ತು?

ಬರಿದೆ ಬಯಸಿದಡಹುದೆ ರಾಜ್ಯದ
ಹೊರಿಗೆಯನು ನಿಶ್ಯಂಕೆಯಲಿ ಹೊ
ಕ್ಕಿರಿದು ಬಹ ಸತ್ವಾತಿಶಯ ಬೇಹುದು ರಣಾಗ್ರದಲಿ
ಇರಿದು ಮೇಣ್ ರಿಪುರಾಯರನು ಕು
ಕ್ಕುರಿಸುವರೆ ರಾಧೇಯನಂತಿರ
ಲುರುವನೊಬ್ಬನೆ ಬೇಹುದಲ್ಲದಡಿಲ್ಲ ಜಯವೆಂದ (ಕರ್ಣ ಪರ್ವ, ೧೬ ಸಂಧಿ, ೩೩ ಪದ್ಯ)

ತಾತ್ಪರ್ಯ:
ರಾಜ್ಯಭಾರ ಬೇಕೆಂದು ಬಯಸಿದ ಮಾತ್ರದಿಂದ ಅದು ಸಿಕ್ಕೀತೇ? ಶತ್ರುಸೈನ್ಯದಲ್ಲಿ ಹೊಕ್ಕು ಕಾದಿ ಗೆದ್ದು ಬರುವ ಅತಿಶಯಸತ್ವವಿದ್ದರೆ ಮಾತ್ರ ಅದು ಸಾಧ್ಯ. ಶತ್ರುಗಳನ್ನಿರಿದು ಸೋಲಿಸುವ ಸಾಮರ್ಥ್ಯವಿರುವ ಕರ್ಣನಂತಹ ಮಹಾವೀರರೇ ಬೇಕು. ಇಲ್ಲದಿದ್ದರೆ ಜಯವೂ ಇಲ್ಲ, ರಾಜ್ಯವೂ ಇಲ್ಲ ಎಂದು ನಿರಾಶೆಯಿಂದ ಧರ್ಮಜನು ನುಡಿದನು.

ಅರ್ಥ:
ಬರಿದೆ: ಕೇವಲ; ಬಯಸು: ಆಸೆಪಡು; ರಾಜ್ಯ: ರಾಷ್ಟ್ರ; ಹೊರಿಗೆ:ಭಾರ, ಹೊರೆ; ನಿಶ್ಯಂಕ: ಅನುಮಾನವಿಲ್ಲದ; ಹೋಕ್ಕು: ಒಳಹೋಗು, ಸೇರು; ಬಹ: ಬಹಳ; ಸತ್ವ: ಸಾರ; ಅತಿಶಯ: ಹೆಚ್ಚು, ಅಧಿಕ; ಬೇಹುದು: ಇರಬೇಕು; ರಣಾಗ್ರ: ಯುದ್ಧರಂಗ; ಇರಿ: ಚುಚ್ಚು; ಮೇಣ್: ಅಥವಾ; ರಿಪುರಾಯ: ವೈರಿ ರಾಜ; ಕುಕ್ಕುರಿಸು: ಸೋಲಿಸು; ರಾಧೇಯ: ಕರ್ಣ; ಉರು: ಶ್ರೇಷ್ಠವಾದ; ಬೇಹುದು: ಬೇಕು; ಜಯ: ಗೆಲುವು;

ಪದವಿಂಗಡಣೆ:
ಬರಿದೆ +ಬಯಸಿದಡ್+ಅಹುದೆ +ರಾಜ್ಯದ
ಹೊರಿಗೆಯನು +ನಿಶ್ಯಂಕೆಯಲಿ +ಹೊ
ಕ್ಕಿರಿದು +ಬಹ +ಸತ್ವಾತಿಶಯ +ಬೇಹುದು +ರಣಾಗ್ರದಲಿ
ಇರಿದು+ ಮೇಣ್ +ರಿಪು+ರಾಯರನು+ ಕು
ಕ್ಕುರಿಸುವರೆ +ರಾಧೇಯನಂತಿರಲ್
ಉರುವನ್+ಒಬ್ಬನೆ +ಬೇಹುದ್+ಅಲ್ಲದಡ್+ಇಲ್ಲ +ಜಯವೆಂದ

ಅಚ್ಚರಿ:
(೧) ಬರಿ, ಇಲಿ, ಹೊಕ್ಕಿರಿ, ಕುಕ್ಕುರಿ – ಪ್ರಾಸ ಪದಗಳು
(೨) ಕರ್ಣನ ಪರಾಕ್ರಮವನ್ನು ವರ್ಣಿಸುವ ಪರಿ – ರಿಪುರಾಯರನು ಕುಕ್ಕುರಿಸುವರೆ ರಾಧೇಯನಂತಿರಲ್
(೩) ಆಡು ಮಾತಿನ ಶಬ್ದ ಪ್ರಯೋಗ – ಕುಕ್ಕರಿಸು, ಇರಿ

ಪದ್ಯ ೨೨: ಧರ್ಮಜನು ಕರ್ಣನ ವೀರತನದ ಬಗ್ಗೆ ಹೇಗೆ ನುಡಿದನು?

ಏನ ಹೇಳುವೆನೆನ್ನ ದಳದಲಿ
ತಾನು ಭೀಮನ ಥಟ್ಟಿನಲಿ ಬಳಿ
ಕೀ ನಕುಲ ಸಹದೇವ ಸಾತ್ಯಕಿ ದ್ರುಪದರೊಡ್ಡಿನಲಿ
ಮಾನನಿಧಿ ರಾಧೇಯನತ್ತಲು
ತಾನೆ ತನುಮಯವಾಯ್ತು ಪಾಂಡವ
ಸೇನ ಬಡ ಸಾಹಸಿಕರೆಣೆಯೇ ಸೂತತನಯಂಗೆ (ಕರ್ಣ ಪರ್ವ, ೧೬ ಸಂಧಿ, ೨೨ ಪದ್ಯ)

ತಾತ್ಪರ್ಯ:
ಅರ್ಜುನ ನಾನು ಏನೆಂದು ಹೇಳಲಿ, ನನ್ನ ಸೇನೆಯ ಜೊತೆ, ಭೀಮನ ಸೈನ್ಯದೆದುರು, ಸಹದೇವ, ಸಾತ್ಯಕಿ ದ್ರುಪದರ ದಳಗಳ ವಿರುದ್ಧ, ಎಲ್ಲಿ ನೋಡಿದರೂ ಅಲ್ಲಿ ಕರ್ಣನೇ ಕಾಣುತ್ತಿದ್ದನು, ಪಾಂಡವ ಸೇನೆಯ ಅಲ್ಪ ವೀರರು ಅವನಿಗೆ ಸರಿಸಮಾನರೇ ಎಂದು ಕರ್ಣನ ಪರಾಕ್ರಮವನ್ನು ಅರ್ಜುನನೆದುರು ಧರ್ಮಜನು ಹೇಳಿದ.

ಅರ್ಥ:
ಹೇಳು: ತಿಳಿಸು; ದಳ: ಸೈನ್ಯ; ಥಟ್ಟು: ಗುಂಪು; ಬಳಿಕ: ನಂತರ; ಒಡ್ಡು: ಸೈನ್ಯ, ಪಡೆ; ಮಾನ: ಮರ್ಯಾದೆ, ಗೌರವ; ನಿಧಿ: ಸಂಪತ್ತು; ರಾಧೇಯ: ಕರ್ಣ; ತನು: ದೇಹ; ಮಯ: ತುಂಬು; ಬಡ: ದುರ್ಬಲ; ಸಾಹಸಿಕ: ಪರಾಕ್ರಮಿ; ಎಣೆ: ಸಮಾನ; ಸೂತ: ರಥವನ್ನು ಓಡಿಸುವವ; ತನಯ: ಮಗ;

ಪದವಿಂಗಡಣೆ:
ಏನ +ಹೇಳುವೆನ್+ಎನ್ನ +ದಳದಲಿ
ತಾನು +ಭೀಮನ +ಥಟ್ಟಿನಲಿ +ಬಳಿ
ಕೀ+ ನಕುಲ +ಸಹದೇವ+ ಸಾತ್ಯಕಿ+ ದ್ರುಪದರ್+ಒಡ್ಡಿನಲಿ
ಮಾನನಿಧಿ +ರಾಧೇಯನ್+ಅತ್ತಲು
ತಾನೆ +ತನುಮಯವಾಯ್ತು +ಪಾಂಡವ
ಸೇನ+ ಬಡ+ ಸಾಹಸಿಕರ್+ಎಣೆಯೇ +ಸೂತತನಯಂಗೆ

ಅಚ್ಚರಿ:
(೧) ಸೂತತನಯ, ಮಾನನಿಧಿ, ರಾಧೇಯ – ಕರ್ಣನಿಗೆ ಬಳಸಿದ ಪದಗಳು
(೨) ದಳ, ಥಟ್ಟು, ಒಡ್ಡು – ಸಾಮ್ಯಾರ್ಥ ಪದಗಳು

ಪದ್ಯ ೪೩: ಶಲ್ಯನು ಕರ್ಣನಿಗೆ ಯಾರನ್ನು ಕೊಲ್ಲಲು ಹೇಳಿದನು?

ಅಕಟಕಟ ರಾಧೇಯ ಕೇಳೀ
ನಕುಳನೀ ಸಹದೇವನೀ ಸಾ
ತ್ಯಕಿ ನರೇಶ್ವರರೆನಿಸುವೀ ಕುಂತೀಕುಮಾರಕರು
ಅಕುಟಿಲರು ನಯಕೋವಿದರು ಧಾ
ರ್ಮಿಕರ ಕೊಲಬೇಡಿವರನತಿ ಬಾ
ಧಕರು ಭೀಮಾರ್ಜುನರ ಸಂಹರಿಸೆಂದನಾ ಶಲ್ಯ (ಕರ್ಣ ಪರ್ವ, ೧೩ ಸಂಧಿ, ೪೩ ಪದ್ಯ)

ತಾತ್ಪರ್ಯ:
ಕರ್ಣನು ನಕುಲ, ಸಹದೇವ, ಸಾತ್ಯಕಿ, ಯುಧಿಷ್ಠಿರರ ಮೇಲೆ ದಾಳಿ ಮಾಡುತ್ತಿದುದನ್ನು ನೋಡಿದ ಶಲ್ಯನು ಅಯ್ಯೋ, ಕರ್ಣ ಇವರೆಲ್ಲರೂ ನೀತಿವಂತರು, ಕುಟಿಲತೆಯನ್ನರಿಯದವರು, ಧರ್ಮಮಾರ್ಗದಲ್ಲಿ ನಡೆಯುವವರು, ಇವರನ್ನು ಕೊಲ್ಲಬೇಡ, ಭೀಮಾರ್ಜುನರಿಬ್ಬರೇ ನಮಗೆ ಬಾಧಕರು, ಅವರನ್ನು ಸಂಹರಿಸು ಎಂದು ಕರ್ಣನಿಗೆ ಶಲ್ಯನು ಹೇಳಿದನು

ಅರ್ಥ:
ಅಕಟಕಟ: ಅಯ್ಯೋ; ನರೇಶ: ರಾಜ; ಅಕುಟಿಲ: ಸಾತ್ವಿಕರು, ಕುಟಿಲತೆಯನ್ನರಿಯದವರು; ನಯ: ಶಾಸ್ತ್ರ, ಮೃದುತ್ವ; ಕೋವಿದ; ಪಂಡಿತ; ಧಾರ್ಮಿಕ: ಧರ್ಮ ಮಾರ್ಗಿಗಳು; ಕೊಲು: ಸಾಯಿಸು; ಅತಿ: ಬಹಳ; ಬಾಧಕ: ತೊಂದರೆ; ಸಂಹರಿಸು: ಸಾಯಿಸು;

ಪದವಿಂಗಡಣೆ:
ಅಕಟಕಟ +ರಾಧೇಯ +ಕೇಳ್+ ಈ
ನಕುಳನ್+ಈ+ ಸಹದೇವನ್+ಈ+ ಸಾ
ತ್ಯಕಿ +ನರೇಶ್ವರರ್+ಎನಿಸುವ್+ಈ+ ಕುಂತೀ+ಕುಮಾರಕರು
ಅಕುಟಿಲರು+ ನಯಕೋವಿದರು +ಧಾ
ರ್ಮಿಕರ+ ಕೊಲಬೇಡಿವರನ್+ಅತಿ+ ಬಾ
ಧಕರು +ಭೀಮಾರ್ಜುನರ +ಸಂಹರಿಸೆಂದನಾ +ಶಲ್ಯ

ಅಚ್ಚರಿ:
(೧) ಅಕುಟಿಲ, ನಯಕೋವಿದ, ಧಾರ್ಮಿಕ – ಗುಣಗಾನ ಪದಗಳು